ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆಯಾಗಿರುವ ಸುಮಲತಾ ಅಂಬರೀಶ್ (Sumalatha Ambareesh) ಅವರಿಗೆ ಬಿಜೆಪಿ ವರಿಷ್ಠರು ಟಿಕೆಟ್ ನೀಡಲಿ ಅಥವಾ ನಿರಾಕರಿಸಲಿ ಅವರ ಸ್ಪರ್ಧೆ ಮಾತ್ರ ನಿಶ್ಚಿತ ಎಂದು ಸಂಸದೆಯ ಆಪ್ತ ಹನಕೆರೆ ಶಶಿಕುಮಾರ್ (Hanakere Shashikumar) ಹೇಳುತ್ತಾರೆ. ನಗರದಲ್ಲಿಂದು ಟಿವಿ9 ಮಂಡ್ಯ ವರದಿಗಾರನೊಂದಿಗೆ ಮಾತಾಡಿರುವ ಶಶಿಕುಮಾರ್, ಬಿಜೆಪಿಗೆ ಸಂಸದೆ ಸುಮಲತಾ ಬಾಹ್ಯ ಬೆಂಬಲ ನೀಡಿರುವುದರಿಂದ ಪಕ್ಷದ ಬೆಂಬಲಿತ ಅಥವಾ ಎನ್ ಡಿಎ ಒಕ್ಕೂಟದ ಅಭ್ಯರ್ಥಿಯಾಗಿ (NDA candidate) ಸ್ಪರ್ಧಿಸಲು ಟಿಕೆಟ್ ಕೋರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ ಹಾಗಾಗಿ ಟಿಕೆಟ್ ಸಿಗುವ ನಿರೀಕ್ಷೆ ಇಟ್ಟಿಕೊಂಡಿದ್ದಾರೆ ಎಂದು ಹೇಳಿದರು. ಆದರೆ, ಜೆಡಿಎಸ್ ಅಭ್ಯರ್ಥಿಗೆ ಮಂಡ್ಯ ಕ್ಷೇತ್ರ ಬಿಟ್ಟು ಕೊಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಮತ್ತು ಕಾಂಗ್ರೆಸ್ ಕೂಡ ತನ್ನ ಸಂಭಾವ್ಯ ಕ್ಯಾಂಡಿಡೇಟ್ ಪರ ಪ್ರಚಾರ ಆರಂಭಿಸಿದೆ ಅಂತ ಹೇಳಿದಾಗ ಶಶಿ, ಎನ್ ಡಿಎ ಟಿಕೆಟ್ ಸಿಗುವ ಆಶಾಭಾವನೆಯಂತೂ ಇದೆ, ಆದರೆ ಕಾಂಗ್ರೆಸ್ ಇನ್ನೂ ಅಧಿಕೃತವಾಗಿ ತನ್ನ ಅಭ್ಯರ್ಥಿಯ ಹೆಸರು ಘೋಷಣೆ ಮಾಡಿಲ್ಲ. ಅದೇನೇ ಇರಲಿ, ರಾಷ್ಟ್ರೀಯ ಪಕ್ಷಗಳ ಟಿಕೆಟ್ ಸಿಗದಿದ್ದರೂ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿಯಲಿದ್ದಾರೆ ಎಂದು ಶಶಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