ಶಿರೂರು ಗುಡ್ಡಕುಸಿತ ದುರಂತ: ರಕ್ಷಣಾ ತಂಡಗಳಿಂದ ತಾರತಮ್ಯ ನಡೆಯುತ್ತಿಲ್ಲ: ಅಶ್ರಫ್, ಕೇರಳ ಶಾಸಕ

|

Updated on: Jul 24, 2024 | 2:10 PM

ತಾರತಮ್ಯ ಆಗಲು ಹೇಗೆ ಸಾಧ್ಯ? ಎಲ್ಲ ದೇಹಗಳು ಗಂಗಾವಳಿ ನದಿಯಲ್ಲಿ ಸಿಕ್ಕಿವೆ, ರಕ್ಷಣಾ ತಂಡಗಳಿಗೆ ದೇಹ ಸಿಕ್ಕಾಗ ಅದು ಯಾರು ಅಂತ ಗೊತ್ತಾಗಲು ಸಾಧ್ಯವೇ? ಕೇವಲ ಕುಟುಂಬಸ್ಥರು ಮಾತ್ರ ಮೃತದೇಹಗಳ ಗುರುತು ಹಿಡಿಯಬಲ್ಲರು. ಮಣ್ಣಿನಡಿ ಯಾವುದೇ ದೇಹ ಸಿಕ್ಕಿಲ್ಲ, ಹಾಗಾಗಿ ಉಳಿದ ಮೂವರ ದೇಹಗಳು ಸಿಕ್ಕರೆ ನದಿಯಲ್ಲೇ ಸಿಗಬೇಕು.

ಕಾರವಾರ: ಅಂಕೋಲ ಬಳಿಯ ಶಿರೂರು ಗುಡ್ಡ ಕುಸಿತ ಪ್ರಕರಣಲ್ಲಿ ಇದುವರೆಗೆ 8 ದೇಹಗಳು ಪತ್ತೆಯಾಗಿವೆ ಮತ್ತು ಇನ್ನೂ ಮೂರು ದೇಹಗಳಿಗಾಗಿ ತೀವ್ರ ಶೋಧ ನಡೆದಿದೆ. ಕೇರಳದ ಲಾರಿ ಚಾಲಕ ಅರ್ಜುನ್ ನ ದೇಹವಿನ್ನೂ ಪತ್ತೆಯಾಗಿಲ್ಲ. ಸೇನೆಯ ತುಕಡಿ, ಎಸ್ ಡಿ ಅರ್ ಎಫ್, ಎನ್ ಡಿಆರ್ ಎಫ್, ಅಗ್ನಿಶಾಮಕ ದಳ ಮೊದಲಾದ ತಂಡಗಳು ಕಣ್ಮರೆಯಾಗಿರುವವರೆಲ್ಲರ ಹುಡುಕಾಟವನ್ನು ಕಳೆದ 8 ದಿನಗಳಿಂದ ನಡೆಸಿದ್ದರೂ, ಅರ್ಜುನ್ ಕುಟುಂಬದವರು ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಆದರೆ, ಕಳೆದ 5 ದಿನಗಳಿಂದ ಸ್ಥಳದಲ್ಲೇ ಇದ್ದು ಕಾರ್ಯಾಚರಣೆಯನ್ನು ವೀಕ್ಷಿಸುತ್ತಿರುವ ಕೇರಳ ಮಂಜೇಶ್ವರ ಕ್ಷೇತ್ರದ ಶಾಸಕ ಎಕೆಎಮ್ ಅಶ್ರಫ್ ಕಾರ್ಯಾಚರಣೆ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಟಿವಿ9 ವರದಿಗಾರನೊಂದಿಗೆ ಮಾತಾಡಿರುವ ಅವರು, ಕಾಣೆಯಾಗಿರುವ ಅರ್ಜುನ್ ಸಹೋದರಿ ಕಾರ್ಯಾಚರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಿಜ, ಅದರೆ ತಾನು ಕಳೆದ 5 ದಿನಗಳಿಂದ ಇಲ್ಲೇ ಇದ್ದು ಕಾರ್ಯಾಚರಣೆ ವೀಕ್ಷಿಸುತ್ತಿದ್ದೇನೆ, ಎಲ್ಲೂ ತಾರತಮ್ಯವಾಗುತ್ತಿಲ್ಲ, ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ಬಂದಾಗ ಅವರನ್ನೂ ಭೇಟಿಯಾಗಿದ್ದೇನೆ, ಸ್ಥಳೀಯ ಶಾಸಕ ಸತೀಶ್ ಸೈಲ್ ಅವರ ನೇತೃತ್ವದಲ್ಲಿ ಎಲ್ಲ ಕೆಲಸಗಳು ಲೋಪವಿಲ್ಲದೆ ಜರುಗುತ್ತಿವೆ ಎಂದು ಅಶ್ರಫ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ; ಎಂಟನೇ ದಿನ, 8ನೇ ಶವ ಪತ್ತೆ

Follow us on