ದೋಷದಿಂದ ದೋಸೆ…ಚಟದಿಂದ ಚಟ್ನಿ..! ಇದು ದೋಸೆ – ಚಟ್ನಿ ಕಥೆ

ದಕ್ಷಿಣ ಭಾರತದಲ್ಲಿ ಮಸಾಲೆದೋಸೆಗೆ ಮೊದಲ ಆದ್ಯತೆ. ದಕ್ಷಿಣ ಕನ್ನಡದಲ್ಲಿ ನೀರು ದೋಸೆ ಹೆಸರುವಾಸಿ. ಇನ್ನು ದಾವಣಗೆರೆಯಲ್ಲಿ ಬೆಣ್ಣೆ ಮಸಾಲೆ ಪ್ರಸಿದ್ಧ. ಮೈಸೂರಿನ ಮೈಸೂರು ಮಸಾಲೆ ಬಗ್ಗೆ ಕೇಳದವರೇ ಇಲ್ಲ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೈಂಟಿನೈನ್ ವೆರೈಟಿ ದೋಸೆ ಎಂದು ಬಗೆ ಬಗೆಯ ರೀತಿಯಲ್ಲಿ ದೋಸೆ ಜನರ ಬಾಯನ್ನು ತಲುಪುತ್ತದೆ.

ದೋಷದಿಂದ ದೋಸೆ...ಚಟದಿಂದ ಚಟ್ನಿ..! ಇದು ದೋಸೆ - ಚಟ್ನಿ ಕಥೆ
ಸಾಂದರ್ಭಿಕ ಚಿತ್ರ
Edited By:

Updated on: Jul 09, 2022 | 7:30 AM

ದೋಸೆ‘ ಎನ್ನುವ ಪದ ಕೇಳಿದ ಕೂಡಲೇ ನಮ್ಮಲ್ಲಿ ಬಹಳಷ್ಟು ಜನರಿಗೆ ಬಾಯಲ್ಲಿ ನೀರೂರುತ್ತದೆ. ಮಸಾಲೆ ದೋಸೆ, ಬೆಣ್ಣೆ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ..ರವೆ ದೋಸೆ ಹೀಗೆ ಹೇಳುತ್ತಾ ಹೋದರೆ ಇದರ ಪಟ್ಟಿ ಲಂಕೆಯಲ್ಲಿ ಹನುಮಂತನ ಬಾಲೆ ಹೇಗೆ ಬೆಳೆಯುತ್ತಾ ಹೋಯಿತೋ ಹಾಗೇ ಮುಗಿಯುವುದೇ ಇಲ್ಲ. ನಮ್ಮ ದಕ್ಷಿಣ ಭಾರತದ ಪ್ರಮುಖ ತಿನಿಸುಗಳಲ್ಲಿ ದೋಸೆಗೆ ಅಗ್ರಸ್ಥಾನ. ದೋಸೆಯೊಂದಿಗೆ ಖಾರವಾದ ಕಾಯಿ ಚಟ್ನಿ, ಈರುಳ್ಳಿ ಆಲೂಗಡ್ಡೆ ಪಲ್ಯ..ಮೇಲೊಂದಿಷ್ಟು ಬೆಣ್ಣೆ.. ತುಪ್ಪಗಳು ಬಿದ್ದರೆ…ಆಹಾ!! ತಿಂದವನೇ ಬಲ್ಲ ಅದರ ರುಚಿ. ನಮ್ಮಲ್ಲಿ ಇಪ್ಪತೈದರಿಂದ ಮೂವತ್ತು ಕಿಲೋಮೀಟರಿಗೆ ಆ ಪ್ರದೇಶದ ಸಂಸ್ಕೃತಿ, ಭಾಷೆ, ಊಟೋಪಚಾರಗಳು ಬದಲಾದಂತೆ ದೋಸೆಯ ಹೆಸರು, ಮಾಡುವ ವಿಧಾನ, ರುಚಿ ಎಲ್ಲವೂ ಬೇರೆ ಬೇರೆಯಾಗುತ್ತಾ ಬಂದಿದೆ.

