ಸಿಇಟಿ ರ್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA ಕಾರ್ಯನಿರ್ವಾಹಕ ನಿರ್ದೇಶಕ
ಮುಖ್ಯಾಂಶಗಳು
- ರ್ಯಾಂಕ್ ಸಮಸ್ಯೆ, ಸಿಬಿಎಸ್ಇ ಫಲಿತಾಂಶ ವಿಳಂಬ ಕುರಿತು ಕೆಇಎ ಸ್ಪಷ್ಟನೆ
- ರಿಜಿಸ್ಟರ್ ಸಂಖ್ಯೆ ತಪ್ಪಾಗಿ ನಮೂದು, ಡೇಟಾ ಲಭ್ಯವಾಗದ ಕಾರಣ ದೊರೆಯದ ರ್ಯಾಂಕ್
- ಸಿಇಟಿ ರಾಂಕ್ ಬಂದಿಲ್ಲ ಎಂಬ ದೂರಿಗೆ ಸ್ಪಷ್ಟನೆ ನೀಡಿದ ಹೆಚ್. ಪ್ರಸನ್ನ
ಸಿಇಟಿ 2026 ರಾಂಕ್ ವಿಚಾರ, ಸಿಬಿಎಸ್ಇ ಫಲಿತಾಂಶ ವಿಳಂಬ, ಹಾಗೂ ಮರುಮೌಲ್ಯಮಾಪನದಿಂದ ರಾಂಕ್ ಪರಿಷ್ಕರಣೆ ಕುರಿತು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ಸ್ಪಷ್ಟನೆ ನೀಡಿದ್ದಾರೆ. ತಪ್ಪು ಮಾಹಿತಿ ನೀಡಿದ ವಿದ್ಯಾರ್ಥಿಗಳಿಗೆ ರಾಂಕ್ ಲಭಿಸಿಲ್ಲ. ಕೌನ್ಸಿಲಿಂಗ್ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದಿದ್ದಾರೆ.
ಬೆಂಗಳೂರು, ಜೂನ್ 24: ಪಿಯು ಬೋರ್ಡ್ ರಿಜಿಸ್ಟರ್ ಸಂಖ್ಯೆ ತಪ್ಪು ನಮೂದಿಸಿದ ಅಥವಾ ಸಿಬಿಎಸ್ಇ ಫಲಿತಾಂಶದ ಡೇಟಾ ಸರಿಯಾಗಿ ಲಭಿಸದ ವಿದ್ಯಾರ್ಥಿಗಳಿಗೆ ರ್ಯಾಂಕ್ ಲಭಿಸಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಹೇಳಿದರು. ಸಿಇಟಿ ರ್ಯಾಂಕ್ ಬಂದಿಲ್ಲ ಎಂಬ ವಿದ್ಯಾರ್ಥಿಗಳು ದೂರಿನ ವಿಚಾರವಾಗಿ ಮಾತನಾಡಿದ ಅವರು, ರಿಸಲ್ಟ್ ಪ್ರಕಟಿಸಿದಾಗ ವಿದ್ಯಾರ್ಥಿಗಳಿಗೆ ತಮ್ಮ ಸಿಇಟಿ ಅಂಕಗಳು ಮತ್ತು ಪಿಯುಸಿ ಅಂಕಗಳನ್ನು ನೋಡಲು ಅವಕಾಶವಿತ್ತು. ಪಿಯು ಬೋರ್ಡ್ನ ರಿಜಿಸ್ಟರ್ ಸಂಖ್ಯೆಗಳನ್ನು ತಪ್ಪಾಗಿ ನಮೂದಿಸಿದ ಕಾರಣ ಅಥವಾ ಸಿಬಿಎಸ್ಇ ವಿದ್ಯಾರ್ಥಿಗಳ ಡೇಟಾ ಕೆಇಎಗೆ ಲಭ್ಯವಾಗದ ಕಾರಣ ರ್ಯಾಂಕ್ ದೊರೆತಿಲ್ಲ. ಡಿಜಿಲಾಕರ್ನಲ್ಲಿ ಅಂಕಪಟ್ಟಿ ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಿದ್ದರೂ, ಕೆಲವರು ಮಾಡಿಲ್ಲ ಅಥವಾ ಇಂಗ್ಲಿಷ್ ಅಂಕಪಟ್ಟಿ ಡೌನ್ಲೋಡ್ ಆಗಿಲ್ಲ. ಈ ತಪ್ಪುಗಳನ್ನು ಸರಿಪಡಿಸಲು ವಿದ್ಯಾರ್ಥಿಗಳ ರಿಸಲ್ಟ್ ಲಾಗಿನ್ನಲ್ಲಿ ಅಂಕಗಳನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿತ್ತು. ತಪ್ಪಾದ ಅಂಕಗಳನ್ನು ನಮೂದಿಸಿದರೆ ದಾಖಲಾತಿ ಸಮಯದಲ್ಲಿ ಸಿಕ್ಕಿಬಿದ್ದು ಪ್ರವೇಶ ರದ್ದಾಗಬಹುದು ಎಂದು ಕೆಇಎ ಎಚ್ಚರಿಕೆ ನೀಡಿದೆ. ಸರಿಯಾದ ಅಂಕಗಳನ್ನು ನಮೂದಿಸಿದವರಿಗೆ ಸ್ಪಾಟ್ ರ್ಯಾಂಕ್ ನೀಡಲಾಗಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
