ಶ್ರೀಲಂಕಾಗೆ ಸೇನಾಪಡೆ ಕಳುಹಿಸುವ ಕುರಿತು ಊಹಾತ್ಮಕ ಮಾಧ್ಯಮ ವರದಿ ನಿರಾಕರಿಸಿದ ಭಾರತ

ಸೋಮವಾರ ರಾಜೀನಾಮೆ ನೀಡಿದ ನಂತರ ಮಹಿಂದಾ ರಾಜಪಕ್ಸೆ ಎಲ್ಲಿದ್ದಾರೆ ಎಂಬುದರ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದೆ. ಮಹಿಂದಾ ಅವರು ತಮ್ಮ ಕಚೇರಿ-ಅಧಿಕೃತ ನಿವಾಸವಾದ ಟೆಂಪಲ್ ಟ್ರೀಸ್ ತೊರೆದಿದ್ದಾರೆ ಎಂದು ವರದಿಯಾಗಿದೆ.

ಶ್ರೀಲಂಕಾಗೆ ಸೇನಾಪಡೆ ಕಳುಹಿಸುವ ಕುರಿತು ಊಹಾತ್ಮಕ ಮಾಧ್ಯಮ ವರದಿ ನಿರಾಕರಿಸಿದ ಭಾರತ
ಪ್ರಾತಿನಿಧಿಕ ಚಿತ್ರ
Edited By:

Updated on: May 11, 2022 | 4:34 PM

ದೆಹಲಿ: ಭಾರತ ತನ್ನ ಸೈನಿಕರನ್ನು ಕೊಲಂಬೊಗೆ ಕಳುಹಿಸುವ ಕುರಿತು  ಮಾಧ್ಯಮದ ಊಹಾಪೋಹ ವರದಿಗಳನ್ನು ಶ್ರೀಲಂಕಾದಲ್ಲಿನ (Sri Lanka) ಭಾರತೀಯ ಹೈಕಮಿಷನ್ (Indian High Commission) ಬುಧವಾರ ನಿರಾಕರಿಸಿದ್ದು, ಶ್ರೀಲಂಕಾದ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗೆ ಭಾರತವು ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ ಎಂದು ಹೇಳಿದೆ. ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ (Mahinda Rajapaksa) ಮತ್ತು ಅವರ ಕುಟುಂಬ ಸದಸ್ಯರು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂಬ ಸ್ಥಳೀಯ ಸಾಮಾಜಿಕ ಮಾಧ್ಯಮಗಳ  ಊಹಾಪೋಹವನ್ನು “ನಕಲಿ ಮತ್ತು ಸುಳ್ಳು” ಎಂದು ಹೇಳಿ ನಿರಾಕರಿಸಿದ ಒಂದು ದಿನದ ನಂತರ ಭಾರತೀಯ ಹೈಕಮಿಷನ್‌ನಿಂದ ಈ ಹೇಳಿಕೆ ಬಂದಿದೆ. ಸೋಮವಾರ ರಾಜೀನಾಮೆ ನೀಡಿದ ನಂತರ ಮಹಿಂದಾ ರಾಜಪಕ್ಸೆ ಎಲ್ಲಿದ್ದಾರೆ ಎಂಬುದರ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದೆ. ಮಹಿಂದಾ ಅವರು ತಮ್ಮ ಕಚೇರಿ-ಅಧಿಕೃತ ನಿವಾಸವಾದ ಟೆಂಪಲ್ ಟ್ರೀಸ್ ತೊರೆದಿದ್ದಾರೆ ಎಂದು ವರದಿಯಾಗಿದೆ. ಭಾರತವು ತನ್ನ ಸೈನ್ಯವನ್ನು ಶ್ರೀಲಂಕಾಕ್ಕೆ ಕಳುಹಿಸುವ ಕುರಿತು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಊಹಾಪೋಹದ ವರದಿಗಳನ್ನು ಹೈಕಮಿಷನ್ ಸ್ಪಷ್ಟವಾಗಿ ನಿರಾಕರಿಸಲು ಬಯಸುತ್ತದೆ. ಈ ವರದಿಗಳು ಮತ್ತು ಅಂತಹ ಅಭಿಪ್ರಾಯಗಳು ಭಾರತ ಸರ್ಕಾರದ್ದಲ್ಲ ಎಂದು ಭಾರತೀಯಮಿಷನ್ ಟ್ವೀಟ್ ಮಾಡಿದೆ.

