ಆಟವಾಡುತ್ತಾ ಪಾತ್ರೆಯೊಳಗೆ ಸಿಲುಕಿದ್ದ ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!

Updated on: Apr 24, 2026 | 11:52 AM

ತಿರುವನಂತಪುರಂನಲ್ಲಿ ಪಾತ್ರೆಯಲ್ಲಿ ಸಿಲುಕಿಕೊಂಡಿದ್ದ ಎರಡು ವರ್ಷದ ಮಗುವನ್ನು ಕೇರಳ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸಮಯೋಚಿತವಾಗಿ ರಕ್ಷಿಸಿದ್ದಾರೆ. ಅಡುಗೆ ಮನೆಯಲ್ಲಿ ಆಟವಾಡುತ್ತಿದ್ದಾಗ ಮಗು ದೊಡ್ಡ ಅಲ್ಯೂಮಿನಿಯಂ ಪಾತ್ರೆಗೆ ಇಳಿದು ಸಿಲುಕಿಕೊಂಡಿತ್ತು. ಸಿಬ್ಬಂದಿ ಹೈಡ್ರಾಲಿಕ್ ಕಟ್ಟರ್‌ಗಳನ್ನು ಬಳಸಿ ಎಚ್ಚರಿಕೆಯಿಂದ ಪಾತ್ರೆಯನ್ನು ಕತ್ತರಿಸಿ ಮಗುವನ್ನು ಸುರಕ್ಷಿತವಾಗಿ ಹೊರತೆಗೆದರು. ಈ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ತಿರುವನಂತಪುರಂ, ಏ.24: ಆಟವಾಡುತ್ತಿದ್ದಾಗ ಪಾತ್ರೆಯೊಳಗೆ ಸಿಲುಕಿಕೊಂಡಿದ್ದ ಪುಟ್ಟ ಮಗುವೊಂದನ್ನು ಕೇರಳದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಅತ್ಯಂತ ನಾಜೂಕಾಗಿ ರಕ್ಷಿಸಿದ್ದಾರೆ. ಇವರ ಈ ಸಮಯೋಚಿತ ಕಾರ್ಯಕ್ಕೆ ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಮನೆಯಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಅಡುಗೆ ಮನೆಯಲ್ಲಿದ್ದ ದೊಡ್ಡದಾದ ಅಲ್ಯೂಮಿನಿಯಂ ಪಾತ್ರೆಯೊಳಗೆ ಇಳಿದಿದೆ. ಆದರೆ, ಹೊರಬರಲು ಪ್ರಯತ್ನಿಸಿದಾಗ ಮಗುವಿನ ಸೊಂಟದ ಭಾಗ ಪಾತ್ರೆಯಲ್ಲಿ ಸಿಲುಕಿಕೊಂಡಿದೆ. ಮಗುವಿನ ಅಳು ಕೇಳಿ ಓಡಿ ಬಂದ ಪೋಷಕರು ಎಷ್ಟೇ ಪ್ರಯತ್ನಿಸಿದರೂ ಮಗುವನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಪೋಷಕರು ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಮಗುವಿಗೆ ಯಾವುದೇ ನೋವಾಗದಂತೆ ಅತ್ಯಂತ ಎಚ್ಚರಿಕೆ ವಹಿಸಿ, ಹೈಡ್ರಾಲಿಕ್ ಕಟ್ಟರ್‌ಗಳನ್ನು ಬಳಸಿ ಅಲ್ಯೂಮಿನಿಯಂ ಪಾತ್ರೆಯನ್ನು ನಿಧಾನವಾಗಿ ಕತ್ತರಿಸುವ ಮೂಲಕ ಮಗುವನ್ನು ಸುರಕ್ಷಿತವಾಗಿ ಹೊರತೆಗೆದರು. ಮಗು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಕಷ್ಟದ ಸಮಯದಲ್ಲಿ ದೇವರಂತೆ ಬಂದು ನೆರವಾದ ಪೊಲೀಸರ ಈ ಕಾರ್ಯ ‘ಮಾನವೀಯತೆಯ ಸುಂದರ ನೋಟ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us