ಆರ್​ಸಿಬಿ ಚಾಂಪಿಯನ್​ಶಿಪ್ ಗೆಲ್ಲಲಿ ಅಂತ ಮೈಸೂರಲ್ಲಿ ಅಭಿಮಾನಿಗಳಿಂದ ಹೋಮ, ಹವನ

ಅರುಣ್​ ಕುಮಾರ್​ ಬೆಳ್ಳಿ

Updated on: Jun 02, 2025 | 12:35 PM

ದೇವಸ್ಥಾನದ ಅರ್ಚಕರೂ ಸಹ ಕ್ರಿಕೆಟ್ ಪ್ರೇಮಿಗಳು ಮತ್ತು 35 ವರ್ಷಗಳ ಹಿಂದೆ ಕ್ರಿಕೆಟ್ ಆಡಿದವರು. ಅರ್​ಸಿಬಿ ಟೀಮು ಗೆಲ್ಲಲಿ ಅಂತ ಇವತ್ತು ದೇವಸ್ಥಾನದಲ್ಲಿ ವಿಜಯದುರ್ಗ ಹೋಮ ಮಾಡಿಸಲಾಗಿದೆ, ಹಾಗೆಯೇ ಅಮೃತೇಶ್ವರನಿಗೆ ರುದ್ರಾಭಿಷೇಕ ಮಾಡಿಸುವ ಜೊತೆಗೆ ಸತ್ಯನಾರಾಯಣ ಪೂಜೆಯನ್ನೂ ನೆರವೇರಿಸಲಾಗಿದೆ ಎಂದು ಹೇಳಿದ ಅರ್ಚಕರು, ಕಳೆದ 18 ವರ್ಷಗಳಲ್ಲಿ ಆರ್​ಸಿಬಿಗೆ ಸಾಧ್ಯವಾಗದ್ದನ್ನು ಈ ಬಾರಿ ಸಾಧಿಸಲಿ ಅನ್ನೋದು ಎಲ್ಲರ ಸಂಕಲ್ಪವಾಗಿದೆ ಎಂದರು.

ಮೈಸೂರು, ಜೂನ್ 2: ಕ್ರಿಕೆಟ್ ಅನ್ನು ಅಮೋಘ ಅನಿಶ್ಚಿತತೆಗಳ ಅದ್ಭುತ ಆಟ (game of glorious uncertainties) ಎಂದು ಬಣ್ಣಿಸುತ್ತಾರೆ. ಟಿ20 ಅವೃತಿಯಂತೂ ಮತ್ತಷ್ಟು ಚಂಚಲ. ಕ್ವಾಲಿಫೈಯರ್ 1 ರಲ್ಲಿ ಆರ್​ಸಿಬಿಗೆ ಸುಲಭವಾಗಿ ಸೋತು ಕ್ವಾಲಿಫೈಯರ್ 2 ರಲ್ಲಿ ಐದು ಬಾರಿ ಐಪಿಎಲ್ ಚಾಂಪಿಯನ್​ಶಿಪ್ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡವನ್ನು ರೋಚಕ ಪಂದ್ಯವೊಂದರಲ್ಲಿ ಸೋಲಿಸಿದ ಪಂಜಾಬ್ ಕಿಂಗ್ಸ್ ಎಲೆವೆನ್ ತಂಡ ಫೈನಲ್ ತಲುಪೀತು ಅಂತ ಯಾರಾದರೂ ಅಂದುಕೊಂಡಿದ್ದರೇ? ವೆಲ್, ನಾಲ್ಕನೇ ಬಾರಿ ಫೈನಲ್ ತಲಪಿರುವ ಬೆಂಗಳೂರು ತಂಡವನ್ನು ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಪಂಜಾಬ್ ನಾಳೆ ಅಹ್ಮದಾಬಾದ್​ನಲ್ಲಿ ಎದುರಿಸಲಿದೆ. ಆರ್​​ಸಿಬಿ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್​ಶಿಪ್ ಗೆಲ್ಲಲಿ ಎಂದು ಮೈಸೂರು ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ ಹರೀಶ್ ಗೌಡ ಅವರ ನೇತೃತ್ವದಲ್ಲಿ ಕ್ರಿಕೆಟ್ ಪ್ರೇಮಿಗಳು ನಗರದ ಅಮೃತೇಶ್ವರ ದೇವಸ್ಥಾನದಲ್ಲಿ ಹೋಮ ಹವನ ಮಾಡಿಸಿದರು.

ಇದನ್ನೂ ಓದಿ:  ಆರ್​ಸಿಬಿಗೆ ಅಂಕಿಅಂಶಗಳ ಬೆಂಬಲ; ಕ್ವಾಲಿಫೈಯರ್-1 ಗೆದ್ದ ತಂಡ ಎಷ್ಟು ಬಾರಿ ಚಾಂಪಿಯನ್‌ ಆಗಿದೆ ಗೊತ್ತಾ?

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.