ಗ್ರಾಹಕರ ಹಿತರಕ್ಷಣೆಯೇ ಪ್ರಧಾನ; ಇನ್ಷೂರೆನ್ಸ್ ವಿತರಣೆಯಲ್ಲಿ ಸುಧಾರಣೆಗಳಿಗೆ ಐಆರ್​ಡಿಎಐ ಮುಂದು

Big reforms expected in insurance distribution sector: ಇನ್ಷೂರೆನ್ಸ್ ನಿಯಂತ್ರಣ ಸಂಸ್ಥೆಯಾದ ಐಆರ್​ಡಿಎಐ ಇನ್ಷೂರೆನ್ಸ್ ವಿತರಣಾ ಕ್ಷೇತ್ರದಲ್ಲಿ ಸುಧಾರಣೆ ತರಲು ಮುಂದಾಗಿದೆ. ಗ್ರಾಹಕರ ಹಿತರಕ್ಷಣೆ ಪ್ರಧಾನವಾಗಿಟ್ಟುಕೊಂಡು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈ ಸಂಬಂಧ ಚರ್ಚಾ ಪತ್ರ ಬಿಡುಗಡೆಯಾಗಲಿದ್ದು, ಭಾಗಿದಾರರಿಂದ ಅಭಿಪ್ರಾಯಪಡೆದು, ಮುಂದಿನ ಹೆಜ್ಜೆ ಇರಿಸಬಹುದು.

ಗ್ರಾಹಕರ ಹಿತರಕ್ಷಣೆಯೇ ಪ್ರಧಾನ; ಇನ್ಷೂರೆನ್ಸ್ ವಿತರಣೆಯಲ್ಲಿ ಸುಧಾರಣೆಗಳಿಗೆ ಐಆರ್​ಡಿಎಐ ಮುಂದು
ಇನ್ಷೂರೆನ್ಸ್
Image Credit source: Getty Images

Updated on: Jun 28, 2026 | 4:38 PM

ಮುಖ್ಯಾಂಶಗಳು

  • ಐಆರ್​ಡಿಎಐ ಇನ್ಷೂರೆನ್ಸ್ ವಿತರಣಾ ಕ್ಷೇತ್ರದಲ್ಲಿ ಸುಧಾರಣೆ ತರಲು ಮುಂದಾಗಿದೆ.
  • ಗ್ರಾಹಕರ ಹಿತರಕ್ಷಣೆ ಪ್ರಧಾನವಾಗಿಟ್ಟುಕೊಂಡು ಬದಲಾವಣೆಗಳನ್ನು ಮಾಡಲಾಗುತ್ತಿದೆ.
  • ಈ ಸಂಬಂಧ ಚರ್ಚಾ ಪತ್ರ ಬಿಡುಗಡೆಯಾಗಲಿದ್ದು, ಭಾಗಿದಾರರಿಂದ ಅಭಿಪ್ರಾಯ ಪಡೆಯಬಹುದು.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಶೀಘ್ರದಲ್ಲೇ ವಿಮಾ ವಿತರಣಾ ವಲಯದಲ್ಲಿ (Insurance Distribution Sector) ದೊಡ್ಡ ಬದಲಾವಣೆಗಳನ್ನು ತರಲು ಹೊರಟಿದೆ. ಈ ಸಂಬಂಧ ಚರ್ಚಾ ಪತ್ರವೊಂದನ್ನು (Discussion Paper) ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಸುಧಾರಣೆಗಳ ಮುಖ್ಯ ಉದ್ದೇಶ “ಗ್ರಾಹಕರ ಹಿತರಕ್ಷಣೆ” ಆಗಿದೆ. ಭಾಗಿದಾರ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಸ್ಪಂದನೆ, ಸಲಹೆಗಳನ್ನು ಎದುರು ನೋಡಲಿದೆ. ವಿಮಾ ವಿತರಕರಿಗೆ ಇನ್ಸೆಂಟಿವ್, ಗ್ರಾಹಕ ಆಯ್ಕೆ, ಬ್ಯಾಂಕ್ ಅಷೂರೆನ್​ಸ್ ಪಾರ್ಟ್ನರ್​ಶಿಪ್ ಇತ್ಯಾದಿ ವಿಮಾ ವಿತರಣಾ ಸಂಬಂಧಿ ಸುಧಾರಣೆಗಳನ್ನು ತರಲು ಪ್ರಸ್ತಾಪಿಸಲಾಗಿದೆ ಎಂದು ಇಟಿ ನೌ ವರದಿಯಲ್ಲಿ ಹೇಳಲಾಗಿದೆ. ವಿಮಾ ವಿತರಣಾ ಕ್ಷೇತ್ರದಲ್ಲಿ ಐಆರ್​ಡಿಎಐ ತರಲಿರುವ ಸುಧಾರಣೆಗಳು ಈ ಕೆಳಕಾಣಿಸಿದಂತಿವೆ:

ಗ್ರಾಹಕರ ಹಿತರಕ್ಷಣೆಯೇ ಮುಖ್ಯ

ಗ್ರಾಹಕರನ್ನು ತಪ್ಪುದಾರಿಗೆ ಎಳೆದು ವಿಮೆ ಮಾರಾಟ ಮಾಡುವುದನ್ನು (Mis-selling) ತಡೆಯುವುದು ಮತ್ತು ಗ್ರಾಹಕರು ಮುಕ್ತ ಮಾರುಕಟ್ಟೆಯಲ್ಲಿ ತಮಗೆ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುವುದು ಈ ಸುಧಾರಣೆಯ ಪ್ರಮುಖ ಗುರಿಯಾಗಿದೆ.

