Paytm: ‘ನಾವೇನು ಮಾಡಲು ಸಾಧ್ಯವಿಲ್ಲ’- ಪೇಟಿಎಂ ಸಿಇಒಗೆ ಖಚಿತ ಉತ್ತರ ಕೊಟ್ಟ ಆರ್​ಬಿಐ ಮತ್ತು ಸರ್ಕಾರ

Finance Ministry and RBI Refuses To Help Paytm: ಪೇಟಿಎಂ ಸಂಸ್ಥೆಯ ಸಿಇಒ ವಿಜಯ್ ಶೇಖರ್ ಶರ್ಮಾ ಫೆ. 6ರಂದು ಸಂಜೆ ಹಣಕಾಸು ಸಚಿವೆ ಮತ್ತು ಆರ್​ಬಿಐ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ನಿರ್ಬಂಧ ವಿಧಿಸಿರುವ ವಿಚಾರವಾಗಿ ಒಂದಷ್ಟು ವಿನಾಯಿತಿ ತೋರಬೇಕೆಂದು ಶರ್ಮಾ ಮನವಿ ಮಾಡಿದ್ದರು. ಪೇಮೆಂಟ್ಸ್ ಬ್ಯಾಂಕ್​ಗೆ ನಿಗದಿ ಮಾಡಿರುವ ಫೆ. 29ರ ಡೆಡ್​ಲೈನ್ ವಿಸ್ತರಿಸಲು ಆರ್​ಬಿಐ ನಿರಾಕರಿಸಿದೆ. ಸರ್ಕಾರ ಕೂಡ ಮಧ್ಯಪ್ರವೇಶಿಸಲು ನಿರಾಕರಿಸಿದೆ.

Paytm: ‘ನಾವೇನು ಮಾಡಲು ಸಾಧ್ಯವಿಲ್ಲ’- ಪೇಟಿಎಂ ಸಿಇಒಗೆ ಖಚಿತ ಉತ್ತರ ಕೊಟ್ಟ ಆರ್​ಬಿಐ ಮತ್ತು ಸರ್ಕಾರ
ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ

Updated on: Feb 07, 2024 | 10:38 AM

ನವದೆಹಲಿ, ಫೆಬ್ರುವರಿ 7: ಆರ್​ಬಿಐ ನಿರ್ಬಂಧಕ್ಕೊಳಗಾಗಿ ಫೆಬ್ರುವರಿ ತಿಂಗಳ ಕೊನೆಯೊಳಗೆ ಪೇಮೆಂಟ್ಸ್ ಬ್ಯಾಂಕ್​ನಲ್ಲಿನ ಖಾತೆಗಳನ್ನು ಬೇರೆಡೆ ವರ್ಗಾಯಿಸಬೇಕಾದ ಒತ್ತಡದಲ್ಲಿರುವ ಪೆಟಿಎಂ ಪೇಮೆಂಟ್ಸ್ ಬ್ಯಾಂಕ್ ಸಂಸ್ಥೆ ಈಗ ಹತಾಶೆಯ ಸ್ಥಿತಿಯಲ್ಲಿದೆ. ಪೇಟಿಎಂನ ಸಿಇಒ ವಿಜಯ್ ಶೇಖರ್ ಶರ್ಮಾ (Paytm CEO Vijay Shekhar Sharma) ಸರ್ಕಾರ ಮತ್ತು ಆರ್​ಬಿಐನಿಂದ ಸಹಾಯ ಯಾಚಿಸಿದ್ದು ವ್ಯರ್ಥವಾಗಿದೆ. ಶರ್ಮಾ ನಿನ್ನೆ ಮಂಗಳವಾರ ಸಂಜೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆರ್​ಬಿಐ ಅಧಿಕಾರಿಗಳನ್ನು ಭೇಟಿ ಮಾಡಿ, ಪೇಮೆಂಟ್ಸ್ ಬ್ಯಾಂಕ್​ನ (PPBL) ಖಾತೆಗಳನ್ನು ಬೇರೆ ಬ್ಯಾಂಕುಗಳಿಗೆ ವರ್ಗಾವಣೆ ಮಾಡಲು ನೆರವಾಗಬೇಕೆಂದು ಕೇಳಿಕೊಂಡರು. ಆದರೆ, ನೆರವು ನೀಡಲು ಸರ್ಕಾರವೂ ನಿರಾಕರಿಸಿದೆ, ಆರ್​ಬಿಐ ಕೂಡ ನಿರಾಸಕ್ತಿ ತೋರಿದೆ. ಈಗ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಅಡಕತ್ತರಿಯಲ್ಲಿ ಸಿಕ್ಕಿದಂತಹ ಸ್ಥಿತಿ ಎದುರಾಗಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಖಾತೆಗಳನ್ನು ವರ್ಗಾಯಿಸುವುದು ಅಷ್ಟು ಕಷ್ಟವಾ?

