ಪೊಲೀಸ್ ನೇಮಕ ವಯೋಮಿತಿ ಹೆಚ್ಚಳ: ಕೊನೆಗೂ ಗುಡ್ ನ್ಯೂಸ್ ನೀಡಿದ ಪರಮೇಶ್ವರ್
ಕರ್ನಾಟಕದಲ್ಲಿ ಪೊಲೀಸ್ ನೇಮಕಾತಿ ವಯೋಮಿತಿಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ತುಮಕೂರಿನಲ್ಲಿ ತಿಳಿಸಿದರು. ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೆಬಲ್ಗಳ ವಯಸ್ಸಿನ ಮಿತಿಯನ್ನು ಶೀಘ್ರದಲ್ಲೇ ತೀರ್ಮಾನಿಸಲಾಗುವುದು. ಪೊಲೀಸರ ಸಂಖ್ಯೆ ಮತ್ತು ವೇತನ ಬೇರೆ ರಾಜ್ಯಗಳಿಗಿಂತ ಕಡಿಮೆ ಇಲ್ಲ ಎಂದು ಅವರು ಹೇಳಿದರು.
ತುಮಕೂರು, ಸೆಪ್ಟೆಂಬರ್ 27: ಕರ್ನಾಟಕದಲ್ಲಿ ಪೊಲೀಸ್ ನೇಮಕಾತಿ ವಯೋಮಿತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿರುವ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಸುಳಿವು ನೀಡಿದ್ದಾರೆ. ಬೇರೆ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಿದ್ದು, ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೆಬಲ್ಗಳ ನೇಮಕಾತಿ ವಯಸ್ಸಿನ ಮಿತಿಯ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಈ ಪ್ರಸ್ತಾವನೆಗೆ ಈಗಾಗಲೇ ಅನುಮತಿ ನೀಡಲಾಗಿದ್ದು, ಸಚಿವ ಸಂಪುಟ ಅನುಮೋದನೆ ಮತ್ತು ಸಿ ಅಂಡ್ ಆರ್ ನಿಯಮಗಳ ತಿದ್ದುಪಡಿ ನಂತರ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಅವರು ಹೇಳಿದ್ದಾರೆ.
