ಬಸ್, ಕ್ಯಾಬ್ ಸಿಗಲ್ಲ ಎಂಬ ಆತಂಕ: ಅರ್ಧ ರಾತ್ರಿಯಲ್ಲೇ ಏರ್ಪೋರ್ಟ್ ತಲುಪಿ ಕಷ್ಟಪಟ್ಟು ಕಾಲಕಳೆದ ಪ್ರಯಾಣಿಕರು
ಕರ್ನಾಟಕ ಬಂದ್ನ ಹಿನ್ನೆಲೆಯಲ್ಲಿ ಸಾರಿಗೆ ಸಂಚಾರದ ಭೀತಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಅವಧಿಗೂ ಮುನ್ನವೇ ಆಗಮಿಸಿದ್ದಾರೆ. ಬಸ್, ಕ್ಯಾಬ್ಗಳು ಸಿಗುವುದಿಲ್ಲ ಎಂಬ ಆತಂಕದಲ್ಲಿ ಬಂದಿರುವ ಜನರು, ಮಹಿಳೆಯರು ಹಾಗೂ ಮಕ್ಕಳ ಸಮೇತ ಕುಳಿತಲ್ಲೇ ನಿದ್ದೆಗೆ ಜಾರಿದ್ದಾರೆ. ಆದಾಗ್ಯೂ, ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿಲ್ಲ.
ಬೆಂಗಳೂರು, ಆ.13: ಇಂದು ಕರೆಯಲಾಗಿರುವ ಕರ್ನಾಟಕ ಬಂದ್ನ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಕ್ಯಾಬ್ಗಳ ಲಭ್ಯತೆಯ ಕುರಿತು ಆತಂಕಗೊಂಡ ಪ್ರಯಾಣಿಕರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವಧಿಗೂ ಮುನ್ನವೇ ಆಗಮಿಸಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ಏರ್ಪೋರ್ಟ್ಗೆ ಬಸ್, ಕ್ಯಾಬ್ ಸಿಗುವುದಿಲ್ಲ ಎಂಬ ಭಯದಲ್ಲಿ ಅನೇಕ ಮಂದಿ ಮುಂಜಾನೆಯಲ್ಲೇ ಬಂದು ತಲುಪಿದ್ದಾರೆ. ಈ ಅನಿಶ್ಚಿತತೆಯ ವಾತಾವರಣದಲ್ಲಿ, ವಿಮಾನ ನಿಲ್ದಾಣದ ಆಸನಗಳಲ್ಲಿಯೇ ಪ್ರಯಾಣಿಕರು ನಿದ್ದೆಗೆ ಜಾರಿದ ದೃಶ್ಯಗಳು ಕಂಡುಬಂದಿವೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವರು ತಮ್ಮ ವಿಮಾನಗಳಿಗಾಗಿ ಕಾದು ಕುಳಿತಿದ್ದಾರೆ. ಮಧ್ಯಾಹ್ನ 12 ಗಂಟೆಯ ನಂತರ ಹೊರಡುವ ವಿಮಾನಗಳ ಪ್ರಯಾಣಿಕರು ಕೂಡ ಮುಂಜಾನೆಯಲ್ಲೇ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಬಂದ್ನಿಂದ ಸೃಷ್ಟಿಯಾಗಬಹುದಾದ ಸಾರಿಗೆ ಸಮಸ್ಯೆಗಳನ್ನು ತಪ್ಪಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಜನರು ಈ ನಿರ್ಧಾರ ಕೈಗೊಂಡಿದ್ದಾರೆ. ಸಹಜವಾಗಿ ಬಂದ್ ಘೋಷಣೆಯಾದಾಗ ಬಸ್ ಮತ್ತು ಕ್ಯಾಬ್ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುತ್ತದೆ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಕರ್ನಾಟಕ ಬಂದ್ಗೆ ಎಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗದಿರುವುದು ಗಮನಾರ್ಹ ಸಂಗತಿಯಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
