ನೇಹಾ ಕೊಲೆಯಾದಾಗ ಚುನಾವಣೆ ಇತ್ತು, ಹಾಗಾಗೇ ರಾಜಕಾರಣಿಗಳು ಮನೆಗೆ ಹೋಗಿ ಸಾಂತ್ವನ ಹೇಳುವ ನಾಟಕ ಮಾಡಿದ್ದರು: ದಿಂಗಾಲೇಶ್ವರ ಸ್ವಾಮೀಜಿ

ಅರುಣ್​ ಕುಮಾರ್​ ಬೆಳ್ಳಿ

Updated on: May 16, 2024 | 5:41 PM

ಅಂಜಲಿ ಕೊಲೆ ನಡೆದ ಬಳಿಕ ಸರ್ಕಾರದಿಂದ ಯಾವುದೇ ಹೇಳಿಕೆ ಹೊರಬಿದ್ದಿರದ ವಿಷಯದಲ್ಲಿ ಮಾತಾಡಿದ ಸ್ವಾಮೀಜಿ, ನೇಹಾ ಕೊಲೆ ನಡೆದಾಗ ಚುನಾವಣೆ ನಡೆಯುತಿತ್ತು, ಹಾಗಾಗಿ ಸರ್ಕಾರದ ಪ್ರತಿನಿಧಿಗಳು ಮತ್ತು ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರು ದಂಡುದಂಡಾಗಿ ಅಕೆಯ ಮನೆಗೆ ಹೋಗಿ ಸಾಂತ್ವನ ಹೇಳುವ ನಾಟಕ ಮಾಡಿದ್ದರು ಎಂದರು.

ಹುಬ್ಬಳ್ಳಿ: ಶಿರಹಟ್ಟಿ-ಬಾಳೆಹೊಸೂರ್ ಲಿಂಗಾಯತ ಮಠದ ಪೀಠಾಧಿಪತಿ ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರು (Dingaleshwara Swamiji) ನಿನ್ನೆ ಯುವಕನೊಬ್ಬನಿಂದ ಅತ್ಯಂತ ಕ್ರೂರವಾಗಿ ಹತ್ಯೆಯಾದ ಅಂಜಲಿ ಅಂಬಿಗೇರ್ (Anjali Ambiger) ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದರು. ಅಂಜಲಿ ಕೊಲೆ ಪೊಲೀಸರಲ್ಲದೆ ಬೇರೆ ಯಾರೂ ಕಾರಣರಲ್ಲ, ಈ ಹೀನ ಕೃತ್ಯದ ಹೊಣೆಗಾರಿಕೆ ಅವರೇ ಹೊತ್ತುಕೊಳ್ಳಬೇಕು, ಯಾಕೆಂದರೆ ಎಸ್ ಎಸ್ ಎಲ್ ಸಿ ಓದುತ್ತಿರುವ ಅಂಜಲಿಯ ತಂಗಿ ತನ್ನ ಅಜ್ಜಿ (grandmother) ಜೊತೆ ಪೊಲೀಸ್ ಸ್ಟೇಶನ್ ಗೆ ಹಂತಕನಿಂದ ಕೊಲೆ ಬೆದರಿಕೆಯ ಕರೆಗಳು ಬರುತ್ತಿವೆ ಅಂತ ದೂರು ದಾಖಲಿಸಲು ಹೋದಾಗ ಅಲ್ಲಿದ್ದ ಪೊಲೀಸರು ಅವರನ್ನು ಗೇಲಿ ಮಾಡಿದ್ದಾರೆ, ಅದು ನಿಮ್ಮ ಭ್ರಮೆ, ನೇಹಾ ಕೊಲೆ ಪ್ರಕರಣದ ನಂತರ ಬಹಳಷ್ಟು ಜನ ಹೀಗೆ ಹೇಳುತ್ತಿದ್ದಾರೆ ಅಂತ ಹೇಳಿ ಅವರನ್ನು ವಾಪಸ್ಸು ಕಳಿಸಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

ಅವರು ಕೂಡಲೇ ಕ್ರಮ ತೆಗೆದುಕೊಂಡಿದ್ದರೆ ಅಂಜಲಿ ಜೀವ ಉಳಿಯುತಿತ್ತು. ಅಂಜಲಿ ಮನೆಯಲ್ಲಿ ಗಂಡಸರ್ಯಾರೂ ಇಲ್ಲ, ಅಜ್ಜಿ ತನ್ನ ನಾಲ್ಕು ಮೊಮ್ಮಕ್ಕಳೊಂದಿಗೆ ವಾಸವಾಗಿದ್ದಾರೆ. ತಪ್ಪಿತಸ್ಥ ಪೊಲಿಸರನ್ನು ಸಸ್ಪೆಂಡ್ ಮಾಡಿದರೆ ಸಾಲದು ಅವರನ್ನು ಕೂಡಲೇ ನೌಕರಿಯಿಂದ ಕಿತ್ತುಹಾಕಬೇಕು ಎಂದು ಸ್ವಾಮೀಜಿ ಹೇಳಿದರು.

ಅಂಜಲಿ ಕೊಲೆ ನಡೆದ ಬಳಿಕ ಸರ್ಕಾರದಿಂದ ಯಾವುದೇ ಹೇಳಿಕೆ ಹೊರಬಿದ್ದಿರದ ವಿಷಯದಲ್ಲಿ ಮಾತಾಡಿದ ಸ್ವಾಮೀಜಿ, ನೇಹಾ ಕೊಲೆ ನಡೆದಾಗ ಚುನಾವಣೆ ನಡೆಯುತಿತ್ತು, ಹಾಗಾಗಿ ಸರ್ಕಾರದ ಪ್ರತಿನಿಧಿಗಳು ಮತ್ತು ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರು ದಂಡುದಂಡಾಗಿ ಅಕೆಯ ಮನೆಗೆ ಹೋಗಿ ಸಾಂತ್ವನ ಹೇಳುವ ನಾಟಕ ಮಾಡಿದ್ದರು. ಈಗ ಚುನಾವಣೆ ಮುಗಿದಿರುವುದರಿಂದ ಪುನಃ ನಾಟಕ ಮಾಡುವ ಅವಶ್ಯಕತೆ ಇಲ್ಲ ಅನ್ನೋದನ್ನು ನಾಯಕರು ಮನಗಂಡಿದ್ದಾರೆ. ಇವರೆಲ್ಲ ಎಷ್ಟು ದುಷ್ಟರು ಅನ್ನೋದು ಇದರಿಂದ ಗೊತ್ತಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ವಿಶ್ವನಿಂದ ಅಕ್ಕನ ಜೀವಕ್ಕೆ ಅಪಾಯವಿದೆ ಅಂತ ದೂರು ನೀಡಿದ್ದರೂ ಪೊಲೀಸರು ಕ್ರಮ ತೆಗೆದುಕೊಳ್ಳಲಿಲ್ಲ: ಅಂಜಲಿ ಸಹೋದರಿಯರು

Loading...
Unable to load recommendations.
Follow Us