ಗದಗ: ಈ ವಿಡಿಯೋವನ್ನು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್ (HK Patil) ಗಮನಿಸಬೇಕು. ಧನಂಜಯ್ ಮಾಲಗತ್ತಿ (Dhananjay Malagatti) ಹೆಸರಿನ ಮುಂಡರಗಿ ತಾಲ್ಲೂಕಿನ ತಹಸೀಲ್ದಾರ್ ತನ್ನನ್ನು ತಾನು ಪಟ್ಟಣದ ಮಹಾರಾಜನಂತೆ ಪ್ರೊಜೆಕ್ಟ್ ಮಾಡಿಕೊಂಡಂತಿದೆ. ಇಲ್ನೋಡಿ, ಈ ಮಹಾಶಯ ತನ್ನ ಹುಟ್ಟುಹಬ್ಬವನ್ನು (birthday) ಒಂದು ಉತ್ಸವದಂತೆ ಆಚರಿಸಿಕೊಂಡಿದ್ದಾನೆ. ರಾಜ್ಯ ಎಂಥ ಸಂಕಷ್ಟದಲ್ಲಿದೆ ಎಂಬ ಕಿಂಚಿತ್ ಪರಿವೆಯೂ ಅವನಿಗಿದ್ದಂತಿಲ್ಲ. ರೈತರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ. ರಾಜ್ಯದ ಪ್ರಮುಖ ನಗರಗಳಲ್ಲಿ ಬೇಸಿಗೆಯಲ್ಲಿ ಕುಡಿಯಲು ಸಹ ನೀರು ಸಿಗದ ಆತಂಕವಿದೆ. ರೈತರ ದನಕರುಗಳಿಗೆ ತಿನ್ನಲು ಮೇವಿಲ್ಲ. ಇದ್ದಬದ್ದ ಹಣವನ್ನೆಲ್ಲ ಗ್ಯಾರಂಟಿ ಯೋಜನೆಗಳಿಗೆ ತೆಗೆದಿರಿಸಿರುವ ರಾಜ್ಯ ಸರ್ಕಾರ ಬರ ಪರಿಹಾರ ನಿಧಿಗಾಗಿ ದೈನ್ಯತೆಯಿಂದ ದೆಹಲಿ ಕಡೆ ಮುಖ ಮಾಡಿದೆ. ಡಿಸೆಂಬರ್-ಜನೆವರಿ ಕಳೆದರೆ ತಿನ್ನಲು ಕೂಳು ಕುಡಿಯಲು ನೀರಿಲ್ಲದ ಸ್ಥಿತಿ ನಿರ್ಮಾಣವಾಗಲಿದೆ. ಪರಿಸ್ಥಿತಿ ಹೀಗಿರುವಾಗ, ಧನಂಜಯ ಮುಂಡರಗಿಯ ರಾಜಕುಮಾರನಂತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಮೇಲಧಿಕಾರಿಗಳು, ಶಾಸಕರು ಅಥವಾ ಸಚಿವರು ಪ್ರಶ್ನಿಸಿದರೆ ಅವನಲ್ಲಿ ಉತ್ತರ ರೆಡಿ ಇರುತ್ತದೆ: ಊರವರು ಆಚರಿಸಿದ್ದಾರೆ, ನಾನಲ್ಲ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