16th Finance Commission: ಅರವಿಂದ್ ಪನಗರಿಯ ನೇತೃತ್ವದಲ್ಲಿ ದೆಹಲಿಯಲ್ಲಿ 16ನೇ ಹಣಕಾಸು ಆಯೋಗದ ಚೊಚ್ಚಲ ಸಭೆ

|

Updated on: Feb 14, 2024 | 6:07 PM

Arvind Panagariya Chairs 16th Finance Commission's First Meeting: ಅರವಿಂದ್ ಪನಗರಿಯ ಅಧ್ಯಕ್ಷತೆಯ 16ನೇ ಹಣಕಾಸು ಆಯೋಗದ ಮೊದಲ ಸಭೆ ದೆಹಲಿಯಲ್ಲಿ ಫೆಬ್ರುವರಿ 14ರಂದು ನಡೆದಿದೆ. ಆಯೋಗದ ಮುಂದಿರುವ ಕಾರ್ಯಗಳು, ಸವಾಲುಗಳ ಕುರಿತು ಈ ಮೊದಲ ಸಭೆಯಲ್ಲಿ ಚರ್ಚಿಸಲಾಗಿದೆ. ಈ 16ನೇ ಹಣಕಾಸು ಆಯೋಗ ತನ್ನ ಶಿಫಾರಸುಗಳನ್ನು ಸಲ್ಲಿಸಲು 2025ರ ಅಕ್ಟೋಬರ್ 31ರವರೆಗೂ ಕಾಲಾವಕಾಶ ಹೊಂದಿದೆ.

16th Finance Commission: ಅರವಿಂದ್ ಪನಗರಿಯ ನೇತೃತ್ವದಲ್ಲಿ ದೆಹಲಿಯಲ್ಲಿ 16ನೇ ಹಣಕಾಸು ಆಯೋಗದ ಚೊಚ್ಚಲ ಸಭೆ
16ನೇ ಹಣಕಾಸು ಆಯೋಗ
Follow us on

ನವದೆಹಲಿ, ಫೆಬ್ರುವರಿ 14: ದೇಶದ ಮೊದಲ ನೀತಿ ಆಯೋಗ್​ನ ಮುಖ್ಯಸ್ಥರಾಗಿದ್ದ (Vice Chairman) ಅರವಿಂದ್ ಪನಗರಿಯ ನೇತೃತ್ವದಲ್ಲಿ 16ನೇ ಹಣಕಾಸು ಆಯೋಗದ ಮೊದಲ ಸಭೆ ಇಂದು ಬುಧವಾರ ನಡೆದಿದೆ. ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆ ಪ್ರಕಾರ, ನವದೆಹಲಿಯ ಜನಪಥ್ ರಸ್ತೆಯಲ್ಲಿರುವ ಜವಾಹರ್ ವ್ಯಾಪಾರ್ ಭವನ್​ನಲ್ಲಿ ಡಾ. ಅರವಿಂದ್ ಪನಗರಿಯ ಅಧ್ಯಕ್ಷತೆಯಲ್ಲಿ 16ನೇ ಹಣಕಾಸು ಆಯೋಗದ ಮೊದಲ ಸಭೆ ನಡೆದಿದೆ. ಆಯೋಗದ ಕಾರ್ಯದರ್ಶಿ ಋತ್ವಿಕ್ ರಂಜನಂ ಪಾಂಡೆ ಹಾಗೂ ಇತರ ಅಧಿಕಾರಿಗಳು ಈ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರನ್ನು ಸ್ವಾಗತಿಸಿದರು’ ಎಂದು ಹೇಳಲಾಗಿದೆ.

ಈ ಆರಂಭಿಕ ಸಭೆಯಲ್ಲಿ ಆಯೋಗದ ಮುಂದಿರುವ ಕಾರ್ಯಗಳನ್ನು ಅವಲೋಕಿಸುವ ಕೆಲಸವಾಗಿದೆ. ಆಯೋಗದ ಮುಂದೆ ಇರುವ ನಿಬಂಧನೆಗಳೇನು ಎಂದು ಗಣನೆಗೆ ತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು, ಕೇಂದ್ರ ಸಚಿವಾಲಯಗಳು, ತಜ್ಞರು ಸೇರಿದಂತೆ ವಿವಿಧ ಭಾಗಿದಾರರೊಂದಿಗೆ ಪೂರ್ಣ ಸಮಾಲೋಚನೆ ನಡೆಸಬೇಕಾದ ಅಗತ್ಯತೆಗಳ ಕುರಿತು ಚರ್ಚಿಸಲಾಗಿದೆ.

ಒಕ್ಕೂಟ ಹಣಕಾಸು ಸಂಬಂಧದ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಂಶೋಧನಾ ಸಂಸ್ಥೆಗಳು, ಥಿಂಕ್ ಟ್ಯಾಂಕ್​ಗಳು ಇತ್ಯಾದಿ ಸಾಧ್ಯ ಇರುವ ಎಲ್ಲಾ ಪರಿಣಿತರನ್ನು ಬಳಸಿಕೊಂಡು ಬಹಳ ಆಳವಾದ ಅಧ್ಯಯನದ ಕೆಲಸ ಮಾಡಬೇಕು ಎಂಬುದನ್ನು ಈ ಆಯೋಗ ತನ್ನ ಮೊದಲ ಸಭೆಯಲ್ಲಿ ಕಂಡುಕೊಂಡಿದೆ.