ಬಡ್ತಿ ಮತ್ತು ಕಮಿಷನ್ ಲಿಂಕ್

ವಿಮಾ ಏಜೆಂಟರು ಮತ್ತು ವಿತರಕರಿಗೆ ನೀಡಲಾಗುವ ಕಮಿಷನ್ ಅಥವಾ ಪ್ರೋತ್ಸಾಹಕ ಧನವನ್ನು (Incentives) ಕೇವಲ ಹೊಸ ಪಾಲಿಸಿಗಳನ್ನು ಮಾರಾಟ ಮಾಡುವುದರ ಮೇಲೆ ಮಾತ್ರ ನಿರ್ಧರಿಸದೆ, ಗ್ರಾಹಕರು ಎಷ್ಟು ವರ್ಷಗಳ ಕಾಲ ಆ ಪಾಲಿಸಿಯನ್ನು ಮುಂದುವರಿಸುತ್ತಾರೆ (Persistency) ಎಂಬುದರ ಆಧಾರದ ಮೇಲೆ ಲಿಂಕ್ ಮಾಡಲು ಉದ್ದೇಶಿಸಲಾಗಿದೆ.

ಪಾಲಿಸಿ ಮುಂದುವರಿಕೆಗೆ ಒತ್ತು

ಗ್ರಾಹಕರು ಮಧ್ಯದಲ್ಲೇ ನಿಲ್ಲಿಸಿರುವ ಪಾಲಿಸಿಗಳನ್ನು ಮತ್ತೆ ಸಕ್ರಿಯಗೊಳಿಸಲು ವಿಮಾ ಸಂಸ್ಥೆಗಳು ಜಂಟಿ ಪ್ರಯತ್ನ ನಡೆಸಬೇಕು ಎಂದು ಐಆರ್‌ಡಿಎಐ (IRDAI) ಹೇಳಿದೆ. ಪಾಲಿಸಿದಾರರು ದೀರ್ಘಕಾಲ ಪ್ರೀಮಿಯಂ ಪಾವತಿಸುವಂತೆ ಪ್ರೇರೇಪಿಸುವುದು ಇದರ ಉದ್ದೇಶ.

ಬ್ಯಾಂಕ್ ಅಶೂರೆನ್ಸ್ (Bancassurance) ಮತ್ತು ಮುಕ್ತ ಮಾರುಕಟ್ಟೆ

ಬ್ಯಾಂಕುಗಳ ಮೂಲಕ ವಿಮೆ ಮಾರಾಟ ಮಾಡುವ ವ್ಯವಸ್ಥೆಯ ಮೇಲೆ ಕಠಿಣ ನಿಯಮಗಳನ್ನು ಹೇರುವ ಬದಲು, ಮಾರುಕಟ್ಟೆಯ ಪೈಪೋಟಿಗೇ ಅದನ್ನು ಬಿಡಲು ಪ್ರಾಧಿಕಾರ ಒಲವು ತೋರಿದೆ. ತಪ್ಪು ಮಾರಾಟ ಕೇವಲ ಬ್ಯಾಂಕುಗಳಲ್ಲಿ ಮಾತ್ರವಲ್ಲ, ಬೇರೆ ವಿತರಣಾ ವಾಹಿನಿಗಳಲ್ಲೂ ನಡೆಯುತ್ತಿರುವುದರಿಂದ ಒಟ್ಟಾರೆ ವ್ಯವಸ್ಥೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸರಳ ನಿಯಮಗಳನ್ನು ರೂಪಿಸುವ ಚಿಂತನೆ

ನಿಯಮಗಳನ್ನು ತೀರಾ ಕಟ್ಟುನಿಟ್ಟಾಗಿ ಅಥವಾ ಜಿಡ್ಡಾಗಿ ಮಾಡುವ ಬದಲು, ತತ್ವ ಆಧಾರಿತ (Principles-based) ನಿಯಮಗಳನ್ನು ರೂಪಿಸಲು IRDAI ಯೋಚಿಸುತ್ತಿದೆ. ಇದು ಉತ್ಪನ್ನದ ಸಂಕೀರ್ಣತೆ ಮತ್ತು ಗ್ರಾಹಕರ ಪ್ರೊಫೈಲ್ ಆಧರಿಸಿ ಬದಲಾಗಬಹುದು.

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್​ನಲ್ಲಿ 30 ಲಕ್ಷ ರೂ ಹೂಡಿಕೆಯಿಂದ 20,000 ರೂಗೂ ಹೆಚ್ಚು ಮಾಸಿಕ ವರಮಾನ

ಈ ಚರ್ಚಾ ಪತ್ರ ಬಿಡುಗಡೆಯಾದ ನಂತರ, ವಿಮಾ ಕಂಪನಿಗಳು, ಏಜೆಂಟರು ಮತ್ತು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಪಡೆದು ಅಂತಿಮ ನಿಯಮಗಳನ್ನು ರೂಪಿಸಲಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ವಿಮಾ ಗ್ರಾಹಕರಿಗೆ ಮೋಸವಾಗದಂತೆ ತಡೆದು, ಹೆಚ್ಚು ಪಾರದರ್ಶಕತೆ ತರುವುದು ಈ ಸುಧಾರಣೆಯ ಉದ್ದೇಶವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us