ದಕ್ಷಿಣ ಭಾರತದಲ್ಲಿ ಮಸಾಲೆದೋಸೆಗೆ ಮೊದಲ ಆದ್ಯತೆ. ದಕ್ಷಿಣ ಕನ್ನಡದಲ್ಲಿ ನೀರು ದೋಸೆ ಹೆಸರುವಾಸಿ. ಇನ್ನು ದಾವಣಗೆರೆಯಲ್ಲಿ ಬೆಣ್ಣೆ ಮಸಾಲೆ ಪ್ರಸಿದ್ಧ. ಮೈಸೂರಿನ ಮೈಸೂರು ಮಸಾಲೆ ಬಗ್ಗೆ ಕೇಳದವರೇ ಇಲ್ಲ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೈಂಟಿನೈನ್ ವೆರೈಟಿ ದೋಸೆ ಎಂದು ಬಗೆ ಬಗೆಯ ರೀತಿಯಲ್ಲಿ ದೋಸೆ ಜನರ ಬಾಯನ್ನು ತಲುಪುತ್ತದೆ. ಇಂದು ದೋಸೆಯ ಪ್ರಖ್ಯಾತಿ ಭಾರತವನ್ನು ದಾಟಿ ಹಲವಾರು ದೇಶಗಳಲ್ಲಿ ಹಬ್ಬಿದೆ. ನಾವಿಂದು ಯಾವುದೇ ದೇಶಕ್ಕೆ ಹೋದರೂ ನಮಗೆ ದೋಸೆ ಸಿಗುತ್ತದೆ. ಅದರ ರುಚಿ ಸ್ವಲ್ಪ ವ್ಯತ್ಯಾಸವಿರಬಹುದೇ ಹೊರತು ದೋಸೆ ಇಂದು ವಿದೇಶಗಳಲ್ಲಿಯೂ ಒಂದು ಪ್ರಮುಖ ಖಾದ್ಯವಾಗಿ ಮನ್ನಣೆ ಪಡೆಯುತ್ತದೆ.

ನಾನು ಸಹ ದೋಸೆಯ ಅಭಿಮಾನಿ… ನನ್ನಂತವರಿಗೆ ಒಂದು ಕೆಟ್ಟ ಅಭ್ಯಾಸವಿರುತ್ತದೆ. ನಾವು ಹೋಗುವ ಜಾಗ, ತಿನ್ನುವ ತಿನಿಸು, ಮಾತನಾಡುವ ವ್ಯಕ್ತಿ ಹೀಗೆ ಮಾಡುವ ಕೆಲಸದಲ್ಲಿ ಅವುಗಳ ಪೂರ್ವಾಪರವನ್ನು ತಿಳಿಯುವ ಕುತೂಹಲ. ಮೊನ್ನೆ ಬನಶಂಕರಿಯ ನೇತ್ರಧಾಮದ ಎದುರಿಗಿರುವ ತಳ್ಳೊಗಾಡಿಯಲ್ಲಿ ಪುಡಿ ಮಸಾಲೆ ದೋಸೆಯನ್ನು ತಿನ್ನುತ್ತಿರುವಾಗ ಹೀಗೊಂದು ಆಲೋಚನೆ ಬಂತು. ದೋಸೆ ಯಾರು ಮೊದಲು ಮಾಡಿದ್ದು? ಅದು ಹೇಗೆ ಇಷ್ಟು ವಿವಿಧ ರೂಪಗಳನ್ನು ಪಡೆಯಿತು? ಮೈಸೂರ್ ಪಾಕ್ ತರಹ ಇದು ಮೈಸೂರಿನ ಕೊಡುಗೆಯೇ? ಎಂಬೆಲ್ಲಾ ಪ್ರಶ್ನೆಗಳನ್ನು ಹಾಕಿಕೊಂಡು ಹುಡುಕಿದಾಗ ಒಂದೆರಡು ಕಡೆ ಈ ವಿಚಾರಗಳ ಬಗ್ಗೆ ವಿಸ್ತ್ರತ ಮಾಹಿತಿ ಸಿಕ್ಕಿತ್ತು.

ಇದನ್ನು ಓದಿ : ಬಾಳೆ ಎಲೆಯಲ್ಲಿ ಏಕೆ ಊಟ ಮಾಡಬೇಕು? ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ

ದೋಸೆ ಹುಟ್ಟಿದ್ದು ಬೆಳೆದಿದ್ದು ದಕ್ಷಿಣ ಕನ್ನಡದಲ್ಲಿ, ಕರ್ನಾಟಕದಲ್ಲಿ. ಹಿಂದೆ ಭಾರತದಲ್ಲಿ ಕೆಲವು ಸಮುದಾಯದವರು ಸಮುದ್ರವನ್ನು ದಾಟಬಾರದು ಎಂಬ ನಂಬಿಕೆ ಇತ್ತು.(ಇದನ್ನು ನಾವು ಗಣಿತ ಶಾಸ್ತ್ರಜ್ಞ ರಾಮಾನುಜನ್ ಅವರು ಲಂಡನ್ ಗೆ ಪ್ರಯಾಣಿಸುವ ಸಂದರ್ಭದಲ್ಲಿ ಎದುರಿಸಿದ ವಿರೋಧದಲ್ಲಿ ಕಾಣಬಹುದು) ಆದರೆ ವಿದೇಶೀ ಪಾನೀಯಗಳು ಅಂದರೆ ನಾವಿಂದು ಗುಂಡು, ಎಣ್ಣೆ ಎಂದು ಕರೆಯುವ ಮಧ್ಯಪಾನೀಯಗಳ ಆಸೆ ಬಹಳವಿತ್ತು. ಮಧ್ಯಪಾನ ಕೆಲವು ಸಮುದಾಯಗಳಲ್ಲಿ ದೋಷವೆಂದು, ಕೆಟ್ಟದೆಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಒಮ್ಮೆ ಪ್ರಾರಂಭಿಸಿದರೆ ಅವು ಚಟಗಳಾಗುವ ಸಾಧ್ಯತೆ ಹೆಚ್ಚು ಎಂದು ನಂಬುತ್ತಾರೆ. ಹೀಗಾಗಿ ಇವು ನಿಷಿದ್ಧ ವಸ್ತುಗಳಾಗಿದ್ದವು.

ಒಮ್ಮೆ ದಕ್ಷಿಣ ಕನ್ನಡದಲ್ಲಿ ಒಬ್ಬ ಹೋಟೆಲ್ ನ ಕೆಲಸಗಾರ ತನ್ನ ಬ್ರಿಟಿಷ್‌ ಸ್ನೇಹಿತನ ಸಹಾಯದಿಂದ ಈ ವಿದೇಶಿ ಮಧ್ಯವನ್ನು ತಯಾರಿಸುವ ಕಾರ್ಯಕ್ಕೆ ಇಳಿದುಬಿಟ್ಟ. ಆ ಬ್ರಿಟಿಷ್ ಹೇಳಿದ ಪ್ರಕಾರ ವಿದೇಶೀ ಮಧ್ಯಪಾನೀಯಗಳು ತಯಾರಾಗುತ್ತಿದ್ದದ್ದು ಬಾರ್ಲಿ ಅಕ್ಕಿಯಿಂದ. ಆದರೆ ಬಾರ್ಲಿ ಅಕ್ಕಿ ದೊರೆಯದ ಕಾರಣ ಭಾರತದಲ್ಲಿ ಲಭ್ಯವಿದ್ದ ಅಕ್ಕಿಯನ್ನೇ ಈ ಕೆಲಸಗಾರ ನೆನೆಹಾಕಿದ. ಒಂದು ದಿನದ ನಂತರ ಅಕ್ಕಿ ಬಸಿದು ಆ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಮುಚ್ಚಿಟ್ಟ.

