ನಿನ್ನೆ ವೈಲೆಂಟ್ ಆಗಿದ್ದ ವ್ಯಾಗ್ನಾರ್ ಸೈನ್ಯ ಇಂದು ಸೈಲೆಂಟ್, ಪುಟಿನ್ ಎಚ್ಚರಿಕೆಗೆ ದಂಗೆ ಕೈಬಿಟ್ಟ ಪ್ರಿಗೋಝಿನ್

ಪುಟಿನ್ ವಿರುದ್ಧ ದಂಗೆ ಎದ್ದಿದ್ದ ಪುಟಿನ್ ಪರಮಾಪ್ತ ಪ್ರಿಗೋಝಿನ್ ಸಿಟ್ಟು ತಣ್ಣಗಾಗಿದೆ. ಪುಟಿನ್ ಅಧಿಕಾರ ಕಿತ್ತುಕೊಳ್ಳುತ್ತೇನೆ ಎಂದು ಹೊರಟಿದ್ದ ವ್ಯಾಗ್ನರ್ ಪಡೆ ಸೈಲೆಂಟ್ ಆಗಿದ್ದು,. ರಷ್ಯಾದಲ್ಲಿ ಎದ್ದಿದ್ದ ಆತಂಕದ ಕಾರ್ಮೋಡ ಸರಿದಿದೆ.

ನಿನ್ನೆ ವೈಲೆಂಟ್ ಆಗಿದ್ದ ವ್ಯಾಗ್ನಾರ್ ಸೈನ್ಯ ಇಂದು ಸೈಲೆಂಟ್, ಪುಟಿನ್ ಎಚ್ಚರಿಕೆಗೆ ದಂಗೆ ಕೈಬಿಟ್ಟ ಪ್ರಿಗೋಝಿನ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ಬೆನ್ನಲ್ಲೇ ದಂಗೆ ಕೈಬಿಟ್ಟ ಪ್ರಿಗೋಝಿನ್
Image Credit source: Reuters
Edited By:

Updated on: Jun 25, 2023 | 6:03 PM

ಉಕ್ರೇನ್ ರಷ್ಯಾ ನಡುವೆ ನಡೆಯುತ್ತಿದ್ದ ಸುದೀರ್ಘ ಯುದ್ಧದಲ್ಲಿ ಅಚಾನಕ್ಕಾಗಿ ಮಹತ್ವದ ಬೆಳವಣಿಗೆ ನಡೆದಿತ್ತು. ರಷ್ಯಾ (Russia) ಪರ ಉಕ್ರೇನ್​ನಲ್ಲಿ ಹೋರಾಡುತ್ತಿದ್ದ ರಷ್ಯಾದ ಬಾಡಿಗೆ ಸೈನ್ಯ ವ್ಯಾಗ್ನಾರ್ (Wagner Army) ರಷ್ಯಾದ ನಾಯಕತ್ವದ ವಿರುದ್ಧವೇ ತಿರುಗಿ ಬಿದ್ದಿತ್ತು. ನಿನ್ನೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ಅಧಿಕಾರ ಕಿತ್ತುಕೊಳ್ಳುತ್ತೇನೆ ಎಂದು ಅಘಾದ ಸೈನ್ಯದೊಂದಿಗೆ ರಷ್ಯಾದ ರೊಸ್ಟೋವ್ ನಗರಕ್ಕೆ ನುಗ್ಗಿದ್ದ ವ್ಯಾಗ್ನಾರ್ ದಂಡನಾಯಕ ಯೆವ್ಗಿನಿ ಪ್ರಿಗೋಝಿನ್ ಸಿಟ್ಟು ಇಂದು ತಣ್ಣಗಾಗಿದೆ.

ರಷ್ಯಾ ಮಿಲಿಟರಿ‌‌ ಪ್ರಧಾನ ಕಚೇರಿ‌ ಇರುವ ರೋಸ್ತೋವ್​ ನಗರವನ್ನು ವಶಕ್ಕೆ ಪಡೆದು ರಾಜಧಾನಿ ಮಾಸ್ಕೋ ಕಡೆ ಹೊರಟ್ಟಿದ್ದ ವಾಗ್ನರ್​ ಪಡೆಯ ಕೋಪ ದಮನವಾಗಿದ್ದು ದಂಗೆಯಿಂದ‌ ಹಿಂದೆ‌ ಸರಿಯಲು ಒಪ್ಪಿಕೊಂಡಿದೆ. ಒಂದು ವೇಳೆ‌ ನಾವೆ ದಂಗೆ ಎದ್ದರೆ ರಷ್ಯಾದಲ್ಲಿ ರಕ್ತಪಾತವಾಗಲಿದೆ. ಇದನ್ನು ತಪ್ಪಿಸಲು ಹೋರಾಟದಿಂದ‌ ಹಿಂದೆ ಸರಿದಿರುವುದಾಗಿ ವ್ಯಾಗ್ನಾರ್ ಪಡೆಯ ದಂಡನಾಯಕ‌, ಪುಟಿನ್​​ ಪರಮಾಪ್ತನಾಗಿದ್ದ ಯೆವ್ಗೆನಿ ಪ್ರಿಗೊಝಿನ್​ ಹೇಳಿದ್ದಾರೆ.

ಇದನ್ನೂ ಓದಿ: Russia coup: ವೊರೊನೆಜ್ ಹೆದ್ದಾರಿಯಲ್ಲಿ ವ್ಯಾಗ್ನರ್ ಗುಂಪಿನ ಮೇಲೆ ರಷ್ಯಾ ಸೇನಾ ಹೆಲಿಕಾಪ್ಟರ್‌ಗಳಿಂದ ಗುಂಡಿನ ದಾಳಿ

ಶನಿವಾರ ಬೆಳಗ್ಗೆ ವಿಡಿಯೋ ಹೇಳಿಕೆ ಹರಿ ಬಿಟ್ಟಿದ್ದ ಪ್ರಿಗೋಝಿನ್ ರೊಸ್ತೋವ್ ನಗರವನ್ನು ವಶಕ್ಕೆ‌ಪಡೆಯಲಾಗಿದೆ. ರಷ್ಯಾ ನಾಯಕತ್ವವನ್ನು ಕೆಳಗಿಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ವ್ಯಾಗ್ನಾರ್ ಪಡೆ ರೊಸ್ತೊವ್ ನಗರದಿಂದ 1100 ಕಿ.ಮೀ ದೂರದಲ್ಲಿದ್ದ ರಾಜಧಾನಿ ಮಾಸ್ಕೋ ಕಡೆ ಹೊರಟಿತ್ತು. ಆದರೆ ಈಗ ಹೊಸ ಆಡಿಯೋ ಸಂದೇಶದಲ್ಲಿ, ರಷ್ಯಾದಲ್ಲಿ ರಕ್ತಪಾತದ ಅಪಾಯವನ್ನು ತಡೆಗಟ್ಟುವ ಉದ್ದೇಶದಿಂದ ವಾಗ್ನರ್​ ಪಡೆ ತಮ್ಮ ನೆಲೆಗಳಿಗೆ ಹಿಂದಿರುಗುತ್ತದೆ ಎಂದು ಪ್ರಿಗೋಜಿನ್​ ಹೇಳಿದ್ದಾರೆ.

ವ್ಯಾಗ್ನರ್ ದಂಗೆ ಹತ್ತಿಕ್ಕಲು ಬೆಲಾರಸ್ ಮಧ್ಯಸ್ಥಿಕೆ

ರಷ್ಯಾದಲ್ಲಿ ದಂಗೆ ಎದ್ದಿದ್ದ ವಾಗ್ನರ್​ ಪಡೆಯನ್ನು ಬೆಲರಸ್ ಅಧ್ಯಕ್ಷ ಅಲೆಕ್ಸಾಂಡರ್​ ಲುಕಾಶೆಂಕೊ ಮಧ್ಯಸ್ಥಿಕೆ ವಹಿಸಿ ಸಿಟ್ಟು ಶಮನ ಮಾಡಿದ್ದಾರೆ.‌ ವ್ಯಾಗ್ನಾರ್ ದಂಡನಾಯಕ ಪ್ರಿಗೋಝಿನ್​ ಮನವೊಲಿಸುವಲ್ಲಿ ಅಲೆಗ್ಸಾಂಡರ್ ಯಶಸ್ವಿಯಾಗಿದ್ದಾರೆ. ಪ್ರಿಗೋಝಿನ್​ ಜೊತೆ ಆಗಿರುವ ಮಾತುಕತೆ ಒಪ್ಪಂದವನ್ನು ರಷ್ಯಾ ಸರ್ಕಾರ ಖಚಿತಪಡಿಸಿದ್ದು, ಒಪ್ಪಂದದ ಪ್ರಕಾರ, ಪ್ರಿಗೋಝಿನ್​ ವಿರುದ್ಧ ಎಲ್ಲ ಅಪರಾಧಗಳನ್ನು ಕೈಬಿಡುವುದಾಗಿ ರಷ್ಯಾ ಸರಕಾರ ಹೇಳಿದೆ. ಜೊತೆಗೆ ಪ್ರಿಗೋಝಿನ್ ಬೆಲರಸ್​ಗೆ ವಾಪಾಸ್ ಹೋಗಲಿದ್ದಾರೆ.

ದಂಗೆ ಎದ್ದಿದ್ದ ವ್ಯಾಗ್ನಾರ್ ಸೇನೆ ಮಾಸ್ಕೋಗೆ ನುಗ್ಗುವುದನ್ನು ತಡೆಯಲು ರಷ್ಯಾ ಸೇನೆ ಭಾರೀ ಸರ್ಕಸ್ ಮಾಡಿತ್ತು. ಹೆದ್ದಾರಿಗಳಲ್ಲಿ ಗುಂಡಿ ತೋಡಿತ್ತು. ವ್ಯಾಗ್ನಾರ್ ಸೇನೆ ಸಂಚಾರಕ್ಕೆ ಅಡ್ಡಿಪಡಿಸಿತ್ತು. ವ್ಯಾಗ್ನಾರ್ ಸೇನೆಯ ದಂಗೆಯ ಭೀಕರ ಪರಿಣಾಮದ ಮುನ್ಸೂಚನೆ‌ ಅರಿತ ರಷ್ಯಾ ಸರಕಾರ ಇಡೀ ದಿನ ಮಾತುಕತೆ ನಡೆಸಿದೆ. ರಷ್ಯಾದ ಒಳಗೆ ರಕ್ತಪಾತವನ್ನು ತಪ್ಪಿಸುವ ಉದ್ದೇಶದಿಂದ ಅಂತಿಮವಾಗಿ ಒಂದು ಒಪ್ಪಂದಕ್ಕೆ ಬರಲಾಗಿದೆ. ಯೆವ್ಗೆನಿ ಪ್ರಿಗೊಝಿನ್ ರಷ್ಯಾದ ಭೂಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಾಗ್ನರ್ ಪಡೆಯ ಚಲನೆಯನ್ನು ನಿಲ್ಲಿಸಲು ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಒಪ್ಪಿಕೊಂಡಿದ್ದಾರೆ.

ವ್ಯಾಗ್ನಾರ್ ಸೇನೆ ಹೋರಾಟ ನಿಲ್ಲಿಸಲು ಒಪ್ಪಿಕೊಂಡ ಬಳಿಕ ರಷ್ಯಾದಲ್ಲಿ ಕವಿದಿದ್ದ ಆಂತರಿಕ ಯುದ್ಧದ ಕಾರ್ಮೊಡ ಸರಿದಿದೆ. ರಷ್ಯಾ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ‌.

ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Sun, 25 June 23

Follow Us