Paytm: ಪೇಟಿಎಂಗೆ ನಿಲ್ಲದ ತಲೆನೋವು; ಚೀನಾದ ಜಾಡು ಹುಡುಕುತ್ತಿರುವ ಸರ್ಕಾರ

Chinese Investment In Paytm: ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ (ಪಿಪಿಎಸ್​ಎಲ್) ಸಂಸ್ಥೆಯಲ್ಲಿ ವಿದೇಶೀ ಹೂಡಿಕೆಗಳು ಇವೆಯಾ ಎಂಬುದನ್ನು ಸರ್ಕಾರ ಪರಿಶೀಲಿಸುತ್ತಿದೆ. ಪಿಪಿಎಸ್​ಎಲ್​ನ ಮಾತೃ ಸಂಸ್ಥೆ ಒನ್97 ಕಮ್ಯೂನಿಕೇಶನ್ಸ್​ನಲ್ಲಿ ಚೀನಾದ ಆ್ಯಂಟ್ ಗ್ರೂಪ್​ನ ಹೂಡಿಕೆ ಇದೆ. ಪೇಮೆಂಟ್ಸ್ ಸರ್ವಿಸಸ್ ಲಿಯಲ್ಲೂ ಚೀನೀ ಸಂಸ್ಥೆಯ ನೇರ ಹೂಡಿಕೆ ಇದೆಯಾ ಎಂದು ನೋಡಲಾಗುತ್ತಿದೆ. ಗಡಿಭಾಗದ ದೇಶಗಳಿಂದ ಭಾರತೀಯ ಸಂಸ್ಥೆಗಳು ಎಫ್​ಡಿಐ ಪಡೆಯುವ ಮುನ್ನ ಸರ್ಕಾರದ ಅನುಮತಿ ಪಡೆಯಬೇಕು ಎನ್ನುವ ನಿಯಮ ಇದೆ.

Paytm: ಪೇಟಿಎಂಗೆ ನಿಲ್ಲದ ತಲೆನೋವು; ಚೀನಾದ ಜಾಡು ಹುಡುಕುತ್ತಿರುವ ಸರ್ಕಾರ
ಪೇಟಿಎಂ

Updated on: Feb 11, 2024 | 6:26 PM

ನವದೆಹಲಿ, ಫೆಬ್ರುವರಿ 11: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ನಿರ್ಬಂಧಿಸಿದ್ದು ಆಯಿತು, ಈಗ ಪೇಟಿಎಂ ಆ್ಯಪ್ ಅನ್ನು ನಿರ್ವಹಿಸುವ ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ ಸಂಸ್ಥೆಯ (PPSL- Paytm Payments Services Ltd) ಬುಡ ಜಾಲಾಡಲು ಸರ್ಕಾರ ಹೊರಟಂತಿದೆ. ಪಿಪಿಎಸ್​ಎಲ್​ನಲ್ಲಿ ಚೀನಾದ ನೇರ ಹೂಡಿಕೆ ಇದೆಯಾ ಎಂಬುದನ್ನು ಸರ್ಕಾರ ಪರಿಶೀಲಿಸುತ್ತಿದೆ. ಪೇಟಿಎಂ ಪೇಮೆಂಟ್ಸ್ ಸರ್ವಿಸಸ್​ನ ಮಾಲಕ ಸಂಸ್ಥೆಯಾದ ಒನ್97 ಕಮ್ಯೂನಿಕೇಶನ್ಸ್​ನಲ್ಲಿ ಚೀನಾದ ಆ್ಯಂಟ್ ಗ್ರೂಪ್​ನ (Ant Group) ಹೂಡಿಕೆ ಇದೆ. ಈ ಮೂಲಕ ಪರೋಕ್ಷವಾಗಿ ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ ಮೇಲೆ ಆ್ಯಂಟ್ ಗ್ರೂಪ್ ಅಧಿಕಾರ ಇರಬಹುದು. ಆದರೆ, ಪಿಪಿಎಸ್​ಎಲ್​ನಲ್ಲಿ ಚೀನಾದ ನೇರ ಹೂಡಿಕೆ ಇದೆಯಾ ಎನ್ನುವನ್ನು ಗಮನಿಸಲಾಗುತ್ತಿದೆ.