ಆದರೆ ಈ ನೆನೆದಿರುವ ಅಕ್ಕಿ ಏನು ಮಾಡುವುದು? ಅನ್ನ ಮಾಡಲು ಇದು ಬಹಳ ಹೊತ್ತು ನೆನೆದುಬಿಟ್ಟಿದೆ.. ರುಬ್ಬಿ ಏನಾದರೂ ಮಾಡೋಣ ಎಂದು ಆ ರಾತ್ರಿ ಅಕ್ಕಿಯನ್ನು ರುಬ್ಬಿಟ್ಟ. ಮಾರನೇ ದಿನ ನೋಡಿದರೆ ಆ ಪಾತ್ರೆಯಿಂದ ಹಿಟ್ಟು ಜಿನುಗಿ ಆಚೆಯಲ್ಲಾ ಸುರಿದಿತ್ತು. ಇತ್ತಕಡೆ ಮಧ್ಯ ಮಾಡಲು ಇಟ್ಟಿದ್ದ ನೀರು ಕೆಟ್ಟ ವಾನಸೆ ಬರುತ್ತಿತ್ತು. ಕೆಲಸವೆಲ್ಲಾ ಹಾಳಾಯ್ತು ಎಂದು ಬೈದುಕೊಳ್ಳುತ್ತಲೇ ಆ ಹಿಟ್ಟನ್ನು ಕಾದ ಕಾವಲಿಯ ಮೇಲೆ ರೊಟ್ಟಿಯಂತೆ ಹಾಕಿದ. ಅದು ಗರಿಗರಿಯಾದ ಒಂದು ರೂಪ ಪಡೆಯಿತು. ಅದನ್ನು ಹಾಗೇ ತಿನ್ನುವುದನ್ನು ಹೇಗೆ ಎಂದು ತೆಂಗಿನತುರಿ, ಮೆಣಸಿನಕಾಯಿ, ಉಪ್ಪು, ಹುಣಸೆ ಸೇರಿಸಿ ಒಂದು ಜೊತೆಯನ್ನು ತಯಾರಿಸಿದ. ಅದಕ್ಕೆ ಹುಳಿಗಾಗಿ ಬೇಯಿಸಿಟ್ಟಿದ್ದ ಒಂದು ಆಲೂಗಡ್ಡೆಯನ್ನು ಮತ್ತು ಈರುಳ್ಳಿಯನ್ನು ಸೇರಿಸಿದ ಪಲ್ಯ ಮಾಡಿ ಚಪ್ಪರಿಸಿದ.

ದೋಷ ಎಂಬ ನಂಬಿಕೆಯಿದ್ದ ಪಾನೀಯ ತಯಾರಿಸಲು ಹೋಗಿ ಆತ ಮುಂದೆ ಪ್ರಪಂಚದಾದ್ಯಂತ ಪ್ರೀತಿಸಲ್ಪಡುವ ಒಂದು ಖಾದ್ಯಕ್ಕೆ ಜನ್ಮ ನೀಡಿದ್ದ. ಹೀಗೆ ದೋಷದಿಂದ ಪ್ರಾರಂಭವಾದ ದೋಸೆ, ಚಟವಾಗಿ ಪರಿವರ್ತನೆ ಹೊಂದಿದ ಚಟ್ನಿ ಭಾರತೀಯರ ಅಚ್ಚುಮೆಚ್ಚಿನ ತಿನಿಸಾಗಿ ಮಾರ್ಪಾಡಾಯಿತು. ಕೊನೆಗೆ ಈ ದೋಷ ಎಂಬ ಪದದಿಂದಲೇ ದೋಸೆ, ಚಟ ಎಂಬ ಪದದಿಂದಲೇ ಚಟ್ನಿ ಉಗಮವಾಗಿ ಇಂದು ನಮ್ಮ ಹೊಟ್ಟೆ ಸೇರುತ್ತಿವೆ. ಇಷ್ಟಾದ ಮೇಲೆ ಮನಯಲ್ಲೇ ಆಗಲಿ, ಹೋಟೆಲ್ ನಲ್ಲೇ ಆಗಲಿ ಒಂದು ದೋಸೆ ತಿಂದು ಒಂದು ಕಪ್ ಟೀ/ಕಾಫಿ ಕುಡಿಯಿರಿ.

ಶ್ರೀರಕ್ಷಾ ಶಂಕರ್

Web contact

TV9 Kannada

Read More
Follow Us