Video: ಸರ್ಕಾರಿ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿದ ಅತಿಥಿ ಉಪನ್ಯಾಸಕರು
ಸರ್ಕಾರದ ಹೊಸ ಆದೇಶದಿಂದ ಅತಿಥಿ ಉಪನ್ಯಾಸಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಡ್ಯ, ದೃಪತುಂಗ ಮತ್ತು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯಗಳು ಅತಿಥಿ ಉಪನ್ಯಾಸಕರಿಗೆ ವೇತನ ನೀಡುವ ಹೊಣೆ ಹೊರುವಂತೆ ಆದೇಶಿಸಿದೆ. ಆರ್ಥಿಕವಾಗಿ ಸಬಲವಲ್ಲದ ವಿಶ್ವವಿದ್ಯಾಲಯಗಳಿಗೆ ಇದು ದೊಡ್ಡ ಹೊರೆಯಾಗಿದ್ದು, ಉಪನ್ಯಾಸಕರು ಭವಿಷ್ಯದ ಸೌಲಭ್ಯಗಳ ನಷ್ಟದ ಭೀತಿಯಲ್ಲಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯೇ ವೇತನ ನೀಡಬೇಕೆಂದು ಒತ್ತಾಯಿಸಿ, ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯ: ಕರ್ನಾಟಕದ ಅತಿಥಿ ಉಪನ್ಯಾಸಕರು ಸರ್ಕಾರದ ಹೊಸ ಆದೇಶದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಕಾಲೇಜು ಶಿಕ್ಷಣ ಇಲಾಖೆಯಿಂದ ನೇಮಕಾತಿಗೊಂಡು ವೇತನ ಪಡೆಯುತ್ತಿದ್ದ ಅತಿಥಿ ಉಪನ್ಯಾಸಕರಿಗೆ, ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಮಂಡ್ಯ, ದೃಪತುಂಗ ಮತ್ತು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯಗಳೇ ವೇತನ ನೀಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವು ಕೌನ್ಸೆಲಿಂಗ್ ಪ್ರಕ್ರಿಯೆ ಮುಗಿದ ನಂತರ ಬಂದಿರುವುದು ಉಪನ್ಯಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.
ಮಂಡ್ಯ ವಿಶ್ವವಿದ್ಯಾಲಯ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದು, 160ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ವೇತನದ ಹೊರೆ ಹೊರಲು ಸಿದ್ಧವಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದಾಗಿ, ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಭವಿಷ್ಯದ ಆತಂಕ ಎದುರಾಗಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬಂದರೆ ಪ್ರಸ್ತುತ ಸಿಗುತ್ತಿರುವ ಸೇವಾ ಹಿರಿತನ, ಸರ್ಕಾರಿ ವೇತನ, ನಿವೃತ್ತಿ ಸೌಲಭ್ಯಗಳು ಸೇರಿದಂತೆ ಮಹಿಳಾ ಉಪನ್ಯಾಸಕರಿಗೆ ಲಭ್ಯವಿರುವ ರಜೆ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ಉಪನ್ಯಾಸಕರು ದೂರಿದ್ದಾರೆ. ಅಂದಾಜು 300ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಈ ಆದೇಶದಿಂದ ಬಾಧಿತರಾಗಿದ್ದು, ಕೂಡಲೇ ಉನ್ನತ ಶಿಕ್ಷಣ ಇಲಾಖೆಯೇ ತಮ್ಮ ವೇತನದ ಹೊಣೆ ಹೊರಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲವಾದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 11, 2026 12:06 PM
ಗೆಳೆಯ ವಾಸುಕಿ ವೈಭವ್ ಕಾನ್ಸರ್ಟ್ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್ಒ ಸೇತುವೆ
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು

