ಅಂತಿಮ ಹಂತ ತಲುಪಿದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಚರಣೆ, ಸನ್ನದ್ಧ ಸ್ಥಿತಿಯಲ್ಲಿ ಸೇನಾ ಚಾಪರ್

Updated on: Nov 28, 2023 | 6:49 PM

ತಾತ್ಕಾಲಿಕ ಆಸ್ಪತ್ರೆಯೊಂದನ್ನು ನಿರ್ಮಿಸುವುದರ ಜೊತೆಗೆ ಸೇನಾ ಹೆಲಕಾಪ್ಟರ್ ಒಂದನ್ನು ಸಿಲ್ಕ್ಯಾರಾ ಟನೆಲ್ ಬಳಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಕಾರ್ಮಿಕರ ಪೈಕಿ ಯಾರಾದರೂ ತೀವ್ರವಾಗಿ ಅಸ್ವಸ್ಥಗೊಂಡಿದ್ದರೆ ಡೆಹ್ರಾಡೂನ್ ನಲ್ಲಿರುವ ದೊಡ್ಡ ಆಸ್ಪತ್ರೆಗಳಿಗೆ ಏರ್ ಲಿಫ್ಟ್ ಮಾಡಲಾಗುವುದು. ಆದರೆ ಸಿಲುಕಿರುವ ಎಲ್ಲ ಕಾರ್ಮಿಕರು ನಿಸ್ಸಂದೇಹವಾಗಿ ಗಂಡೆದೆಯವರು. 17 ದಿನಗಳ ಕಾಲ ಅಂಥ ಸ್ಥಿತಿಯಲ್ಲಿ ಜೀವಿಸುವುದು ಸಾಮಾನ್ಯ ಸಂಗತಿಯಲ್ಲ.

ಉತ್ತರಾಖಂಡ್: ರಾಜ್ಯದ ಸಿಲ್ಕ್ಯಾರಾ ಸುರಂಗದಲ್ಲಿ (Silkyara tunnel) ಕಳೆದ 17 ದಿನಗಳಿಂದ ಸಿಲಿಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ (rescue operation) ಅಂತಿಮ ಹಂತ ತಲುಪಿದೆ ಎಂಬ ವರದಿಗಳು ಲಭ್ಯವಾಗುತ್ತಿವೆ. ಅವರು ಸಿಲುಕಿರುವ ಸ್ಥಳ ತಲುಪಲು ಏನೆಲ್ಲ ಸಾಹಸಗಳನ್ನು ಮಾಡಲಾಯಿತು ಅನ್ನೋದನ್ನು ನಾವು ನಿರಂತರವಾಗಿ ವರದಿ ಮಾಡಿದ್ದೇವೆ. ಎನ್ ಡಿ ಆರ್ ಎಫ್ ತಂಡ (NDRF team) ಸದಸ್ಯರಲ್ಲಿ ಒಬ್ಬರಾಗಿರುವ ಸಯ್ಯದ್ ಹುಸ್ನೇನ್ ಹೇಳುವ ಪ್ರಕಾರ ಕಾರ್ಮಿಕರಿರುವ ಸ್ಥಳವನ್ನು ತಲುಪಲು ಈಗ ಕೇವಲ 1.5-2 ಮೀಟರ್ ಮಾತ್ರ ಕೊರೆಯುವ ಅವಶ್ಯಕತೆಯಿದ್ದು ಅದು ಬೇಗ ಕೊನೆಗೊಳ್ಳಲಿದೆಯಂತೆ. ಅವರ ತಂಡವೇ ರಕ್ಷಣಾ ಕಾರ್ಯಾಚರಣೆಯ ಮುಂಚೂಣಿಯಲ್ಲಿದೆ. ಮಾಹಿತಿಯೊಂದರ ಪ್ರಕಾರ ರಕ್ಷಣಾ ಕಾರ್ಯಕ್ಕೆ ನಿರ್ಮಿಸಲಾಗಿರುವ ಪೈಪ್ ಪೈನ್ ನಲ್ಲಿ ಸ್ಟ್ರೆಚರ್ ಗಳನ್ನು ದೂಡಿ ಕಾರ್ಮಿಕರನ್ನು ಒಬ್ಬೊಬ್ಬರಾಗಿ ಹೊರತರಲಾಗವುದು. ಒಬ್ಬ ಕಾರ್ಮಿಕನನ್ನು ಹೊರತರಲು ಕನಿಷ್ಟವೆಂದರೂ 5 ನಿಮಿಷ ತಗುಲಲಿದೆ. ಹೊರಬಂದ ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ಒದಗಿಸಲು 41 ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆಯೊಂದನ್ನು ಸ್ಥಳದಲ್ಲಿ ನಿರ್ಮಿಸಲಾಗಿದೆ. ಕಾರ್ಯಾಚರಣೆ ಬೇಗ ಪೂರ್ಣಗೊಂಡು ಎಲ್ಲ ಕಾರ್ಮಿಕರು ಸುರಕ್ಷಿತವಾಗಿ ಹೊರಬರಲಿ ಅಂತ ಭಾರತೀಯರೆಲ್ಲ ಪ್ರಾರ್ಥಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More