ಮೈಸೂರಿನಲ್ಲಿ ಮತ್ತೊಂದು ‘ಗೋಲ್ಡ್ ಸ್ಕ್ಯಾಮ್’: ಮೋಹನ್ ಜ್ಯುವೆಲರಿಯಿಂದ ನೂರಾರು ಗ್ರಾಹಕರಿಗೆ ಮೋಸ

Edited By:

Updated on: Sep 03, 2026 | 6:45 AM

ಮೈಸೂರಿನಲ್ಲಿ ಮತ್ತೊಂದು ಬೃಹತ್ ಚಿನ್ನದ ಹಗರಣ ಬಯಲಾಗಿದೆ. ಮೋಹನ್ ಜ್ಯುವೆಲರಿ ಮಾಲೀಕ ಮೋಹನ್ ಲಾಲ್, ಗ್ರಾಹಕರಿಗೆ ಚಿನ್ನ ನೀಡುವುದಾಗಿ ನಂಬಿಸಿ ಮಾಸಿಕ ಕಂತುಗಳ ಮೂಲಕ ಕೋಟ್ಯಾಂತರ ರೂಪಾಯಿ ವಂಚಿಸಿದ್ದಾನೆ. ೮೦ಕ್ಕೂ ಹೆಚ್ಚು ಗ್ರಾಹಕರು ಹಣ ಕಳೆದುಕೊಂಡಿದ್ದು, ಕುಮಾರಪಾರ್ಕ್ ಪೊಲೀಸರು ಮೋಹನ್ ಲಾಲ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದು ನಗರದಲ್ಲಿ ಚಿನ್ನತಂಬಿ ನಂತರದ ಮತ್ತೊಂದು ಪ್ರಮುಖ ವಂಚನೆಯಾಗಿದೆ.

ಮೈಸೂರು, ಸೆ. 3: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಹುಕೋಟಿ ‘ಚಿನ್ನತಂಬಿ’ ಚಿನ್ನದ ಹಗರಣದ ಕಹಿ ನೆನಪು ಮಾಸುವ ಮುನ್ನವೇ, ಮತ್ತೊಂದು ಬೃಹತ್ ಗೋಲ್ಡ್ ಸ್ಕ್ಯಾಮ್‌ (Gold Scam) ಬೆಳಕಿಗೆ ಬಂದಿದೆ. ಚಿನ್ನ ನೀಡುವುದಾಗಿ ನಂಬಿಸಿ ಮಾಸಿಕ ಕಂತುಗಳ ಮೂಲಕ ಹಣ ಕಟ್ಟಿಸಿಕೊಂಡು ನೂರಾರು ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಮೈಸೂರು ನಗರದ ವಿವೇಕಾನಂದ ವೃತ್ತದಲ್ಲಿರುವ (Vivekananda Circle) ‘ಮೋಹನ್ ಜ್ಯುವೆಲರಿ’ (Mohan Jewellery) ಅಂಗಡಿಯ ಮಾಲೀಕ ಮೋಹನ್ ಲಾಲ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಕಳೆದ ಎರಡು ಆವೃತ್ತಿಗಳಲ್ಲಿ ಮಾಸಿಕ ಕಂತು ಕಟ್ಟಿಸಿಕೊಂಡು, ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಚಿನ್ನ ನೀಡುವ ಮೂಲಕ ಈತ ಜನರ ನಂಬಿಕೆ ಗಳಿಸಿದ್ದನು. ಈತನ ಮಾತು ಹಾಗೂ ಯೋಜನೆಯನ್ನು ನಂಬಿದ 80ಕ್ಕೂ ಹೆಚ್ಚು ಗ್ರಾಹಕರು, ಈ ಬಾರಿಯೂ ಚಿನ್ನದ ಆಸೆಯಿಂದ ಹೆಚ್ಚಿನ ಮೊತ್ತದ ಹಣವನ್ನು ಮಾಸಿಕ ಕಂತುಗಳ ರೂಪದಲ್ಲಿ ಹೂಡಿಕೆ ಮಾಡಿದ್ದರು. ಕಳೆದ ಒಂದು ವಾರದಿಂದ ಮೋಹನ್ ಜ್ಯುವೆಲರಿ ಅಂಗಡಿ ಬಾಗಿಲು ಮುಚ್ಚಿದ್ದು, ಮಾಲೀಕ ಮೋಹನ್ ಲಾಲ್ ತಲೆಮರೆಸಿಕೊಂಡಿದ್ದನು. ಆತನ ಮನೆಯೂ ಖಾಲಿಯಾಗಿರುವುದು ಕಂಡು ಬಂದಾಗ ಅನುಮಾನಗೊಂಡ ಗ್ರಾಹಕರು ಅಂಗಡಿಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಹಣ ಕಳೆದುಕೊಂಡ ಸಂತ್ರಸ್ತ ಗ್ರಾಹಕರು ತಕ್ಷಣವೇ ಕುವೆಂಪುನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. “ನಾವು ಕಷ್ಟಪಟ್ಟು ದುಡಿದು ಕಟ್ಟಿದ ಹಣವನ್ನು ನಮಗೆ ವಾಪಸ್ ಕೊಡಿಸಿ” ಎಂದು ಪೊಲೀಸರ ಬಳಿ ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ. ದೂರು ಸ್ವೀಕರಿಸಿದ ಕುವೆಂಪುನಗರ ಠಾಣೆ ಪೊಲೀಸರು ಸದ್ಯ ಜ್ಯುವೆಲರಿ ಮಾಲೀಕ ಮೋಹನ್ ಲಾಲ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಒಟ್ಟು ಎಷ್ಟು ಮೊತ್ತದ ಹಣ ವಂಚನೆಯಾಗಿದೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us