ಶಿಸ್ತಿಲ್ಲದವರು, ಪಕ್ಷ ಹಿತಾಸಕ್ತಿಗಳಿಗೆ ಧಕ್ಕೆ ತರುವವರನ್ನು ವಾಪಸ್ಸು ಕರೆಯುವ ಪ್ರಶ್ನೆಯೇ ಇಲ್ಲ: ರಾಧಾ ಮೋಹನ್ ದಾಸ್

Updated on: Jun 25, 2025 | 8:40 PM

ಬಿಜೆಪಿಯಲ್ಲಿ ಬಸನಗೌಡ ಯತ್ನಾಳ್ ಮತ್ತು ಈಶ್ವರಪ್ಪಗಿರುವ ಸ್ಥಾನಮಾನ ಇದು. ಯತ್ನಾಳ್​ರಾದರೋ, ಪಕ್ಷದ ಹಿರಿಯರು ತನ್ನ ಸಂಪರ್ಕದಲ್ಲಿದ್ದಾರೆ, ತನ್ನೊಂದಿಗೆ ಮಾತಾಡುತ್ತಿರುತ್ತಾರೆ ಅನ್ನುತ್ತಿರುತ್ತಾರೆ. ಈಶ್ವರಪ್ಪ ಪಕ್ಷದ ಶುದ್ಧೀಕರಣ ಆಗದ ಹೊರತು ಬಿಜೆಪಿಗೆ ಹೋಗಲಾರೆ ಎನ್ನುತ್ತಾರೆ. ಅವರಿಬ್ಬರು ಹೇಳೋದು ಗಮನಿಸಿದರೆ, ಪಕ್ಷಕ್ಕೆ ವಾಪಸ್ಸು ಕರೆಸಿಕೊಳ್ಳಲು ವರಿಷ್ಠರು ತುದಿಗಾಲಲ್ಲಿ ನಿಂತಿದ್ದಾರೆ ಎನ್ನುವಂತಿರುತ್ತದೆ.

ಮಂಗಳೂರು, ಜೂನ್ 25: ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕೆಎಸ್ ಈಶ್ವರಪ್ಪ ಅವರನ್ನು ಪಕ್ಷಕ್ಕೆ ವಾಪಸ್ಸು ಕರೆಯಲಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ಬಿಜೆಪಿ ಮತ್ತು ಆ ನಾಯಕರ ನಡುವೆ ಸಂಬಂಧವೇ ಇಲ್ಲ ಎನ್ನುವಂತೆ ಮಾತಾಡಿದರು. ಅವರು ಯಾವ ಪಕ್ಷದಲ್ಲಿ ಇದ್ದಾರೋ ಗೊತ್ತಿಲ್ಲ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು, ಪಕ್ಷದ ಹಿತಾಸಕ್ತಿಗಳಿಗೆ ಧಕ್ಕೆ ತಂದವರನ್ನು ಪಕ್ಷಕ್ಕೆ ವಾಪಸ್ಸು ಕರೆಯುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ರಾಧಾ ಮೋಹನ್ ದಾಸ್ ಹೇಳಿದರು. ನಮ್ಮದು ಬಹಳ ದೊಡ್ಡ ಮತ್ತು ಕಾರ್ಯಕರ್ತರ ಮೇಲೆ ಅವಲಂಬಿತವಾಗಿರುವ ಪಕ್ಷ, ಶಿಸ್ತಿಲ್ಲದ ರಾಜಕಾರಣಿಗಳ ಅವಶ್ಯಕತೆ ನಮಗಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ:  ಯತ್ನಾಳ್ ವಿಚಾರ ಬಿಡಿ, ನೀವು ಮಾಡಿದ್ದೇನು?; ಬೆಂಗಳೂರಿನಲ್ಲಿ ಬಿಜೆಪಿ ಶಾಸಕರಿಗೆ ರಾಧಾಮೋಹನ್ ದಾಸ್ ಕ್ಲಾಸ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