Cheaper Items: ಹೊಸ ಜಿಎಸ್​ಟಿ ದರ: ಅಗ್ಗವಾಗಲಿರುವ ವಸ್ತುಗಳಿವು

49th GST Council Meeting: ಶನಿವಾರ ನಡೆದ 49ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಪೆನ್ಸಿಲ್ ಶಾರ್ಪ್ನರ್, ಲಿಕ್ವಿಡ್ ಜ್ಯಾಗರಿ, ಟ್ಯಾಗ್ ಟ್ರ್ಯಾಕಿಂಗ್ ಡಿವೈಸ್ ಮೊದಲಾದ ವಸ್ತುಗಳ ಮೇಲಿನ ತೆರಿಗೆಯನ್ನು ಇಳಿಸಲಾಗಿದೆ. ಇವುಗಳ ಬೆಲೆ ಕಡಿಮೆಗೊಂಡಿದೆ.

Cheaper Items: ಹೊಸ ಜಿಎಸ್​ಟಿ ದರ: ಅಗ್ಗವಾಗಲಿರುವ ವಸ್ತುಗಳಿವು
ಸಾಂದರ್ಭಿಕ ಚಿತ್ರ

Updated on: Feb 20, 2023 | 1:18 PM

ನವದೆಹಲಿ: ಮೊನ್ನೆ ಶನಿವಾರ ನಡೆದ ಜಿಎಸ್​ಟಿ ಸಭೆಯಲ್ಲಿ (49th GST Council Meeting) ಯಾವ್ಯಾವುದರ ತೆರಿಗೆ ಏರಿಕೆ, ಇಳಿಕೆ ಮಾಡಬೇಕೆಂದು ನಿರ್ಧರಿಸಲಾಗಿದೆ. ಈ ಬಗ್ಗೆ ಒಂದಷ್ಟು ಸ್ಪಷ್ಟ ಚಿತ್ರಣ ಈಗ ಲಭ್ಯವಾಗಿದೆ. ಪೆನ್ಸಿಲ್ ಶಾರ್ಪ್ನರ್​ಗಳ ಮೇಲಿನ ಜಿಎಸ್​ಟಿ ದರ ಶೇ. 18ರಷ್ಟಿಂದ ಶೇ. 12ಕ್ಕೆ ಇಳಿಸಲಾಗಿದೆ. ಟ್ಯಾಗ್ ಟ್ರ್ಯಾಕಿಂಗ್ ಡಿವೈಸ್ ಅಥವಾ ಡಾಟಾ ಲಾಗರ್​ಗಳಿಗೆ ಯಾವುದೇ ತೆರಿಗೆ ವಿಧಿಸದಿರಲು ನಿರ್ಧರಿಸಲಾಗಿದೆ. ಈ ಮೊದಲು ಇವುಗಳಿಗೆ ಶೇ. 18ರಷ್ಟು ಜಿಎಸ್​ಟಿ ಇತ್ತು.

ಇನ್ನು, ಧ್ರವ ರೂಪದ ಬೆಲ್ಲಕ್ಕೆ ಶೇ. 15ರಷ್ಟು ಇದ್ದ ಜಿಎಸ್​ಟಿಯನ್ನು ಶೂನ್ಯಕ್ಕೆ ತರಲಾಗಿದೆ. ಅಂದರೆ ಇದಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಚಿಲ್ಲರೆಯಾಗಿ ಈ ಉತ್ಪನ್ನವನ್ನು ಮಾರುವುದಾದರೆ ಶೇ. 5ರಷ್ಟು ತೆರಿಗೆ ಹಾಕಲಾಗುತ್ತದೆ. ಇದನ್ನು ಪ್ಯಾಕೇಜ್ ರೂಪದಲ್ಲಿ ಮಾರುವಾಗಲೂ ಶೇ. 5ರಷ್ಟು ಜಿಎಸ್​ಟಿ ಇರುತ್ತದೆ.

