ಶಾಸಕ ಚಂದ್ರು ಲಮಾಣಿ ಎರಡು-ಮೂರು ಲಕ್ಷ ರೂ.ಗೆ ಕೈ ಒಡ್ಡುವ ಮನುಷ್ಯ ಅಲ್ಲ: ಯತ್ನಾಳ್
ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣಕ್ಕೆ ರಾಜಕೀಯ ತಿರುವು ಸಿಕ್ಕಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದನ್ನು ವ್ಯವಸ್ಥಿತ ಸಂಚು ಎಂದು ಕಿಡಿಕಾರಿದ್ದಾರೆ. ಚಂದ್ರು ಲಮಾಣಿ ಬಂಜಾರ ಸಮಾಜದ ಉದಯೋನ್ಮುಖ ನಾಯಕರಾಗಿದ್ದು, ಅವರನ್ನು ಹತ್ತಿಕ್ಕುವ ಉದ್ದೇಶದಿಂದ ಟ್ರ್ಯಾಪ್ ಮಾಡಲಾಗಿದೆ ಎಂದು ಯತ್ನಾಳ್ ಆರೋಪಿಸಿದ್ದಾರೆ. ಈ ಸಂಪೂರ್ಣ ಪ್ರಕರಣದ ಹಿಂದೆ ರಾಜಕೀಯ ಪ್ರೇರಿತ ಪಿತೂರಿ ಅಡಗಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ವಿಜಯಪುರ, ಫೆ.21: ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣವು ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೊಂದು ವ್ಯವಸ್ಥಿತವಾದ ಸಂಚು ಎಂದು ಕಿಡಿಕಾರಿದ್ದಾರೆ. ಚಂದ್ರು ಲಮಾಣಿ ಅವರು ಒಬ್ಬ ಒಳ್ಳೆಯ ವೈದ್ಯರು ಹಾಗೂ ಉತ್ತಮ ಮನುಷ್ಯ. ಅವರು ಕೇವಲ ಎರಡು-ಮೂರು ಲಕ್ಷ ರೂಪಾಯಿಗಾಗಿ ಕೈವೊಡ್ಡುವಂತಹ ಸಣ್ಣ ವ್ಯಕ್ತಿತ್ವದ ಮನುಷ್ಯ ಅಲ್ಲವೇ ಅಲ್ಲ,” ಎಂದು ಯತ್ನಾಳ್ ಸಮರ್ಥಿಸಿಕೊಂಡಿದ್ದಾರೆ. ಬಂಜಾರ ಸಮಾಜದ ಉದಯೋನ್ಮುಖ ನಾಯಕನನ್ನು ಹತ್ತಿಕ್ಕುವ ಉದ್ದೇಶದಿಂದ ಈ ಟ್ರ್ಯಾಪ್ ಮಾಡಲಾಗಿದೆ. ವ್ಯವಸ್ಥಿತವಾಗಿ ಒಬ್ಬ ಬಂಜಾರ ಸಮಾಜದ ಶಾಸಕನನ್ನು ಸಿಲುಕಿಸಬೇಕು ಎಂಬ ಕಾರಣಕ್ಕೆ ಈ ಪ್ಲಾನ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಇಡೀ ಪ್ರಕರಣದ ಹಿಂದೆ ರಾಜಕೀಯ ಪ್ರೇರಿತ ಸಂಚು ಅಡಗಿದೆ. ಅವರನ್ನು ಸಿಲುಕಿಸಲೇಬೇಕು ಎಂಬ ಹಠದಿಂದ ಈ ಕಾರ್ಯಾಚರಣೆ ನಡೆಸಿದಂತೆ ಕಾಣುತ್ತಿದೆ ಎಂದು ಯತ್ನಾಳ್ ಅನುಮಾನ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