ನೇಪಾಳದಲ್ಲಿ ಮಿತಿ ಮೀರಿದ ಹಿಂಸಾಚಾರ; ಪ್ರತಿಭಟನಾಕಾರರಿಂದ ಮಾಜಿ ಪ್ರಧಾನಿಯ ಪತ್ನಿಯ ಸಜೀವ ದಹನ!

Updated on: Sep 09, 2025 | 7:09 PM

ನೇಪಾಳದ ಪ್ರತಿಭಟನಾಕಾರರು ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ಅವರ ಪತ್ನಿ ರಾಜಲಕ್ಷ್ಮಿ ಜೀವಂತ ದಹನವಾಗಿದ್ದಾರೆ. ಪ್ರತಿಭಟನೆ ಹೆಚ್ಚಾದ ಬೆನ್ನಲ್ಲೇ ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಜನರಲ್-ಝೆಡ್ ಪ್ರತಿಭಟನಾಕಾರರು ನಾಯಕರನ್ನು ಗುರಿಯಾಗಿಸಿಕೊಂಡು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.

ಕಠ್ಮಂಡು, ಸೆಪ್ಟೆಂಬರ್ 9: ನೇಪಾಳದಲ್ಲಿ ಸಾಮಾಜಿಕ ಜಾಲತಾಣದ ಮೇಲಿನ ನಿಷೇಧವನ್ನು ಖಂಡಿಸಿ ಆರಂಭವಾದ ಪ್ರತಿಭಟನೆ ಇದೀಗ ಕ್ರೌರ್ಯದ ರೂಪ ತಳೆದಿದೆ. ಪ್ರತಿಭಟನೆಯ ಕಾವಿನಿಂದ ನೇಪಾಳದ (Nepal Protests) ಪ್ರಧಾನಿ ಕೆ.ಪಿ ಶರ್ಮಾ ಓಲಿ ಈಗಾಗಲೇ ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ನೇಪಾಳದ ಪಾರ್ಲಿಮೆಂಟ್, ಅಧ್ಯಕ್ಷರ ನಿವಾಸ, ಪ್ರಧಾನಿ ಬಂಗಲೆ, ವಿವಿಧ ರಾಜಕೀಯ ನಾಯಕರ ಮನೆಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿ ಬೆಂಕಿ ಹಚ್ಚುತ್ತಿದ್ದಾರೆ. ನೇಪಾಳದ ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ಮನೆಗೂ ಇಂದು ಬೆಂಕಿ ಹಚ್ಚಲಾಗಿದ್ದು, ಈ ವೇಳೆ ಮನೆಯ ಒಳಗಿದ್ದ ಜಲನಾಥ್ ಖಾನಲ್ ಅವರ ಪತ್ನಿ ರಾಜಲಕ್ಷ್ಮಿ ಜೀವಂತವಾಗಿ ಸುಟ್ಟುಹೋಗಿದ್ದಾರೆ. ಬೆಂಕಿಯಿಂದ ಸುಟ್ಟು ಹೋಗಿದ್ದ ರಾಜಲಕ್ಷ್ಮಿ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಲ್ಲಿ ಅವರು ಸಾವನ್ನಪ್ಪಿದರು. ಈ ಹಿಂಸಾಚಾರದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೇಪಾಳದ ಜನರ ಸುರಕ್ಷತೆಯ ಬಗ್ಗೆ ಕಳವಳ ಹೆಚ್ಚಾಗಿದೆ. ಪ್ರತಿಭಟನಾಕಾರರು ಭಯೋತ್ಪಾದಕರಂತೆ ವರ್ತಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Sep 09, 2025 07:05 PM