ಭಾರತೀಯ ಸೇನೆಯಿಂದ ಭೋಲಾರಿ ವಾಯುನೆಲೆಯಲ್ಲಿ 6 ವಾಯುಪಡೆ ಸಿಬ್ಬಂದಿಯ ಹತ್ಯೆ; ಪಾಕಿಸ್ತಾನದ ಸಿಂಧ್ ಸಿಎಂ ಮಾಹಿತಿ

ಭಾರತೀಯ ವಾಯುಪಡೆ ನಡೆಸಿದ ಆಪರೇಷನ್ ಸಿಂಧೂರ್​ನಡಿ ಭೋಲಾರಿ ವಾಯುನೆಲೆಯಲ್ಲಿ 6 ವಾಯುಪಡೆಯ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನದ ಸಿಂಧ್ ಮುಖ್ಯಮಂತ್ರಿ ದೃಢಪಡಿಸಿದ್ದಾರೆ. ಭಾರತದ ವಾಯುದಾಳಿಗಳು ಭೋಲಾರಿ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎಂದು ಸಿಂಧ್ ಮುಖ್ಯಮಂತ್ರಿ ಖಚಿತಪಡಿಸಿದ್ದಾರೆ. ಇದರಿಂದಾಗಿ 6 ವಾಯುಪಡೆಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಬಳಿಕ ಭಾರತದ ಮಿಲಿಟರಿ ಗುರಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತೀಯ ಸೇನೆಯಿಂದ ಭೋಲಾರಿ ವಾಯುನೆಲೆಯಲ್ಲಿ 6 ವಾಯುಪಡೆ ಸಿಬ್ಬಂದಿಯ ಹತ್ಯೆ; ಪಾಕಿಸ್ತಾನದ ಸಿಂಧ್ ಸಿಎಂ ಮಾಹಿತಿ
Sindh Cm Murad Ali Shah

Updated on: May 16, 2025 | 5:04 PM

ಸಿಂಧ್, ಮೇ 16: ಆಪರೇಷನ್ ಸಿಂಧೂರ್‌ನಲ್ಲಿ ಭಾರತದ ನಿಲುವನ್ನು ಮೌನವಾಗಿ ಒಪ್ಪಿಕೊಂಡಿರುವ ಪಾಕಿಸ್ತಾನದ (Pakistan) ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ, ಭೋಲಾರಿ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಭಾರತೀಯ ವಾಯುದಾಳಿಗಳು ನಡೆಸಿವೆ ಎಂದು ದೃಢಪಡಿಸಿದ್ದಾರೆ. ಇದರಿಂದಾಗಿ 6 ವಾಯುಪಡೆಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಭಾರತೀಯ ವಾಯು ಪಡೆಗಳು ಪಾಕಿಸ್ತಾನಿ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡಿವೆ ಎಂಬ ಭಾರತದ ನಿಲುವನ್ನು ಸಿಂಧ್ ಸಿಎಂ ನೀಡಿದ ಈ ಹೇಳಿಕೆ ದೃಢಪಡಿಸುತ್ತದೆ. ಆ ದಾಳಿಗಳು ನಾಗರಿಕರನ್ನು ಗುರಿಯಾಗಿಸಿಕೊಂಡಿವೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಸಹ ಇದು ನಿರಾಕರಿಸುತ್ತದೆ.

“ಸಿಂಧ್‌ನಲ್ಲಿ 7 ಜನ ಹುತಾತ್ಮರಾಗಿದ್ದಾರೆ. ಭೋಲಾರಿಯಲ್ಲಿ ನಡೆದ ದಾಳಿಯಲ್ಲಿ ವಾಯುಪಡೆಯ 6 ಅಧಿಕಾರಿಗಳು ಮತ್ತು ತಂತ್ರಜ್ಞರು ಹುತಾತ್ಮರಾದರು” ಎಂದು ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ಹೇಳಿದರು.

ಸಿಂಧ್ ಪ್ರಾಂತ್ಯದ ಭೋಲಾರಿ ವಾಯುನೆಲೆಯು ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ದಾಳಿ ಮಾಡಿದ ಸುಮಾರು ಒಂದು ಡಜನ್ ವಾಯುಪಡೆಯ ಗುರಿಗಳಲ್ಲಿ ಒಂದಾಗಿದೆ. ಡಿಸೆಂಬರ್ 2017ರಲ್ಲಿ ಕಾರ್ಯಾರಂಭ ಮಾಡಿದ ಇದನ್ನು ಪಾಕಿಸ್ತಾನದ ಅತ್ಯಂತ ಮುಂದುವರಿದ ಮುಖ್ಯ ಕಾರ್ಯಾಚರಣೆಯ ನೆಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು 19 ಸ್ಕ್ವಾಡ್ರನ್ ಮತ್ತು ಎಫ್ -16 ಎ/ಬಿ ಬ್ಲಾಕ್ 15 ಎಡಿಎಫ್ ವಿಮಾನಗಳನ್ನು ನಿರ್ವಹಿಸುವ ಆಪರೇಷನಲ್ ಕನ್ವರ್ಶನ್ ಯೂನಿಟ್ (ಒಸಿಯು)ಗೆ ನೆಲೆಯಾಗಿದೆ.

