ಬಾಗಲಕೋಟೆ: ಈ ರಾಜಕಾರಣವೇ ಹೀಗೆ ಮಾರಾಯ್ರೇ, ಯಾರನ್ನೂ ನಂಬಲಾಗಲ್ಲ. ಲೋಕಸಭಾ ಚುನಾವಣೆಗೆ ಮೊದಲು ಸಿಎಂ ಬದಲಾವಣೆ ಬಗ್ಗೆ ಮಾತಾಡಿದರೆ ಹುನುಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಉರಿದು ಬೀಳುತ್ತಿದ್ದರು. ಆದರೆ, ಇವತ್ತು ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವರಸೆ ಮತ್ತು ಧೋರಣೆ ಎರಡರಲ್ಲೂ ಬದಲಾವಣೆ ಕಂಡಿತು. ಸಿಎಂ ಬದಲಾವಣೆ ಬಗ್ಗೆ ರಾಜ್ಯದಲ್ಲಿ ನಡೆಯುತ್ತಿರುವ ಚರ್ಚೆಗಳು, ಪಕ್ಷದ ಶಾಸಕರು ಮಂತ್ರಿಗಳು ನಡೆಸುತ್ತಿರುವ ಹುನ್ನಾರಗಳ ಬಗ್ಗೆ ಅವರನ್ನು ಕೇಳಿದಾಗ, ಇದು ಕೇವಲ ಮಾಧ್ಯಮಗಳ ಸೃಷ್ಟಿ ತಮ್ಮ ಪಕ್ಷದ ಶಾಸಕರಲ್ಲಿ ನಾಯಕತ್ವದ ಬಗ್ಗೆ ಯಾವುದೇ ಗೊಂದಲವಿಲ್ಲ, ಯಾವುದೇ ಶಾಸಕನಲ್ಲಿ ಸಿಎಂ ಬದಲಾಗಬೇಕೆಂಬ ಭಾವನೆ ಮೂಡಿಲ್ಲ ಎಂದು ಕಾಶಪ್ಪನವರ್ ಹೇಳಿದರು. ಅಂದರೆ ಐದು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯಲಿದ್ದಾರೆಯೇ ಅಂತ ಪತ್ರಕರ್ತರು ಕೇಳಿದಾಗ ತಟ್ಟನೆ ಉತ್ತರಿಸುವ ಅವರು ಅದು ನನಗೆ ಗೊತ್ತಿಲ್ಲ, ಸಿಎಂ ಆಗಬೇಕೆಂಬ ಆಸೆ ಬಹಳಷ್ಟು ಜನರಲ್ಲಿದೆ, ಆ ನಿರ್ಣಯವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಚಿವ ಶಿವಾನಂದ ಪಾಟೀಲ್ ಲಾಬಿ ಎದುರು ಶಾಸಕ ವಿಜಯಾನಂದ ಕಾಶಪ್ಪನವರ್ ಲಾಬಿ ಮುರುಟಿ ಹೋಯಿತೇ?