Airbnb Layoffs: ಶೇ. 30ರಷ್ಟು ಹೆಚ್​ಆರ್ ಸಿಬ್ಬಂದಿ ಮನೆಗೆ ಕಳುಹಿಸಿದ ಏರ್​ಬಿಎನ್​ಬಿ

Airbnb Recruitment Team Face Heat: ಏರ್​ಬಿಎನ್​ಬಿಯ 6,800 ಉದ್ಯೋಗಿಗಳ ಪೈಕಿ 30 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇವರೆಲ್ಲರೂ ಈ ಕಂಪನಿಯ ರೆಕ್ರುಟ್ಮೆಂಟ್ ತಂಡದಲ್ಲಿದ್ದವರು. ಆದರೆ, ಮುಂದಿನ ದಿನಗಳಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಿಸುವುದಾಗಿ ಕಂಪನಿ ಹೇಳಿಕೊಂಡಿದೆ.

Airbnb Layoffs: ಶೇ. 30ರಷ್ಟು ಹೆಚ್​ಆರ್ ಸಿಬ್ಬಂದಿ ಮನೆಗೆ ಕಳುಹಿಸಿದ ಏರ್​ಬಿಎನ್​ಬಿ
ಲಕ್ಸುರಿ ಮನೆ

Updated on: Mar 06, 2023 | 11:31 AM

ನವದೆಹಲಿ: ಅಮೆರಿಕ ಮೂಲದ ಮನೆಗಳ ಬಾಡಿಗೆ ಬ್ರೋಕರ್ ಸಂಸ್ಥೆ ಏರ್​ಬಿಎನ್​ಬಿ (Airbnb) ತನ್ನ ನೇಮಕಾತಿ ವಿಭಾಗದ ಶೇ. 30ರಷ್ಟು ಸಿಬ್ಬಂದಿಯನ್ನು ಲೇ ಆಫ್ (Layoffs) ಮಾಡಿದೆ. ಕೆಲಸ ಕಳೆದುಕೊಂಡವರ ಸಂಖ್ಯೆ ಸುಮಾರು 30 ಎನ್ನಲಾಗಿದೆ. ಈ ಸಂಸ್ಥೆಯಲ್ಲಿ 6,800 ಮಂದಿ ಉದ್ಯೋಗಿಗಳಿದ್ದು, ಕೆಲಸ ಹೋದವರ ಪ್ರಮಾಣ ಶೇ. 0.4ರಷ್ಟಿರಬಹುದು ಎಂದು ಬ್ಲೂಮ್​ಬರ್ಗ್​ನಲ್ಲಿ ಪ್ರಕಟವಾದ ವರದಿಯಿಂದ ತಿಳಿದುಬರುತ್ತದೆ.

ಆದರೆ, ಏರ್​ಬಿಎನ್​ಬಿ ಈ ವರ್ಷ ತನ್ನ ಸಿಬ್ಬಂದಿ ಸಂಖ್ಯೆ ಹೆಚ್ಚಿಸುವ ಸನ್ನಾಹದಲ್ಲಿದೆ. ಸಂಸ್ಥೆಯ ಮಾರುಕಟ್ಟೆ ತಂತ್ರಗಾರಿಕೆ ತುಸು ಬದಲಾಗಿದೆ. ಈ ನಿಟ್ಟಿನಲ್ಲಿ ಇದಕ್ಕೆ ಪೂರಕವಾಗಿ ರೆಕ್ರೂಟಿಂಗ್ ಟೀಮ್ ಅನ್ನು ಪರಿಷ್ಕರಿಸಲಾಗುತ್ತಿದ್ದು, ಅದರ ಭಾಗವಾಗಿಯೇ 30ಮಂದಿಯನ್ನು ಕೈಬಿಡಲು ನಿರ್ಧರಿಸಲಾಗಿದೆ.

