ಶ್ರೀಗಳು ಹೇಳಿದ ಮಾತ್ರಕ್ಕೆ ಮುಖ್ಯಮಂತ್ರಿ ಬದಲಾವಣೆ ಆಗಲ್ಲ, ಅದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ: ಶಾಮನೂರು ಶಿವಶಂಕರಪ್ಪ

|

Updated on: Jun 27, 2024 | 4:45 PM

ಸತೀಶ್ ಜಾರಕಿಹೊಳಿಯವರನ್ನು ಉಪ ಮುಖ್ಯಮಂತ್ರಿ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ ಅಂತ ಪತ್ರಕರ್ತರು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಶಿವಶಂಕರಪ್ಪನವರು, ಅದೆಲ್ಲ ಆಗದ ಮಾತು, ಯಾರೇನೇ ಹೇಳಿಕೊಂಡು ತಿರುಗಿದರೂ ಕೊನೆಗೆ ನಿರ್ಧಾರ ತೆಗೆದುಕೊಳ್ಳೋದು ಹೈಕಮಾಂಡ್ ಮಾತ್ರ. ಬೇರೆಯವರು ಆಡುವ ಮಾತುಗಳಿಗೆ ನೆಲೆಯಿಲ್ಲ ಬೆಲೆಯಿಲ್ಲ ಎಂದರು.

ದಾವಣಗೆರೆ: ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರ ಶ್ರೀಗಳು ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಅಂತ ಹೇಳಿ ರಾಜ್ಯ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ. ದಾವಣಗೆರೆಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಶ್ರೀಗಳು ಆಡಿರುವ ಮಾತಿನ ಬಗ್ಗೆ ಹೇಳಿದಾಗ, ಅವರು ಸುಮಾರು 15-20 ಸಲ ಹೈಕಮಾಂಡ್ ಪದ ಬಳಸಿದರು. ಶ್ರೀಗಳು ಹೇಳಿದ್ದಾರೆಂಬ ಕಾರಣಕ್ಕೆ ಮುಖ್ಯಮಂತ್ರಿಯವರನ್ನು ಬದಲಾಯಿಸಲಾಗುತ್ತದೆಯೇ? ಹೈಕಮಾಂಡ್ ಗೆ ಯಾವಾಗ ಏನು ಮಾಡಬೇಕು ಅಂತ ಚೆನ್ನಾಗಿ ಗೊತ್ತಿದೆ ಎಂದು ಹಿರಿಯ ನಾಯಕ ಹೇಳಿದರು. ಸಿದ್ದರಾಮಯ್ಯ ಸರಿಯಾಗಿ ಆಡಳಿತ ನಡೆಸುತ್ತಿಲ್ಲವೆಂಬ ಕಾರಣಕ್ಕೆ ಅವರನ್ನು ಬದಲಾಯಿಸಬೇಕೆಂಬ ಮಾತು ಕೇಳಿಬರುತ್ತಿದೆಯೇ ಅಂತ ಕೇಳಿದ್ದಕ್ಕೆ ರೇಗಿದ ಶಿವಶಂಕರಪ್ಪನವರು, ಯಾರು ಹೇಳಿದ್ದು ಅವರ ಆಡಳಿತ ಚೆನ್ನಾಗಿ ನಡೆಸುತ್ತಿಲ್ಲ ಅಂತ? ಬಹಳ ಚೆನ್ನಾಗಿ ಅವರು ಸರ್ಕಾರ ನಡೆಸುತ್ತಿದ್ದಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಿದ್ದರಾಮಯ್ಯನವರೇ ದಯವಿಟ್ಟು ಡಿಕೆ ಶಿವಕುಮಾರ್​ಗೆ ಸಿಎಂ ಸ್ಥಾನ ಬಿಟ್ಟುಕೊಡಿ: ಚಂದ್ರಶೇಖರಶ್ರೀ ಮನವಿ

Follow us on