ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದ ಕನ್ನಡದ ಹೆಸರಾಂತ ನಟಿ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಅವರು ಫಜೀತಿ ಅನುಭವಿಸಿ, ಕಷ್ಟಪಟ್ಟು ಬೆಂಗಳೂರಿಗೆ ಬಂದಿದ್ದಾರೆ. ತಿರುಪತಿ ಸೇರಿದಂತೆ ಆಂಧ್ರ ಪ್ರದೇಶದ ಚಿತ್ತೂರು ಮತ್ತು ಅನಂತಪುರ ಜಿಲ್ಲೆಗಳಲ್ಲಿ ಶುಕ್ರವಾರ ಬೆಳಗ್ಗೆಯಿಂದ ಮಳೆ ಸುರಿಯುತ್ತಿದೆ. ತಾರಾ ಅವರು ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಹೋದಾಗ ಮಳೆಯಲ್ಲಿ ಸಿಕ್ಕಿಕೊಂಡಿದ್ದಾರೆ. ಅವರ ಕಾರು ಬೆಟ್ಟ ಹತ್ತುವ ಮೊದಲೇ ಜೋರಾಗಿ ಮಳೆ ಸುರಿಯಲಾರಂಭಿಸಿದೆ. ಮಳೆ ಬಹಳ ರಭಸದಿಂದ ಸುರಿಯುತ್ತಿತ್ತು, ನಾವು ಬೆಟ್ಟದ ಮೇಲೆ ಹೋಗುವ ಪ್ರಯತ್ನ ಮಾಡಿದ್ದರೆ, ಅಪಾಯಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇರುತಿತ್ತು ಎಂದು ಬೆಂಗಳೂರಿಗೆ ವಾಪಸ್ಸು ಬಂದ ನಂತರ ತಾರಾ ಸುದ್ದಿಗಾರರಿಗೆ ತಿಳಿಸಿದರು.
ತಿರುಪತಿಯಲ್ಲಿ ವರುಣ ತಲ್ಲಣ ಸೃಷ್ಟಿಸಿದ್ದ್ದಾನೆ. ವೆಂಕಟಾದ್ರಿಯ ಶಿಖರದ ಮೇಲೆ ತಿಮ್ಮಪ್ಪನ ದೇವಸ್ಥಾನ ಇದ್ದು ಮಳೆ ನೇರವಾಗಿ ಅದರ ಮೇಲೆಯೇ ಸುರಿಯುತ್ತಿದೆ ಮತ್ತು ಗರ್ಭಗುಡಿಯೊಳಗೂ ನೀರು ಪ್ರವೇಶಿಸುತ್ತಿದೆ. ದೇವಸ್ಥಾನದ ಆವರಣವೆಲ್ಲ ಜಲಾವೃತಗೊಂಡಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡ ದೇವಸ್ಥಾನದ ಅಡಳಿತ ಮಂಡಳಿಯು ಎರಡು ದಿನಗಳ ಕಾಲ ಅಂದರೆ, ಶುಕ್ರವಾರ ಮತ್ತು ಶನಿವಾರದಂದು ಗುಡಿಯನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡಿದೆ.
ತಾರಾ ಅವರು ಕಾರಿನಲ್ಲೇ ಕುಳಿತೇ ತಿರುಪತಿಯಲ್ಲಿ ಮಳೆ ಸುರಿಯತ್ತಿರುವ ಮತ್ತು ರಸ್ತೆ ಮೇಲೆ ನೀರು ರಭಸದಿಂದ ಹರಿದು ಹೋಗುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಅವರು ತೋರಿಸುತ್ತಿರುವ ದೃಶ್ಯವೆಲ್ಲ ನೀರು ಆವರಿಸಿಕೊಂಡಿದೆ. ಅವರ ಡ್ರೈವರ್ ಯಾವುದೋ ಕಟ್ಟೆ ಒಡೆದಿರಬೇಕು ಅಂತ ಹೇಳುತ್ತಿದ್ದಾನೆ.
ತಿರುಪತಿವರೆಗೆ ಹೋದರೂ ತಿಮ್ಮಪ್ಪನ ದರ್ಶನ ಸಾಧ್ಯವಾಲಿಲ್ಲ ಎಂಬ ಬೇಸರಿಕೆಯಿದೆಯಾದರೂ ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದು ಸಂತಸವಾಗಿದೆ ಎಂದು ತಾರಾ ಹೇಳಿದರು.
ಇದನ್ನೂ ಓದಿ: Nayanthara- Vignesh Shivan: ಹುಟ್ಟುಹಬ್ಬಕ್ಕೆ ಗೆಳೆಯ ನೀಡಿದ ಅದ್ದೂರಿ ಸರ್ಪ್ರೈಸ್ಗೆ ನಯನತಾರಾ ಫಿದಾ; ವಿಡಿಯೋ ನೋಡಿ
Published On - 12:53 am, Sat, 20 November 21