ಕಳೆದ ವರ್ಷ ಏರ್​ಬಿಎನ್​ಬಿಯ ವ್ಯವಹಾರ ಶೇ. 11ರಷ್ಟು ವೃದ್ಧಿಸಿತ್ತು. ಈ ವರ್ಷ ಸಂಸ್ಥೆ ಶೇ. 2ರಿಂದ 4ರಷ್ಟು ಹೊಸಬರನ್ನು ನೇಮಕಾತಿ ಮಾಡಿಕೊಳ್ಳಲು ಯೋಜಿಸಿದೆ. ಹೀಗಾಗಿ, ಕಂಪನಿಯ ಇತರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

2008ರಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆರಂಭವಾದ ಏರ್​ಬಿಎನ್​ಬಿ ಲಕ್ಸುರಿ ಮನೆ, ರಿಸಾರ್ಟ್, ಹೋಮ್​ಸ್ಟೇ, ಹೋಟೆಲ್​ಗಳ ಬುಕಿಂಗ್ ಮಾಡುವ ಆನ್​ಲೈನ್ ಮಾರುಕಟ್ಟೆಯಾಗಿದೆ. ಇದು ಬ್ರೋಕರ್ ಕಂಪನಿಯಾಗಿದ್ದು ಪ್ರತೀ ಬುಕಿಂಗ್​ಗೆ ಕಮಿಷನ್ ಪಡೆಯುವ ಮೂಲಕ ಆದಾಯ ಗಳಿಸುತ್ತದೆ. ಇಲ್ಲಿ ಏರ್​ಬಿಎನ್​ಬಿ ಎಂದರೆ ಏರ್ ಬೆಡ್ ಅಂಡ್ ಬ್ರೇಕ್ ಫಾಸ್ಟ್ ಡಾಟ್ ಕಾಮ್ ಎಂಬುದು ಮೂಲ ಹೆಸರು ಎಂದು ವಿಕಿಪೀಡಿಯಾದಲ್ಲಿ ಮಾಹಿತಿ ಇದೆ. ಬ್ರಯಾನ್ ಚೆಸ್ಕಿ ಇದರ ಸಹಸಂಸ್ಥಾಪಕರು.

ಇದನ್ನೂ ಓದಿGold Bond: ಕಡಿಮೆ ಬೆಲೆಗೆ ಸರ್ಕಾರದಿಂದ ಚಿನ್ನ; ಮಾರ್ಚ್ 10ರವರೆಗೆ ಹೂಡಿಕೆ ಅವಕಾಶ

ಕಳೆದ ವರ್ಷ ಏರ್​ಬಿಎನ್​ಬಿ ಮೊದಲ ಬಾರಿಗೆ ಲಾಭ ತೋರಿಸಿದೆ. ಡಿಸೆಂಬರ್ ಅಂತ್ಯದ ಕೊನೆಯ ತ್ರೈಮಾಸಿಕದಲ್ಲಿ 2 ಬಿಲಿಯನ್ ಡಾಲರ್​ನಷ್ಟು ಆದಾಯ ಗಳಿಸಿದೆ. ಅದರಲ್ಲಿ 319 ಮಿಲಿಯನ್ ಡಾಲರ್​ನಷ್ಟು ಲಾಭ ಕೂಡ ಬಂದಿದೆಯಂತೆ.

ಎರಡು ಮೂರು ವರ್ಷಗಳ ಹಿಂದೆ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಜಾಗತಿಕವಾಗಿ ಪ್ರವಾಸ, ಪ್ರಯಾಣಗಳಿಗೆ ನಿರ್ಬಂಧಗಳಿದ್ದುದು ಏರ್​ಬಿಎನ್​ಬಿ ವ್ಯವಹಾರಕ್ಕೆ ಭಾರೀ ನಷ್ಟವಾಗಿತ್ತು. ಆಗ 1,900 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಲಾಗಿತ್ತು. ಅಂದರೆ ಶೇ. 25ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಅದು ಆ ಸಂದರ್ಭದ ಅನಿವಾರ್ಯತೆಯೂ ಆಗಿತ್ತು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us