ಕೆಡಿಪಿ ಸಭೆಗೆ ತಡವಾಗಿ ಬಂದ ಅಧಿಕಾರಿ ಮೇಲೆ ಶಾಲೆಯ ಮುಖ್ಯೋಪಾಧ್ಯಾಯನ ಹಾಗೆ ರೇಗಿದ ಪರಮೇಶ್ವರ್

|

Updated on: Aug 12, 2024 | 1:51 PM

ಸರ್ಕಾರೀ ಅಧಿಕಾರಿಗಳಲ್ಲಿ ಶಿಸ್ತಿನ ಕೊರತೆ ಇರೋದು ಹೊಸ ಸಂಗತಿಯೇನಲ್ಲ. ತಾನು ಅಧಿಕಾರಿಯೆಂಬ ಕೋಡೋ ಅಥವಾ ಉಡಾಫೆಯೋ ಅಂತ ಅರ್ಥವಾಗದು. ಆದರೆ, ಸಚಿವರು, ಸಂಸದರು ಮತ್ತು ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಸಭೆಗೆ ತಡವಾಗಿ ಬರೋದು ನಿಜಕ್ಕೂ ಅಕ್ಷಮ್ಯ.

ತುಮಕೂರು: ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಜಿ ಪರಮೇಶ್ವರ್ ಅವರ ಕೋಪ ಸಾಧುವೂ ಹೌದು ಮತ್ತು ಸಹಜವೂ ಹೌದು. ಇಂದು ಅವರು ತುಮಕೂರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2024-25 ರ ಸಾಲಿನ ಮೊದಲ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಸಹಕಾರ ಸಚಿವ ಕೆಎನ್ ರಾಜಣ್ಣ ಹಾಗೂ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಜೊತೆ ಜಿಲ್ಲೆಯ ಹಲವಾರು ಅಧಿಕಾರಿಗಳು ಭಾಗಿಯಾಗಿದ್ದರು.. ಸಭೆ ಆರಂಭವಾಗಿ ಎಷ್ಟೋ ಸಮಯದ ನಂತರ ಒಬ್ಬ ಅಧಿಕಾರಿ ಸಭಾಂಗಣದೊಳಗೆ ಬಂದು ಖಾಲಿಯಿರುವ ಆಸನದತ್ತ ನುಸುಳುವುದು ಪರಮೇಶ್ವರ್ ಅವರ ಕಣ್ಣಿಗೆ ಬೀಳುತ್ತದೆ. ಅದಾಗಲೇ ಕೊಂಚ ಗರಂ ಆಗಿದ್ದ ಸಚಿವ ತಡವಾಗಿ ಬಂದ ಅಧಿಕಾರಿಯ ಮೇಲೆ ಏಕವಚನದಲ್ಲಿ ರೇಗಾಡಲು ಆರಂಭಿಸುತ್ತಾರೆ. ಅವರನ್ನು ಮುಂದಕ್ಕೆ ಕರೆಸಿ, ಮನಸ್ಸಿಗೆ ಬಂದಾಗ ಬರಲು ಇದೇನು ಗೋಪಾಲಪ್ಪನ ಛತ್ರನಾ? ಅಂತ ಗದರುತ್ತಾರೆ. ಅಧಿಕಾರಿ ಏನೇನೋ ಸಮಜಾಯಿಷಿ ಹೇಳು ಪ್ರಯತ್ನಿಸುತ್ತಾರಾದರೂ ಪರಮೇಶ್ವರ್ ಯಾವುದನ್ನೂ ಕಿವಿಗೆ ಹಾಕಿಕೊಳ್ಳಲ್ಲ. ಸಚಿವನಿಂದ ಚೆನ್ನಾಗಿ ಉಗಿಸಿಕೊಂಡ ಬಳಿಕ ಹ್ಯಾಪುಮೋರೆ ಹಾಕಿಕೊಂಡು ಅಧಿಕಾರಿ ತಮ್ಮ ಸ್ಥಳಕ್ಕೆ ವಾಪಸ್ಸಾಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ದೀಢೀರನೆ ಕೇಂದ್ರ ಕಾರಾಗೃಹ ಭೇಟಿ ನೀಡಿದ ಜಿ ಪರಮೇಶ್ವರ್ ಜೈಲು ಸಿಬ್ಬಂದಿಯಿಂದ ಗೌರವ ರಕ್ಷೆ ಸ್ವೀಕರಿಸಿದರು

Follow us on