Pakistan: ಧರ್ಮನಿಂದನೆ ಆರೋಪಿಯನ್ನು ಜೈಲಿಂದ ಧರಧರ ಎಳೆದು ಹೊಡೆದು ಸಾಯಿಸಿದ ಪಾಕಿಗಳು

Mob Pulls Out Man From Jail Before Beating To Death: ಕುರಾನ್ ಗ್ರಂಥಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಜೈಲಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಜನರು ಹೊರಗೆಳೆದು ಹೊಡೆದು ಸಾಯಿಸಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಂಕಾನ ಸಾಹೀಬ್ ನಗರದಲ್ಲಿ ಸಂಭವಿಸಿದೆ.

Pakistan: ಧರ್ಮನಿಂದನೆ ಆರೋಪಿಯನ್ನು ಜೈಲಿಂದ ಧರಧರ ಎಳೆದು ಹೊಡೆದು ಸಾಯಿಸಿದ ಪಾಕಿಗಳು
ಜೈಲಿಂದ ಎಳೆದು ಹೊಡೆದು ಸಾಯಿಸಿದ ಪಾಕಿಗಳು

Updated on: Feb 12, 2023 | 11:24 AM

ಲಾಹೋರ್: ಕುರಾನ್ ಗ್ರಂಥಕ್ಕೆ ಅವಮಾನ ಮಾಡಿದ ಆರೋಪದ (Blasphemy Case) ಮೇಲೆ ಜೈಲಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಜನರು ಹೊರಗೆಳೆದು ಹೊಡೆದು ಸಾಯಿಸಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಂಕಾನ ಸಾಹೀಬ್ ನಗರದಲ್ಲಿ (Nankana Sahib city of Pakistan) ಸಂಭವಿಸಿದೆ. ಸಾವನ್ನಪ್ಪಿದ ವ್ಯಕ್ತಿಯನ್ನು 22-23 ವರ್ಷದ ಮುಹಮ್ಮದ್ ವಾರಿಸ್ ಎಂದು ಗುರುತಿಸಲಾಗಿದೆ. ಧರ್ಮದ್ರೋಹ ಪ್ರಕರಣದಲ್ಲಿ ಈತ ನಂಕಾನ ಸಾಹೀಬ್ ನಗರದ ಜೈಲಿನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ. ಜನರ ಗುಂಪೊಂದು ಅಲ್ಲಿಗೆ ನುಗ್ಗಿ ಜೈಲಿನಿಂದ ಆತನನ್ನು ಹೊರಗೆಳೆದು ಬಡಿಗೆ, ಕಬ್ಬಿಣದ ರಾಡುಗಳಿಂದ ಬಡಿದು ಬಡಿದು ಕೊಂದು ಹಾಕಿದ್ದಾರೆ. ಬಳಿಕ ದೇಹವನ್ನು ಸುಟ್ಟಹಾಕಲು ಪ್ರಯತ್ನಿಸಿದಾಗ ಪೊಲೀಸರು ಬಂದು ತಡೆದಿದ್ದಾರೆ.

ಜನರು ಗುಂಪು ಪೊಲೀಸ್ ಠಾಣೆಗೆ ಬಂದಾಗ ಅಲ್ಲಿ ಬೆರಳೆಣಿಕೆಯ ಸಿಬ್ಬಂದಿ ಮಾತ್ರವೇ ಇದ್ದರಿಂದ ಮುಹಮ್ಮದ್ ವಾರಿಸ್​ನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಸೇರಿಸುವಷ್ಟರಲ್ಲಿ ಆತನನ್ನು ಕೊಂದುಹಾಕಿದ್ದರು. ಪೆಟ್ರೋಲ್ ಸುರಿದು ವಾರಿಸ್​ನ ಮೃತದೇಹ ಸುಟ್ಟುಹಾಕುವುದನ್ನು ಪೊಲೀಸರಿಗೆ ತಪ್ಪಿಸಲು ಮಾತ್ರ ಸಾಧ್ಯವಾಯಿತು ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಜನರ ಗುಂಪು ಮುಹಮ್ಮದ್ ವಾರಿಸ್​ನನ್ನು ಹೊಡೆದು ಸಾಯಿಸುತ್ತಿರುವ ವಿಡಿಯೋ ಪಾಕಿಸ್ತಾನದ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಜನರು ವಾರಿಸ್​ನನ್ನು ವಿವಸ್ತ್ರಗೊಳಿಸಿ ಕಾಲು ಹಿಡಿದು ರಸ್ತೆಯಲ್ಲಿ ಧರಧರ ಎಳೆದೊಯ್ಯುತ್ತಿರುವ ಮತ್ತು ಕಟ್ಟಿಗೆ ಹಾಗೂ ಕಬ್ಬಿಣದ ರಾಡುಗಳಿಂದ ಹೊಡೆಯುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ಇದೆ. ಪೊಲೀಸರೂ ಕೂಡ ಈ ವಿಡಿಯೋದ ಸತ್ಯತೆಯನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಟರ್ಕಿ, ಸಿರಿಯಾದ ಭೂಕಂಪ ಸಂತ್ರಸ್ತರಿಗೆ 3 ತಿಂಗಳ ವೀಸಾ ಘೋಷಿಸಿದ ಜರ್ಮನಿ

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶಾಹಬ್ಬಾಜ್ ಷರೀಫ್ ಕೂಡ ಇಂಥ ಕೃತ್ಯಗಳಿಗೆ ದೇಶದಲ್ಲಿ ಆಸ್ಪದ ಇರುವುದಿಲ್ಲ ಎಂದಿದ್ದಾರೆ.

ಶ್ರೀಲಂಕಾ ನಾಗರಿಕನ ಹತ್ಯೆ ಘಟನೆ

ಪಾಕಿಸ್ತಾನದಲ್ಲಿ ಇತ್ತೀಚೆಗೆ ಇಂಥದ್ದೇ ರೀತಿಯ ಒಂದು ಘಟನೆಯಲ್ಲಿ ಶ್ರೀಲಂಕಾ ನಾಗರಿಕನ ಹತ್ಯೆ ಆಗಿ ಜಾಗತಿಕವಾಗಿ ಪಾಕಿಸ್ತಾನಕ್ಕೆ ಮುಜುಗರ ತಂದಿತ್ತು. ಪಾಕಿಸ್ತಾನದಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿದ್ದ ಲಂಕಾ ಮೂಲದ ವ್ಯಕ್ತಿ ಇಸ್ಲಾಂ ಧರ್ಮವನ್ನು ಅವಹೇಳನ ಮಾಡಿದನೆಂದು ಜನರ ಗುಂಪು ಹತ್ಯೆ ಮಾಡಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ದೊಡ್ಡ ಸುದ್ದಿಯಾಯಿತು. ನಂತರ 89 ಶಂಕಿತರನ್ನು ವಿಚಾರಣೆಗೊಳಪಡಿಸಿ, ಅಂತಿಮವಾಗಿ 6 ಮಂದಿಗೆ ಮರಣದಂಡನೆ ಶಿಕ್ಷೆಯನ್ನು ಅಲ್ಲಿನ ಕೋರ್ಟ್ ವಿಧಿಸಿತ್ತು.

Published On - 11:24 am, Sun, 12 February 23

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us