ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ: ಅಧಿಕಾರಿಗಳಿಂದ 11 ಕಡೆ ಶೋಧ

Updated on: Feb 12, 2026 | 2:42 PM

ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್ ಪುರುಷೋತ್ತಮ್ ದಾಸ್ ಹೆಗಡೆ ಅವರ ಬೆಂಗಳೂರು ಮತ್ತು ಮೈಸೂರಿನ 11 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಈ ತನಿಖೆ ನಡೆಯುತ್ತಿದೆ. ದಾಳಿಯ ವೇಳೆ ನಗದು, ಚಿನ್ನಾಭರಣ, ಸ್ಥಿರಾಸ್ತಿ ದಾಖಲೆಗಳು, ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಶಾಲಾ ಟ್ರಸ್ಟ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಬೆಂಗಳೂರು, ಫೆ.12: ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯೂಡಿ) ಕೆ-ಶಿಪ್ ವಿಭಾಗದ ಮುಖ್ಯ ಇಂಜಿನಿಯರ್ ಪುರುಷೋತ್ತಮ್ ದಾಸ್ ಹೆಗಡೆ ಅವರಿಗೆ ಸಂಬಂಧಿಸಿದ ಬೆಂಗಳೂರು ಮತ್ತು ಮೈಸೂರಿನ ಒಟ್ಟು 11 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಈ ತನಿಖೆಯನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನ ಎರಡು ಸ್ಥಳಗಳು ಮತ್ತು ಮೈಸೂರಿನ ಐದಾರು ಸ್ಥಳಗಳು ಸೇರಿದಂತೆ ಒಟ್ಟು 11 ಕಡೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಪುರುಷೋತ್ತಮ್ ದಾಸ್ ಹೆಗಡೆ ಅವರು ತಮ್ಮ ಆದಾಯದ ಮೂಲಗಳಿಗೆ ತಕ್ಕಂತೆ ಆಸ್ತಿಯನ್ನು ಹೊಂದಿಲ್ಲ ಎಂಬುದು ಕಂಡುಬಂದಿದೆ. ದಾಳಿಯ ವೇಳೆ, ನಗದು, ಚಿನ್ನಾಭರಣ, ಬ್ಯಾಂಕ್ ಬ್ಯಾಲೆನ್ಸ್ ಸೇರಿದಂತೆ ಚರ ಮತ್ತು ಸ್ಥಿರ ಆಸ್ತಿಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದರಲ್ಲಿ ಸೈಟ್‌ಗಳು, ಮನೆಗಳು, ಯೋಜನೆಗಳು, ವಿವಿಧ ಕಂಪನಿಗಳಲ್ಲಿನ ಹೂಡಿಕೆಗಳು, ಮತ್ತು ಎರಡು ಶಾಲೆಗಳನ್ನು ಒಳಗೊಂಡಿರುವ ಟ್ರಸ್ಟ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಸಂಪೂರ್ಣ ತನಿಖೆಯ ನಂತರ ವಿವರವಾದ ವರದಿಯನ್ನು ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us