ಮಂಡ್ಯ, ಮೈಸೂರು ಮತ್ತು ಬೆಂಗಳೂರು ಭಾಗಗಳಿಗೆ ಕುಡಿಯಲು 35 ಟಿಎಂಸಿ ನೀರು ಬೇಕು, ಕೆಆರ್ ಎಸ್ ಲಭ್ಯವಿರೋದು ಕೇವಲ 15 ಟಿಎಂಸಿ ಮಾತ್ರ!

ಅರುಣ್​ ಕುಮಾರ್​ ಬೆಳ್ಳಿ

Updated on: Sep 20, 2023 | 4:33 PM

ಮಳೆಗಾಲ ಹೆಚ್ಚು ಕಡಿಮೆ ಕೊನೆಗೊಂಡಿರುವುದರಿಂದ ಜಲಾಶಯಕ್ಕೆ ನೀರು ಹರಿದು ಬರೋದು ಸಾಧ್ಯವಿಲ್ಲ. ಹಾಗಾಗಿ ಕುಡಿಯುವ ನೀರಿಗಾಗಿ ಭಯಂಕರ ಹಾಹಾಕಾರ ಉಂಟಾಗಲಿದೆ. ನಮ್ಮಲ್ಲಿ ಸ್ಥಿತಿ ಹೀಗಿರುವಾಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ದಿನಕ್ಕೆ 5,000 ಕ್ಯೂಸೆಕ್ಸ್ ನೀರನ್ನು ತಮಿಳುನಾಡುಗೆ ಹರಿಸುವಂತೆ ಹೇಳುತ್ತಿದೆ.

ಮಂಡ್ಯ: ಮೈಸೂರು, ಬೆಂಗಳೂರು ಮತ್ತು ಮಂಡ್ಯ ಭಾಗಗಳಲ್ಲಿ ಈ ವರ್ಷ ಕುಡಿಯುವ ನೀರಿಗಾಗಿ ನಾವ್ಯಾರೂ ಎಣಿಸಿದಷ್ಟು ಸಮಸ್ಯೆ ಎದುರಾಗಲಿದೆ. ಕೆ ಆರ್ ಎಸ್ ಜಲಾಶಯದ (KRS Reservoir) ಸ್ಥಿತಿ ಹೇಗಿದೆ ಅಂತ ಗಮನಿಸದರೆ ಸಮಸ್ಯೆಯ ಆಳ ಅರಿವಾದೀತು. ಟಿವಿ9 ಕನ್ನಡ ವಾಹಿನಿಯ ಮಂಡ್ಯ ವರದಿಗಾರ ಜಲಾಶಯದ ಚಿತ್ರಣ ಇಲ್ಲಿ ನೀಡಿದ್ದಾರೆ. ಅವರು ಹೇಳುವ ಹಾಗೆ ಜಲಾಶಯದಲ್ಲಿ ಈಗ ಕೇವಲ 20 ಟಿಎಂಸಿ ಮಾತ್ರ ನೀರು ಉಳಿದುಕೊಂಡಿದೆ. ಅದರಲ್ಲಿ ಕೇವಲ 15 ಟಿಎಂಸಿ ನೀರನ್ನು ಮಾತ್ರ ಉಪಯೋಗಿಸಿಕೊಳ್ಳಬಹುದಾಗಿದೆ, 5 ಟಿಎಂಸಿ ನೀರನ್ನು ಡೆಡ್ ಸ್ಟೋರೇಜ್ (dead storage) ಆಗಿ ಕಾಯ್ದುಕೊಳ್ಳಲೇಬೇಕು. ಮೇಲೆ ಹೇಳಿರುವ ಭಾಗಗಳಲ್ಲಿ ಕೇವಲ ಕುಡಿಯುವುದಕ್ಕಾಗಿ ಕನಿಷ್ಠ 35 ಟಿಎಂಸಿ ನೀರು ಬೇಕು. ಮಳೆಗಾಲ (monsoon) ಹೆಚ್ಚು ಕಡಿಮೆ ಕೊನೆಗೊಂಡಿರುವುದರಿಂದ ಜಲಾಶಯಕ್ಕೆ ನೀರು ಹರಿದು ಬರೋದು ಸಾಧ್ಯವಿಲ್ಲ. ಹಾಗಾಗಿ ಕುಡಿಯುವ ನೀರಿಗಾಗಿ ಭಯಂಕರ ಹಾಹಾಕಾರ ಉಂಟಾಗಲಿದೆ. ನಮ್ಮಲ್ಲಿ ಸ್ಥಿತಿ ಹೀಗಿರುವಾಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ದಿನಕ್ಕೆ 5,000 ಕ್ಯೂಸೆಕ್ಸ್ ನೀರನ್ನು ತಮಿಳುನಾಡುಗೆ ಹರಿಸುವಂತೆ ಹೇಳುತ್ತಿದೆ. ದೆಹಲಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆಕ ಶಿವಕುಮಾರ್ ಮತ್ತು ಸಚಿವ ಸಂಪುಟದ ಎಲ್ಲ ಸದಸ್ಯರಿಗೆ ವಾಸ್ತವಾಂಶ ಗೊತ್ತಿಲ್ಲದಿಲ್ಲ. ಆದಾಗ್ಯೂ ಅದ್ಹೇಗೆ ಪ್ರಾಧಿಕಾರ ಹೇಳಿದ್ದನ್ನು ಶಿರಸಾವಹಿಸಿ ಪಾಲಿಸುತ್ತಾರೋ? ಕನ್ನಡಿಗರಿಗಂತೂ ಆರ್ಥವಾಗುತ್ತಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.