ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ (Jagadish Shettar) ಹೇಳುವ ಪ್ರಕಾರ ರಾಜ್ಯ ಬಿಜೆಪಿ ಮತ್ತು ನಾಯಕರ ಬಗ್ಗೆ ವರಿಷ್ಠರಿಗೆ ಕಿಂಚಿತ್ತೂ ಕಾಳಜಿ ಇಲ್ಲ, ನಿನ್ನೆ ಬೆಂಗಳೂರಲ್ಲಿ ವಿಜಯೇಂದ್ರ ರಾಜ್ಯಾಧ್ಯರಾಗಿ ಪದಗ್ರಹಣ ಮಾಡಿದ ಸಮಾರಂಭಕ್ಕೆ ದೆಹಲಿಯಿಂದ ಒಬ್ಬೇಒಬ್ಬ ವೀಕ್ಷಕ (overseer) ಆಗಮಿಸದಿರುವುದು ರಾಜ್ಯ ಬಿಜೆಪಿ ಈಗಿನ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಶೆಟ್ಟರ್ ಹೇಳಿದರು. ರಾಜ್ಯದ ಹಿರಿಯ ಬಿಜೆಪಿ ನಾಯಕರನ್ನು ಮೂಲೆಗುಂಪು ಮಾಡುವ ಸಂಪ್ರದಾಯ ವರಿಷ್ಠರಲ್ಲಿ ಆರಂಭವಾಗಿದೆ. ಮೊನ್ನೆ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ (DV Sadananda Gowda) ಅವರನ್ನು ದೆಹಲಿಗೆ ಕರೆಸಿ ಮೂರು ದಿನಗಳವರೆಗೆ ಅವರೊಂದಿಗೆ ಮಾತು ಕೂಡ ಆಡದೆ ವಾಪಸ್ಸು ಕಳಿಸಿದ್ದು ರಾಜ್ಯ ನಾಯಕರಿಗೆ ಯಾವ ಗೌರವ ಇದೆ ಅನ್ನೋದು ಗೊತ್ತಾಗುತ್ತದೆ ಎಂದು ಶೆಟ್ಟರ್ ಹೇಳಿದರು. ಆದರೆ ಹಿರಿಯರನ್ನು ಕಡೆಗಣಿಸಿದರೆ ಏನಾಗುತ್ತದೆ ಅನ್ನೋದು ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಅವರಿಗೆ ಗೊತ್ತಾಗಿದೆ ಅಂತ ಅವರು ಹೇಳಿದರು.
ತನಗೆ ಟಿಕೆಟ್ ನೀಡದ ಕಾರಣವನ್ನು ಯಾರೂ ಇದುವರೆಗೆ ತಿಳಿಸಿಲ್ಲ ಎಂದು ಹೇಳಿದ ಶೆಟ್ಟರ್ ವರಿಷ್ಠರ ಇಬ್ಬಗೆಯ ನೀತಿ ಅರ್ಥವಾಗುತ್ತಿಲ್ಲ ಅನ್ನುತ್ತಾರೆ. 75 ಕ್ಕಿಂತ ಹೆಚ್ಚಿನ ಪ್ರಾಯದವರಿಗೆ ಟಿಕೆಟ್ ಇಲ್ಲ ಅಂತ ಹೇಳಿದವರು ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ ಗಢ್ ನಲ್ಲಿ ನೀಡಿದ್ದಾರೆ ಎಂದರು. ಹೊಸ ಸರ್ಕಾರ ರಚನೆಯಾಗಿ 6 ತಿಂಗಳು ಕಳೆದರೂ ವಿರೋಧ ಪಕ್ಷದ ನಾಯಕನ ಆಯ್ಕೆ ಇನ್ನೂ ಆಗಿಲ್ಲ, ಬೆಳಗಾವಿ ವಿಧಾನ ಸಭೆ ಅದಿವೇಶನಕ್ಕೆ ಮೊದಲು ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಶೆಟ್ಟರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