ಇದನ್ನೂ ಓದಿ: ಯುಪಿಎ ಸರ್ಕಾರ ಇದ್ದಾಗ ಸ್ವಾಮಿನಾಥನ್ ಸಮಿತಿಯ ಎಂಎಸ್​ಪಿ ಶಿಫಾರಸನ್ನು ತಿರಸ್ಕರಿಸಿದ್ದು ಯಾಕೆ? ಇಲ್ಲಿದೆ ಕಾರಣ

2023ರ ಡಿಸೆಂಬರ್ 31ರಲ್ಲಿ ಸರ್ಕಾರ ಅರವಿಂದ್ ಪನಗರಿಯಾ ನೇತೃತ್ವದ 16ನೇ ಹಣಕಾಸು ಆಯೋಗದ ರಚನೆ ಮಾಡಿದೆ. ಛೇರ್ಮನ್ ಜೊತೆಗೆ ಇನ್ನೂ ನಾಲ್ವರು ಸದಸ್ಯರು ಈ ಆಯೋಗದಲ್ಲಿ ಇದ್ದಾರೆ. ಕಾರ್ಯದರ್ಶಿ ಋತ್ವಿತ್ ರಂಜನಂ ಪಾಂಡೆ, ಇಬ್ಬರು ಜಂಟಿ ಕಾರ್ಯದರ್ಶಿಗಳು ಹಾಗೂ ಒಬ್ಬ ಆರ್ಥಿಕ ಸಲಹೆಗಾರರು ಈ ಆಯೋಗಕ್ಕೆ ನೆರವಾಗಲಿದ್ದಾರೆ.

ಮಾಜಿ ವೆಚ್ಚ ಇಲಾಖೆ ಕಾರ್ಯದರ್ಶಿ ಅಜಯ್ ನಾರಾಯಣ್ ಝಾ, ನಿವೃತ್ತ ಐಎಎಸ್ ಅಧಿಕಾರಿ ಆನೀ ಜಾರ್ಜ್ ಮ್ಯಾಥ್ಯೂ, ಅರ್ಥ ಗ್ಲೋಬಲ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ನಿರಂಜನ್ ರಾಜಾಧ್ಯಕ್ಷ, ಹಾಗು ಎಸ್​ಬಿಐ ಗ್ರೂಪ್​ನ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಾ ಕಾಂತಿ ಘೋಷ್ ಅವರು ನಾಲ್ವರು ಸದಸ್ಯರಾಗಿದ್ದಾರೆ.

ಈ ನಾಲ್ವರು ಸದಸ್ಯರಲ್ಲಿ ಸೌಮ್ಯಾ ಕಾಂತಿ ಘೋಷ್ ಮಾತ್ರವೇ ಅರೆಕಾಲಿಕ ಸದಸ್ಯೆ. ಇನ್ನುಳಿದ ಮೂವರು ಸದಸ್ಯರು ಪೂರ್ಣಾವಧಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ದುಬೈನಲ್ಲಿ ಚೀನಾದ ಡ್ರ್ಯಾಗನ್ ಮಾರ್ಟ್​ಗೆ ಪ್ರತಿಯಾಗಿ ಭಾರತ್ ಮಾರ್ಟ್; ಭಾರತದ ಈ ಮಹಾಮಳಿಗೆಯ ವೈಶಿಷ್ಟ್ಯತೆ ತಿಳಿದಿರಿ

2025ರ ಅ. 31ರೊಳಗೆ ಶಿಫಾರಸುಗಳನ್ನು ಸಲ್ಲಿಸಬೇಕು ಹಣಕಾಸು ಆಯೋಗ

ಹದಿನಾರನೇ ಹಣಕಾಸು ಆಯೋಗ ದೇಶದ ಪ್ರತಿಯೊಂದು ರಾಜ್ಯ, ಜಿಲ್ಲೆಗಳ ಪರಿಸ್ಥಿತಿಯನ್ನ ಅವಲೋಕಿಸಬೇಕಿರುವುದರಿಂದ 2025ರ ಅಕ್ಟೋಬರ್ 31ರವರೆಗೆ ಕಾಲಾವಕಾಶ ಹೊಂದಿದೆ. ನಿಗದಿ ದಿನದೊಳಗೆ ಯಾವಾಗ ಸಲ್ಲಿಸಿದರೂ ಅದರ ಶಿಫಾರಸುಗಳು ಚಾಲನೆಗೆ ಬರುವುದು 2026ರ ಏಪ್ರಿಲ್ 1ರಿಂದಲೇ. 2026-27ರಿಂದ 2031-32ರ ಹಣಕಾಸು ವರ್ಷಗಳವರೆಗೆ ಈ ಶಿಫಾರಸುಗಳು ಅನ್ವಯ ಆಗುತ್ತವೆ.

ಕೇಂದ್ರಕ್ಕೆ ಸಿಗುವ ತೆರಿಗೆ ಹಣ ಹೇಗೆ ಹಂಚಿಕೆ ಆಗಬೇಕು ಎಂಬುದನ್ನು ಈ ಆಯೋಗ ನಿರ್ಧರಿಸುತ್ತದೆ. ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಎಷ್ಟು ಪ್ರಮಾಣದಲ್ಲಿ ತೆರಿಗೆ ಹಂಚಿಕೆಯಾಗಬೇಕು; ರಾಜ್ಯ ರಾಜ್ಯಗಳ ಮಧ್ಯೆ ಯಾವ ಪ್ರಮಾಣದಲ್ಲಿ ಹಂಚಿಕೆ ಆಗಬೇಕು ಎಂಬುದನ್ನು ಇದು ನಿರ್ದಿಷ್ಟಪಡಿಸುತ್ತದೆ. ಅದರ ಪ್ರಕಾರವಾಗಿಯೇ ಸರ್ಕಾರ ರಾಜ್ಯ ಸರ್ಕಾರಗಳಿಗೆ ತೆರಿಗೆ ಹಣ ವಿತರಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