“ಶ್ರೀಲಂಕಾದ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗೆ ಭಾರತವು ಸಂಪೂರ್ಣ ಬೆಂಬಲವನ್ನು ಹೊಂದಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ನಿನ್ನೆ ಸ್ಪಷ್ಟವಾಗಿ ಹೇಳಿದ್ದಾರೆ” ಎಂದು ಅದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ
Sri Lanka Crisis ಶ್ರೀಲಂಕಾ: ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರಿಗೆ ಕಂಡಲ್ಲಿ ಗುಂಡಿಕ್ಕಲು ರಕ್ಷಣಾ ಸಚಿವಾಲಯ ಆದೇಶ


ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಮೂಲಕ ವ್ಯಕ್ತಪಡಿಸಲಾದ ಶ್ರೀಲಂಕಾದ ಜನರ ಉತ್ತಮ ಹಿತಾಸಕ್ತಿಗಳಿಂದ  ಭಾರತವು ಯಾವಾಗಲೂ ಮಾರ್ಗದರ್ಶನ ಪಡೆಯುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಂಗಳವಾರ ಹೇಳಿದ್ದಾರೆ.

76 ಹರೆಯದ ಮಹಿಂದಾ ಅವರು ದೇಶದಲ್ಲಿ ಅಭೂತಪೂರ್ವ ಆರ್ಥಿಕ ಪ್ರಕ್ಷುಬ್ಧತೆಯ ಮಧ್ಯೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ಬೆಂಬಲಿಗರು ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ ಗಂಟೆಗಳ ನಂತರ ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಲು ಮತ್ತು ರಾಜಧಾನಿಯಲ್ಲಿ ಸೇನಾ ಪಡೆಗಳನ್ನು ನಿಯೋಜಿಸಲಾಯಿತು. ಈ ದಾಳಿಯು ರಾಜಪಕ್ಸೆ ಪರ ರಾಜಕಾರಣಿಗಳ ವಿರುದ್ಧ ವ್ಯಾಪಕ ಹಿಂಸಾಚಾರವನ್ನು ಪ್ರಚೋದಿಸಿತು.

ಟ್ರಿಂಕೋಮಲಿಯ ಪೂರ್ವ ಬಂದರು ಜಿಲ್ಲೆಯ ನೌಕಾ ನೆಲೆಯ ಸುತ್ತಲೂ ಪ್ರತಿಭಟನಾಕಾರರ ಗುಂಪು ಜಮಾಯಿಸಿ, ಮಹಿಂದಾ ಅಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಸೇರಿದಂತೆ ರಾಜಪಕ್ಸೆ ಕುಟುಂಬಕ್ಕೆ ರಾಜೀನಾಮೆ ನೀಡುವಂತೆ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಪರ- ವಿರೋಧಿ ಪ್ರತಿಭಟನಾಕಾರರ ನಡುವೆ ನಡೆದ ಹಿಂಸಾಚಾರದಲ್ಲಿ ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ ಮತ್ತು 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅದೇ ವೇಳೆ ಆಡಳಿತ ಪಕ್ಷದ ರಾಜಕಾರಣಿಗಳಿಗೆ ಸೇರಿದ ಹಲವಾರು ಆಸ್ತಿಗಳಿಗೆ ಬೆಂಕಿ ಹಚ್ಚಲಾಗಿದೆ.