ಕಲಬುರಗಿ, ಜನವರಿ 10: ಮಕ್ಕಳನ್ನು ಪ್ರವಾಸಕ್ಕೆ (Trip) ಬಸ್ಸು ಅಥವಾ ರೈಲಿನಲ್ಲಿ ಕರೆದುಕೊಂಡು ಹೋಗುವುದು ಸಾಮಾನ್ಯ. ಆದರೆ ಈ ಮುಖ್ಯೋಪಾಧ್ಯಾಯರು (Headmaster) ಮಕ್ಕಳನ್ನು ಪ್ರವಾಸಕ್ಕೆ ವಿಮಾನದಲ್ಲಿ (Airplane) ಕರೆದುಕೊಂಡು ಹೋಗಿದ್ದಾರೆ. ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಮೈಂದರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (Government School) ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳನ್ನು ವಿಮಾನದಲ್ಲಿ ದೆಹಲಿಗೆ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿದ್ದಾರೆ. ಮುಖ್ಯೋಪಾಧ್ಯಾಯ ಮಹಾಂತೇಶ್ವರ ಕಟ್ಟಿಮನಿ ಅವರು ವಿದ್ಯಾರ್ಥಿಗಳನ್ನು ಕರೆದುಕೊಂಡು ಕಲಬುರಗಿಯಿಂದ ಮುಂಬೈಗೆ ರೈಲಿನಲ್ಲಿ ಹೋಗಿದ್ದಾರೆ. ಮುಂಬೈನಿಂದ ದೆಹಲಿಗೆ ವಿಮಾನದಲ್ಲಿ ಹೋಗಿದ್ದಾರೆ. ಮುಖ್ಯೋಪಾಧ್ಯಾಯ ಮಹಾಂತೇಶ್ವರ ಕಟ್ಟಿಮನಿ ಮಕ್ಕಳಿಂದ ಅಲ್ಪ ಹಣ ಸಂಗ್ರಹಿಸಿ, ಉಳಿದ ಹಣವನ್ನು ತಮ್ಮ ಕೈಯಿಂದ ಹಾಕಿದ್ದಾರೆ. ದೆಹಲಿಯಲ್ಲಿ ಸಂಸತ್ ಭವನ, ಕೆಂಪುಕೋಟೆ, ರಾಷ್ಟ್ರಪತಿ ಭವನ, ಇಂಡಿಯಾ ಗೇಟ್ ನೋಡಿ ಶಾಲಾ ಮಕ್ಕಳು ಸಂಭ್ರಮಿಸಿದ್ದಾರೆ. ಇನ್ನು ವಿಮಾನ ಪ್ರಯಾಣದಿಂದ ಶಾಲಾ ಮಕ್ಕಳಿಗೆ ಸಂತಸವಾಗಿದೆ.
Published On - 3:17 pm, Wed, 10 January 24