ಕುಮಾರಸ್ವಾಮಿ ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು ನೋಡಿ!

Updated on: Apr 21, 2026 | 1:56 PM

ಸಚಿವ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಪಕ್ಷ ಸೇರುವ ವದಂತಿಗಳನ್ನು ತಳ್ಳಿಹಾಕಿದ್ದು, ಕಾಂಗ್ರೆಸ್ ಪಕ್ಷಕ್ಕೆ ತನ್ನ ನಿಷ್ಠೆಯನ್ನು ಪುನರುಚ್ಚರಿಸಿದ್ದಾರೆ. 2017ರಲ್ಲಿ ಕಾಂಗ್ರೆಸ್‌ಗೆ ಬಂದ ನಂತರ, ಪಕ್ಷ ತಮಗೆ ಎರಡು ಬಾರಿ ಸಚಿವ ಸ್ಥಾನ ನೀಡಿ ಐದು ಹಾಗೂ ನಾಲ್ಕು ಪ್ರಮುಖ ಖಾತೆಗಳನ್ನು ನೀಡಿ ಗೌರವಿಸಿದೆ ಎಂದರು. ಕಾಂಗ್ರೆಸ್ ತನ್ನನ್ನು ಯಾವತ್ತೂ ಕಡೆಗಣಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು, ಏಪ್ರಿಲ್ 21: ಸಚಿವ ಜಮೀರ್ ಅಹ್ಮದ್ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಜತೆ ರಹಸ್ಯವಾಗಿ ಮಾತುಕತೆ ನಡೆಸಿದ್ದು, ಜೆಡಿಎಸ್ ಸೇರ್ಪಡೆ ಬಗ್ಗೆ ಚರ್ಚಿಸಿದ್ದಾರೆ ಎಂಬ ವದಂತಿಗಳ ಬಗ್ಗೆ ಇದೀಗ ಸ್ಪಷ್ಟನೆ ದೊರೆತಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್ ಖಾನ್, ಅವೆಲ್ಲ ಬರೀ ಊಹಾಪೋಹ ಅಷ್ಟೆ. ನಾನ್ಯಾಕೆ ಜೆಡಿಎಸ್ ಸೇರಬೇಕು? ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ ಎಂದಿದ್ದಾರೆ. ನಾನು 2017ರಲ್ಲಿ ಕಾಂಗ್ರೆಸ್‌ಗೆ ಬಂದೆ. 2018ರಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗಲೂ ನಾನು ಮಂತ್ರಿಯಾಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ, ಪಕ್ಷ ನನಗೆ ಐದು ಖಾತೆಗಳ ಹೊಣೆ ನೀಡಿ ಸಚಿವನನ್ನಾಗಿ ಮಾಡಿತು. ವಕ್ಫ್, ಹಜ್, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ಖಾತೆಗಳನ್ನು ನೀಡಿತು. 2023ರಲ್ಲಿಯೂ ತಮಗೆ ನಾಲ್ಕು ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಹೀಗಿದ್ದಾಗ ಕಾಂಗ್ರೆಸ್ ಯಾಕೆ ತ್ಯಜಿಸಲಿ ಎಂದು ಪ್ರಶ್ನಿಸಿದರು.

ತನ್ನಗಿಂತ ಹಿರಿಯರಾದ ರೋಷನ್ ಬೇಗ್ (ಏಳು ಬಾರಿ ಶಾಸಕ), ತನ್ವೀರ್ ಸೇಠ್ (ಐದು ಬಾರಿ ಶಾಸಕ) ಮತ್ತು ಹ್ಯಾರಿಸ್ (ಮೂರು-ನಾಲ್ಕು ಬಾರಿ ಶಾಸಕ) ಅವರಂತಹ ನಾಯಕರು ಪಕ್ಷದಲ್ಲಿರುವಾಗಲೂ ಕಾಂಗ್ರೆಸ್ ತಮಗೆ ಅವಕಾಶ ನೀಡಿದೆ. ಪಕ್ಷ ನನಗೆ ಎರಡು ಬಾರಿ ಮಂತ್ರಿ ಸ್ಥಾನ ನೀಡಿದ್ದು, ಅದಕ್ಕಿಂತ ಹೆಚ್ಚಿನದೇನು ಬೇಕು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಕುಮಾರಸ್ವಾಮಿ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us