ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್: ಮುಖ್ಯ ರಸ್ತೆಗಳಲ್ಲಿ ವ್ಯಾಪಾರ ಬೇಡ

Updated on: Jul 03, 2026 | 7:54 AM

ಸಚಿವ ಕೃಷ್ಣ ಭೈರೇಗೌಡರು ಬೆಂಗಳೂರಿನಲ್ಲಿ ರಸ್ತೆಗುಂಡಿ, ಚರಂಡಿ ಮತ್ತು ಫುಟ್‌ಪಾತ್ ಒತ್ತುವರಿ ಕುರಿತು ತಡರಾತ್ರಿ ಪರಿಶೀಲನೆ ನಡೆಸಿದರು. ಪಾದಚಾರಿಗಳ ಜೀವಕ್ಕೆ ಅಪಾಯ ತರುತ್ತಿರುವ ಫುಟ್‌ಪಾತ್ ಅತಿಕ್ರಮಣವನ್ನು ತೆರವುಗೊಳಿಸಲು ಕಟ್ಟುನಿಟ್ಟಾಗಿ ಸೂಚಿಸಿದ ಸಚಿವರು, ಮುಖ್ಯರಸ್ತೆ ಬಿಟ್ಟು ಪಕ್ಕದ ರಸ್ತೆಗಳಲ್ಲಿ ವ್ಯಾಪಾರ ಮಾಡುವಂತೆ ಬೀದಿಬದಿ ವ್ಯಾಪಾರಿಗಳಿಗೆ ಮತ್ತೆ ಎಚ್ಚರಿಕೆ ನೀಡಿದರು.

ಬೆಂಗಳೂರು, ಜುಲೈ 3: ಬೆಂಗಳೂರಿನಲ್ಲಿ ಪಾದಚಾರಿಗಳ ಸುರಕ್ಷತೆ ಮತ್ತು ರಸ್ತೆ ಮೂಲಸೌಕರ್ಯ ಸುಧಾರಣೆ ಗಮನದಲ್ಲಿರಿಸಿಕೊಂಡು ಸಚಿವ ಕೃಷ್ಣ ಭೈರೇಗೌಡರು ಗುರುವಾರ ತಡರಾತ್ರಿ ಪರಿಶೀಲನೆ ನಡೆಸಿದರು. ರಸ್ತೆಗುಂಡಿಗಳು, ಚರಂಡಿಗಳ ಸ್ಥಿತಿ ಮತ್ತು ಫುಟ್‌ಪಾತ್‌ಗಳ ಅಕ್ರಮ ಒತ್ತುವರಿಯನ್ನು ಅವರು ಖುದ್ದು ಪರಿಶೀಲಿಸಿದರು. ಔಟರ್ ರಿಂಗ್ ರೋಡ್‌ನ ಲಾರಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ವರೆಗಿನ ಪ್ರದೇಶಗಳಲ್ಲಿ ಸಚಿವರು ರೌಂಡ್ಸ್ ಹಾಕಿದರು. ಈ ಸಂದರ್ಭದಲ್ಲಿ, ರಸ್ತೆ ಕಾಮಗಾರಿಗಳ ಬಗ್ಗೆ ಸರಿಯಾದ ಮಾಹಿತಿ ನೀಡದ ಮತ್ತು ಗೊಂದಲಮಯ ಹೇಳಿಕೆಗಳನ್ನು ನೀಡಿದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. BWSSB, KPTCL, BESCOM ಇಲಾಖೆಗಳ ನಡುವಿನ ಸಮನ್ವಯ ಕೊರತೆಯನ್ನು ಪ್ರಶ್ನಿಸಿದರು.

ಫುಟ್‌ಪಾತ್ ವ್ಯಾಪಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸಚಿವರು, ‘ಮುಖ್ಯ ರಸ್ತೆಗಳಲ್ಲಿ ವ್ಯಾಪಾರ ಮಾಡಬೇಡಿ, ಬದಲಾಗಿ ಪಕ್ಕದ ರಸ್ತೆಗಳಿಗೆ ಹೋಗಿ. ಪ್ರತಿ ವರ್ಷ ಫುಟ್‌ಪಾತ್ ಇಲ್ಲದೆ 300 ಪಾದಚಾರಿಗಳು ಅಪಘಾತಗಳಲ್ಲಿ ಸಾಯುತ್ತಿದ್ದಾರೆ. ನಿಮ್ಮ ಕುಟುಂಬದಲ್ಲಿ ಯಾರಾದರೂ ಸತ್ತರೆ ನಿಮಗೆ ಏನು ಅನಿಸುತ್ತದೆ?’ ಎಂದು ಪ್ರಶ್ನಿಸಿದರು. ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬೀದಿಬದಿ ವ್ಯಾಪಾರಿಗಳಷ್ಟೇ ಅಲ್ಲದೆ, ದೊಡ್ಡ ಕಟ್ಟಡಗಳ ಮುಂದೆ ಅಕ್ರಮವಾಗಿ ನಿರ್ಮಿಸಿರುವ ಮಳಿಗೆಗಳ ತೆರವಿಗೂ ಸೂಚನೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us