ಬೆಂಗಳೂರು: ನಿರಂತರ ಪ್ರವಾಸ ಹಾಗೂ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಹೆಚ್ಡಿ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚುನಾವಣೆ ಹಿನ್ನೆಲೆ ಇತ್ತೀಚೆಗೆ ಅವಿಶ್ರಾಂತವಾಗಿ ಪ್ರವಾಸ ಮಾಡಿದ್ದಾರೆ. ನಿರಂತರ ಕಾರ್ಯಕ್ರಮಗಳ ಒತ್ತಡದಿಂದ ಅವರಿಗೆ ಜ್ವರ ಬಂದಿದೆ. ಹೀಗಾಗಿ, ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಇಂದು (ಭಾನುವಾರದಿಂದ) ನಡೆಯಬೇಕಿದ್ದ ಪ್ರಚಾರ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಪಣತೊಟ್ಟಿರುವ ಕುಮಾರಸ್ವಾಮಿ, ಆಸ್ಪತ್ರೆಯಿಂದಲೂ ರಾಜಕೀಯ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ವಲಸೆ ಬಂದಿರುವ ಪ್ರಮುಖ ನಾಯಕರುಗಳು ಕ್ಷೇತ್ರ ಸೇರಿದಂತೆ ಗೆಲ್ಲುವ ಅಭ್ಯರ್ಥಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಅಲ್ಲದೇ ಆ ಕ್ಷೇತ್ರಗಳಿಗೆ ಹೆಚ್ಚು ಪ್ರಚಾರಕ್ಕೆ ತೆರಳಲು ಆಸ್ಪತ್ರೆಯಿಂದಲೇ ರೂಟ್ ಮ್ಯಾಪ್ ಸಿದ್ಧಪಡಿಸಿದ್ದಾರೆ.