ಇಲ್ಲಿ ನಮ್ಮ ಮಾತಿಗೆ ಗೌರವವೇ ನೀಡುತ್ತಿಲ್ಲ ಅಧಿಕಾರಿಗಳು: ಸಂಸದ ಯದುವೀರ್ ಒಡೆಯರ್
ಮೈಸೂರಿನಲ್ಲಿ ಕುಕ್ಕರಹಳ್ಳಿ ಕೆರೆ ಅಂಡರ್ಪಾಸ್ ಯೋಜನೆ, ಮರಗಳ ಸ್ಥಳಾಂತರ ಮತ್ತು ಇತರೆ ಅಭಿವೃದ್ಧಿ ಕಾರ್ಯಗಳ ಕುರಿತು ಯದುವೀರ್ ಮಾಹಿತಿ ನೀಡಿದರು. ಅಧಿಕಾರಿಗಳು ಜನಪ್ರತಿನಿಧಿಗಳ ಸಲಹೆಗೆ ಗೌರವ ನೀಡದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿರುವುದು, ಎಂಸಿಸಿ ಕೌನ್ಸಿಲ್ ಇಲ್ಲದೆ ನಿರ್ಧಾರಗಳು ಆಗುತ್ತಿರುವುದು ಹಾಗೂ ಹೆಬ್ಬಾಳ ಕೆರೆ ಮಾಲಿನ್ಯದ ಬಗ್ಗೆ ಯದುವೀರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು, ಏ.7: ನಗರದ ಅಭಿವೃದ್ಧಿ ಯೋಜನೆಗಳು ಮತ್ತು ಆಡಳಿತದ ಕುರಿತು ಯದುವೀರ್ ಅವರು ಮಾತನಾಡಿದ್ದಾರೆ. ಕುಕ್ಕರಹಳ್ಳಿ ಕೆರೆ ಬಳಿ ರೈಲ್ವೆ ಕ್ರಾಸಿಂಗ್ನಲ್ಲಿ ಅಂಡರ್ಪಾಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಳಂಬವಾಗಿದ್ದ ಕಾರ್ಯಗಳಿಗೆ ಇಲಾಖೆಗಳ ಅನುಮತಿ ದೊರೆತಿದ್ದು, 15 ದಿನಗಳಲ್ಲಿ ಕೆಲಸ ಆರಂಭವಾಗಲಿದೆ ಎಂದು ತಿಳಿಸಿದರು. ಈ 63 ಕೋಟಿ ರೂಪಾಯಿ ಯೋಜನೆಯಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗಿದ್ದು, ಮರಗಳನ್ನು ಸ್ಥಳಾಂತರ ಮಾಡಲು ಕೇರಳದ ಎನ್ಜಿಒ ಸಹಯೋಗದೊಂದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಬ್ಬಾಳ ಕೆರೆಯ ಯುಜಿಡಿ ನೀರಿನ ಮಿಶ್ರಣದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಯದುವೀರ್, ಜನಪ್ರತಿನಿಧಿಗಳ ಸಲಹೆಗಳಿಗೆ ಅಧಿಕಾರಿಗಳು ಗೌರವ ನೀಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಎಂಸಿಸಿ ಕೌನ್ಸಿಲ್ ಇಲ್ಲದೆ ನಿರ್ಧಾರಗಳು ಕೈಗೊಳ್ಳಲಾಗುತ್ತಿದ್ದು, ಇದು ಮೈಸೂರಿನ ಆಡಳಿತಕ್ಕೆ ಮಾರಕವಾಗಿದೆ ಎಂದರು. ಅನಗತ್ಯ ಸಿಗ್ನಲ್ ಲೈಟ್ಗಳ ಅಳವಡಿಕೆ ಬಗ್ಗೆಯೂ ಅವರು ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಆದಷ್ಟು ಬೇಗ ಎಂಸಿಸಿ ಚುನಾವಣೆ ನಡೆಸಿ ಜನಪ್ರತಿನಿಧಿಗಳು ಅಧಿಕಾರ ವಹಿಸಿಕೊಳ್ಳಬೇಕು ಎಂದು ಯದುವೀರ್ ಒತ್ತಾಯಿಸಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