ಹಿಂದೆ 2022ರ ನವೆಂಬರ್​ನಲ್ಲಿ ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ ಸಂಸ್ಥೆ ಪೇಮೆಂಟ್ ಅಗ್ರಿಗೇಟರ್ ಆಗಿ ಕಾರ್ಯವಹಿಸಲು ಪರವಾನಿಗೆಗಾಗಿ ಆರ್​​ಬಿಐ ಬಳಿ ಅರ್ಜಿ ಸಲ್ಲಿಸಿತ್ತು. ಆದರೆ, ಒನ್97 ಕಮ್ಯೂನಿಕೇಶನ್ಸ್​ನಲ್ಲಿ ಚೀನಾದ ಸಂಸ್ಥೆಯ ಎಫ್​ಡಿಐ ಇದ್ದರಿಂದ ನಿಯಮಾನುಸಾರ ಪಿಪಿಎಸ್​ಎಲ್​ನ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಮರುತಿಂಗಳಲ್ಲಿ, ಅಂದರೆ 2022ರ ಡಿಸೆಂಬರ್ 14ರಂದು ಪಿಪಿಎಸ್​ಎಲ್ ನಿಯಮಾನುಸಾರ ಅರ್ಜಿ ಹಾಕಿತು. ಒನ್97 ಕಮ್ಯೂನಿಕೇಶನ್ಸ್​ನಲ್ಲಿ ಮಾತ್ರವೇ ಚೀನಾದ ಆ್ಯಂಟ್ ಗ್ರೂಪ್ ಹೂಡಿಕೆ ಇರುವುದನ್ನು ನಮೂದಿಸಿತ್ತು. ಇದು ವಿದೇಶೀ ನೇರ ಹೂಡಿಕೆಯ ಪ್ರೆಸ್ ನೋಟ್ ನಿಯಮ.

ಇದನ್ನೂ ಓದಿ: ನಿರ್ಬಂಧ ಇರೋದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ; ಆದ್ರೆ ವ್ಯಾಲಟ್​ಗೆ ಯಾಕೆ ತೊಂದರೆ? ತಿಳಿಯಬೇಕಾದ ಅಂಶಗಳು

ಚೀನಾದ ಹೂಡಿಕೆಗೆ ಯಾಕೆ ತಕರಾರು?

ಭಾರತದ ಸಂಸ್ಥೆಗಳಲ್ಲಿ ಚೀನಾದ ಸಂಸ್ಥೆಗಳು ಹೂಡಿಕೆ ಮಾಡಬಹುದು. ಸರ್ಕಾರ ಈ ಹೂಡಿಕೆಗಳಿಗೆ ಆಕ್ಷೇಪಿಸುತ್ತಿಲ್ಲ. ಆದರೆ, ಭಾರತೀಯ ಸಂಸ್ಥೆಯೊಂದು ಚೀನಾದಿಂದ ಹೂಡಿಕೆ ಪಡೆಯಬೇಕಾದರೆ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮ ಇದೆ. ಚೀನಾ ಮಾತ್ರವಲ್ಲ, ಭಾರತದ ಜೊತೆ ಗಡಿ ಹಂಚಿಕೊಂಡಿರುವ ಯಾವುದೇ ದೇಶಗಳಿಗೂ ಇದು ಅನ್ವಯ ಆಗುತ್ತದೆ.

ಈ ಪ್ರೆಸ್ ನೋಟ್ ರೂಲ್ ನಂಬರ್ 3 ಪ್ರಕಾರ, ಭಾರತದ ಜೊತೆ ಗಡಿ ಹಂಚಿಕೊಂಡಿರುವ ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ಭೂತಾನ್, ನೇಪಾಳ, ಮಯನ್ಮಾರ್ ಮತ್ತು ಆಫ್ಘಾನಿಸ್ತಾನ ದೇಶಗಳಿಂದ ಭಾರತಕ್ಕೆ ಎಫ್​ಡಿಐ ಬರಲು ಸರ್ಕಾರದಿಂದ ಅನುಮತಿ ಪಡೆಯಬೇಕು. ಭದ್ರತೆಯ ದೃಷ್ಟಿಯಿಂದ ಈ ನಿಯಮ ಇದೆ. ಗಡಿಭಾಗದ ದೇಶಗಳು ಭಾರತದ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ತಡೆಯಲು ಈ ನಿಯಮ ರೂಪಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us