ಇದನ್ನೂ ಓದಿ
ಆಪರೇಷನ್ ಸಿಂಧೂರ್ ಕುರಿತು ಭಾರತೀಯ ಸೇನೆಯಿಂದ ಸುದ್ದಿಗೋಷ್ಠಿ
ಹಿಂದೂ ಮಹಿಳೆಯರ ಕುಂಕುಮ ಅಳಿಸಿದವರಿಗೆ ತಕ್ಕ ಶಾಸ್ತಿಯಾಗಿದೆ ಎಂದ ಸೇನೆ
ಪಾಕ್​ನಲ್ಲಿ ಭಾರತದ ದಾಳಿ ಆರಂಭದಿಂದ ಇಲ್ಲಿಯವರೆಗೆ ಏನೇನಾಯ್ತು?
ಪಾಕಿಸ್ತಾನದ ಈ 9 ಸ್ಥಳಗಳ ಮೇಲೆ ಭಾರತದಿಂದ ದಾಳಿ, ಮನೆ ಬಿಟ್ಟು ಓಡಿದ ಜನರು

ಇದನ್ನೂ ಓದಿ: ಭಾರತದೊಂದಿಗೆ ‘ಶಾಂತಿ ಮಾತುಕತೆ’ಗೆ ಸಿದ್ಧ ಎಂದ ಪಾಕ್ ಪ್ರಧಾನಿ ಶೆಹಬಾಜ್

ಭಾರತದ ದಾಳಿಯ ನಂತರದ ಉಪಗ್ರಹ ಚಿತ್ರಗಳು ವಿಮಾನಗಳನ್ನು ಇರಿಸಲಾಗಿರುವ ವಾಯುನೆಲೆಯಲ್ಲಿನ ಹ್ಯಾಂಗರ್‌ಗೆ ವ್ಯಾಪಕ ಹಾನಿಯನ್ನು ಬಹಿರಂಗಪಡಿಸಿವೆ. ಕೆಲವು ವಿಮಾನಗಳು ಸಹ ಹಾನಿಗೊಳಗಾಗುವ ಸಾಧ್ಯತೆಯಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಮೇ 7ರ ಆರಂಭದಲ್ಲಿ ಭಯೋತ್ಪಾದಕ ಮೂಲಸೌಕರ್ಯದ ಮೇಲೆ ಆಪರೇಷನ್ ಸಿಂಧೂರ್ ಅಡಿಯಲ್ಲಿ ದಾಳಿಗಳನ್ನು ನಡೆಸಿತು.

ಇದನ್ನೂ ಓದಿ: ಕೇವಲ 23 ನಿಮಿಷದಲ್ಲಿ ಪಾಕಿಸ್ತಾನದ ಭಯೋತ್ಪಾದಕರ ಸರ್ವನಾಶ; ಐಎಎಫ್ ಸಾಧನೆಗೆ ರಾಜನಾಥ್ ಸಿಂಗ್ ಶ್ಲಾಘನೆ

ಭಾರತದ ಕಾರ್ಯಾಚರಣೆಯ ನಂತರ, ಪಾಕಿಸ್ತಾನವು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಮೇ 8, 9 ಮತ್ತು 10 ರಂದು ಭಾರತೀಯ ಸಶಸ್ತ್ರ ಪಡೆಗಳು ಹಲವಾರು ಪಾಕಿಸ್ತಾನಿ ಮಿಲಿಟರಿ ಸ್ಥಾಪನೆಗಳ ಮೇಲೆ ಉಗ್ರ ಪ್ರತಿದಾಳಿ ನಡೆಸಿದವು. ಭೋಲಾರಿ ಹೊರತುಪಡಿಸಿ, ನೂರ್ ಖಾನ್, ಸರ್ಗೋಧಾ, ರಫೀಕಿ, ಮುರಿಯದ್, ಚಕ್ಲಾಲಾ, ರಹೀಮ್ ಯಾರ್ ಖಾನ್ ಮತ್ತು ಚುನಿಯನ್ ಸೇರಿದಂತೆ ಇತರ ಪ್ರಮುಖ ವಾಯುನೆಲೆಗಳು ಹಾನಿಗೊಳಗಾದವು. ಭಾರತದ ದಾಳಿಗಳು ನಿರ್ದಿಷ್ಟವಾಗಿ ಪಾಕಿಸ್ತಾನದ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿರಿಸಿಕೊಂಡಿವೆ ಎಂದು ಭಾರತ ಪ್ರತಿಪಾದಿಸಿದರೆ, ಭಾರತೀಯ ಸೇನೆಯ ದಾಳಿಗಳು ಪಾಕಿಸ್ತಾನದ ನಾಗರಿಕರನ್ನು ಗುರಿಯಾಗಿರಿಸಿಕೊಂಡಿವೆ ಎಂದು ಪಾಕಿಸ್ತಾನ ಆರೋಪಿಸಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