ಬೆಳ್ಳಂಬೆಳಗ್ಗೆಯೇ ಮದ್ದೂರಿನಲ್ಲಿ ಪ್ರತ್ಯಕ್ಷವಾದ ಕಾಡಾನೆ ಹಿಂಡು: ವಿಡಿಯೋ ನೋಡಿ

| Updated By: ಗಣಪತಿ ಶರ್ಮ

Updated on: May 27, 2024 | 9:15 AM

ಮದ್ದೂರಿನ ಹೊಳೆ ಆಂಜನೇಯ ದೇಗುಲದ ಬಳಿ ಶಿಂಷಾ ನದಿಯಲ್ಲಿ ಬೆಳ್ಳಂಬೆಳಗ್ಗೆಯೇ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದೆ. ಎಚ್ಚರಿಕೆಯಿಂದ ಇರುವಂತೆ ಸ್ಥಳೀಯರಿಗೆ, ರೈತರಿಗೆ ಅರಣ್ಯ ಇಲಾಖೆ ಸೂಚನೆ ನೀಡಿದ್ದು, ಸಂಜೆ ವೇಳೆಗೆ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಹಮ್ಮಿಕೊಳ್ಳಲಿದೆ.

ಮಂಡ್ಯ, ಮೇ 27: ಮಂಡ್ಯ (Mandya) ಜಿಲ್ಲೆಯ ಮದ್ದೂರು (Maddur) ಪಟ್ಟಣದಲ್ಲಿರುವ ಹೊಳೆ ಆಂಜನೇಯ ದೇವಾಲಯದ ಬಳಿ ಶಿಂಷಾ ನದಿ ಸಮೀಪ ಸೋಮವಾರ ಬೆಳ್ಳಂಬೆಳಗ್ಗೆಯೇ ಕಾಡಾನೆ (Wild Elephants) ಹಿಂಡು ಕಾಣಿಸಿಕೊಂಡಿದೆ. ಹಿಂಡಿನಲ್ಲಿ 6 ಆನೆಗಳಿದ್ದು, ಕಾವೇರಿ ವನ್ಯಧಾಮದ (Cauvery Wildlife Sanctuary) ಕಡೆಯಿಂದ ಮದ್ದೂರಿಗೆ ಬಂದಿವೆ ಎಂದು ಹೇಳಲಾಗಿದೆ. ಸಂಜೆಯ ಬಳಿಕ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

ಆನೆಗಳು ಸದ್ಯ ಹೊಳೆ ಆಂಜನೇಯ ದೇವಾಲಯದ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸುತ್ತಾಡುತ್ತಿವೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಸ್ಥಳೀಯರಿಗೆ, ರೈತರಿಗೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

ಇತ್ತೀಚೆಗೆ ಮಂಡ್ಯವೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವನ್ಯ ಪ್ರಾಣಿಗಳು ಹಾಗೂ ಮಾನವನ ನಡುವಣ ಸಂಘರ್ಷ ಹೆಚ್ಚುತ್ತಿವೆ. ಅದರಲ್ಲಿಯೂ ಕಾಡಾನೆ ದಾಳಿಯಿಂದ ಕಳೆದ ಹಲವು ದಿನಗಳಲ್ಲಿ ಅನೇಕ ಮಂದಿ ಮೃತಪಟ್ಟಿದ್ದಾರೆ. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿಯೂ ಕಾಡಾನೆ ಹಾವಳಿ ಮಿತಿ ಮೀರಿದೆ. ಚಾರ್ಮಾಡಿ ಘಾಟಿ ರಸ್ತೆಯಲ್ಲಂತೂ ಕಳೆದ ಒಂದೆರಡು ತಿಂಗಳ ಅವಧಿಯಲ್ಲಿ ಹಲವು ಬಾರಿ ವಾಹನ ಸವಾರರಿಗೆ ಕಾಡಾನೆಯ ದರ್ಶನವಾಗಿದೆ. ಇತ್ತೀಚೆಗೆ ಒಂದು ಬಾರಿಯಂತೂ ದ್ವಿಚಕ್ರ ವಾಹನ ಸವಾರರೊಬ್ಬರು ಕೂದಲೆಳೆ ಅಂತರದಲ್ಲಿ ಕಾಡಾನೆ ದಾಳಿಯಿಂದ ಪಾರಾಗಿದ್ದರು.

ಇದನ್ನೂ ನೋಡಿ: ಕಾವೇರಿ ನದಿಗೆ ಸೇರ್ತಿದೆ ಮೈಸೂರಿನ ಕೊಳಚೆ ನೀರು; ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಜೀವನದಿ ಕಲುಷಿತ

ವನ್ಯ ಪ್ರಾಣಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಮತ್ತು ಕಾಡಾನೆ ದಾಳಿಗಳಿಂದ ಸಾರ್ವಜನಿಕರ ಜೀವ ರಕ್ಷಿಸುವುದಕ್ಕಾಗಿ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on