ಇದೇ ವೇಳೆ, ಕಲ್ಲಿದ್ದಲು ತ್ಯಾಜ್ಯ ಅಥವಾ ಕಲ್ಲಿದ್ದಲು ಉಳಿಕೆಗೆ ತೆರಿಗೆ ವಿನಾಯಿತಿ ನೀಡಲು ಜಿಎಸ್​ಟಿ ಕೌನ್ಸಿಲ್ ತೀರ್ಮಾನಿಸಿದೆ. ಕಚ್ಛಾ ಕಲ್ಲಿದ್ದಲನ್ನು ನೀರಿನಿಂದ ಸ್ವಚ್ಛಗೊಳಿಸಿದ ಬಳಿಕ ಸಿಗುವ ಕಲ್ಲಿದ್ದಲು ಹೆಚ್ಚು ಪರಿಸರಸ್ನೇಹಿಯಾಗಿರುತ್ತದೆ. ಅದಕ್ಕೆ ಬೆಲೆ ಹೆಚ್ಚು ಇರುತ್ತದೆ. ನಂತ ಉಳಿಯುವ ಈ ಕಲ್ಲಿದ್ದಲು ತ್ಯಾಜ್ಯವನ್ನು ಬೇರೆ ಕೆಲ ಔದ್ಯಮಿಕ ಉತ್ಪಾದನೆಗಳಿಗೆ ಬಳಸಬಹುದಾಗಿದೆ.

ಬೆಲೆ ಇಳಿಕೆಯಾಗಿರುವುದು

ಪೆನ್ಸಿಲ್ ಶಾರ್ಪ್ನರ್: ಜಿಎಸ್​​ಟಿ ಶೇ. 18ರಿಂದ 12ಕ್ಕೆ ಇಳಿಕೆ

ದ್ರವರೂಪದ ಬೆಲ್ಲ: ಶೇ. 15ರ ಜಿಎಸ್​ಟಿ ಈಗ ಶೂನ್ಯ

ಟ್ಯಾಗ್ ಟ್ರ್ಯಾಕಿಂಗ್ ಸಾಧನ: ಶೂನ್ಯ ತೆರಿಗೆ

ಕೋಲ್ ರಿಜೆಕ್ಟ್: ತೆರಿಗೆ ಇಲ್ಲ

ಇದನ್ನೂ ಓದಿ: Cable Operators vs Broadcasters: ಕೆಲ ಕೇಬಲ್ ಟಿವಿಗಳಲ್ಲಿ ಪ್ರಸಾರ ನಿಲ್ಲಿಸಿವೆ ಝೀ, ಸ್ಟಾರ್, ಸೋನಿ ವಾಹಿನಿಗಳು

ಶನಿವಾರ ನಡೆದದ್ದು 49ನೇ ಜಿಎಸ್​ಟಿ ಕೌನ್ಸಿಲ್ ಸಭೆ. ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆ ವಹಿಸಿದ್ದ ಈ ಸಭೆಯಲ್ಲಿ ವಿವಿಧ ರಾಜ್ಯಗಳ ಹಣಕಾಸು ಸಚಿವರು ಮತ್ತು ಉನ್ನತ ಸ್ತರದ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಮೇಲ್ಮನವಿ ನ್ಯಾಯಮಂಡಳಿಗಳ ಸ್ಥಾಪನೆ ವಿಚಾರದ ಬಗ್ಗೆ ಮಾತನಾಡಿದರು. ಪಾನ್ ಮಸಾಲ ಮತ್ತು ಗುಟ್ಕಾ ವ್ಯವಹಾರಗಳಲ್ಲಿ ಆಗುತ್ತಿರುವ ತೆರಿಗೆ ವಂಚನೆಯನ್ನು ನಿಯಂತ್ರಣಕ್ಕೆ ತರುವ ವ್ಯವಸ್ಥೆ ಬಗ್ಗೆಯೂ ಚರ್ಚಿಸಲಾಯಿತು. ಈ ಬಗ್ಗೆ ಗ್ರೂಪ್ ಆಫ್ ಮಿನಿಸ್ಟರ್​ನ ವರದಿಯನ್ನು ಬಹುತೇಕ ಒಪ್ಪಲಾಗಿದ್ದು, ಕೆಲ ತಿದ್ದುಪಡಿಗಳು ಮಾತ್ರ ಅಗತ್ಯ ಇದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ಜಿಎಸ್​ಟಿ ಸಭೆಯಿಂದ ಬಂದ ಮುಖ್ಯ ಸುದ್ದಿ ಪರಿಹಾರ ಹಣದ್ದು. ಐದು ವರ್ಷಗಳ ಜಿಎಸ್​ಟಿ ಪರಿಹಾರದ ಬಾಕಿ ಹಣವಾದ 16,982 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ತನ್ನ ಜೇಬಿನಿಂದಲೇ 6 ರಾಜ್ಯಗಳಿಗೆ ಹಂಚುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ದೆಹಲಿ, ತಮಿಳುನಾಡು, ತೆಲಂಗಾಣ ಮೊದಲಾದ 6 ರಾಜ್ಯಗಳಿಗೆ ಕೇಂದ್ರ ಸರ್ಕಾರ 16,982 ಕೋಟಿ ರೂ ವಿತರಿಸಲಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us