ಮೂರು ಕೋಟಿಗೂ ಅಧಿಕ ವರ್ತಕರು ಪೇಟಿಎಂ ಪ್ಲಾಟ್​ಫಾರ್ಮ್​ನಲ್ಲಿ ಇದ್ದಾರೆ. ಇದರಲ್ಲಿ ಶೇ. 20ರಷ್ಟು ವರ್ತಕರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಖಾತೆಯನ್ನು ಸೆಟಲ್ಮೆಂಟ್ ಅಕೌಂಟ್ ಆಗಿ ಬಳಸುತ್ತಾರೆ. ಅಂದರೆ ಸುಮಾರು 60 ಲಕ್ಷದಷ್ಟು ಅಕೌಂಟ್​ಗಳು ಪೇಮೆಂಟ್ಸ್ ಬ್ಯಾಂಕ್​ನಲ್ಲಿವೆ.

ಅಷ್ಟೇ ಅಲ್ಲ, ಪೇಟಿಎಂ ಆ್ಯಪ್​ನ ಯುಪಿಐ ಸೇವೆಗೂ ಕೂಡ ಪೇಟಿಎಂ ಪೇಮೆಂಟ್ಸ್ ಬ್ಯಾಂಕನ್ನೇ ಬಳಸಲಾಗುತ್ತಿದೆ. ಅಂದರೆ, ಪೇಮೆಂಟ್ ಸರ್ವಿಸ್ ನೀಡುವ ಪ್ರಾಯೋಜಕ ಬ್ಯಾಂಕ್ ಆಗಿರುವುದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್.

ಇದನ್ನೂ ಓದಿ: 30 ಕೋಟಿ ರೂ ಮಾರ್ಕೆಟ್ ಕ್ಯಾಪ್ ದಾಟಿದ ಮೊದಲ ಭಾರತೀಯ ಕಂಪನಿ ಟಾಟಾ ಗ್ರೂಪ್

ಈ ಎಲ್ಲಾ ಅಕೌಂಟ್​ಗಳನ್ನು ಫೆಬ್ರುವರಿ 29ರೊಳಗೆ ಥರ್ಡ್ ಪಾರ್ಟಿ ಬ್ಯಾಂಕುಗಳಿಗೆ ವರ್ಗಾವಣೆ ಮಾಡಬೇಕು. ಇದು ಅಷ್ಟು ಸುಲಭದ ಕೆಲಸವಲ್ಲ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಲ್ಲಿರುವ 60 ಲಕ್ಷ ಖಾತೆಗಳನ್ನು ಬೇರೆ ಬ್ಯಾಂಕ್​ಗೆ ವರ್ಗಾವಣೆ ಮಾಡಲು ದೊಡ್ಡ ತೊಡಕಿದೆ. ಅಷ್ಟೂ ಖಾತೆಗಳನ್ನು ಹಾಗೇ ವರ್ಗಾವಣೆ ಅಸಾಧ್ಯ. ಪೇಮೆಂಟ್ಸ್ ಬ್ಯಾಂಕ್ ತನ್ನ ಖಾತೆಗಳನ್ನು ವಿತರಿಸುವಾಗ ಸರಿಯಾಗಿ ಕೆವೈಸಿ ನಿಯಮ ಪಾಲಿಸಿರಲಿಲ್ಲ. ಈಗ ಬೇರೆ ಬ್ಯಾಂಕುಗಳು ಈ ಖಾತೆಗಳನ್ನು ಪಡೆಯುವಾಗ ಹೊಸದಾಗಿ ಕೆವೈಸಿ ಪಡೆಯಲೇಬೇಕು. ಫೆಬ್ರುವರಿ 29ರೊಳಗೆ ಈ ಕೆಲಸ ಬಹುತೇಕ ಕಷ್ಟಸಾಧ್ಯ. ಹೀಗಾಗಿ, ಯಾವ ಬ್ಯಾಂಕ್ ಕೂಡ ಪೇಟಿಎಂನೊಂದಿಗೆ ಈ ವಿಚಾರದಲ್ಲಿ ಜೋಡಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ.

ಡೆಡ್​ಲೈನ್ ವಿಸ್ತರಣೆ ಆಗುವುದೊಂದೇ ದಾರಿ…

ಈಗ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಸಮಸ್ಯೆಗೆ ಪರಿಹಾರ ಸಿಗಬೇಕೆಂದರೆ ಡೆಡ್​ಲೈನ್ ವಿಸ್ತರಿಸುವ ಕಾರ್ಯವಾಗಬೇಕು ಅಷ್ಟೇ. ಹೀಗಾಗಿ, ಪೇಟಿಎಂ ಸಿಇಒ ಅವರು ಹಣಕಾಸು ಸಚಿವರನ್ನು ಮತ್ತು ಆರ್​ಬಿಐ ಅಧಿಕಾರಿಗಳನ್ನು ಭೇಟಿ ಮಾಡಿದ್ದು.

ಫೆಬ್ರುವರಿ 29ಕ್ಕೆ ನಿಗದಿ ಮಾಡಲಾಗಿರುವ ಡೆಡ್​ಲೈನ್ ಅನ್ನು ವಿಸ್ತರಿಸಿ. ಪೇಮೆಂಟ್ಸ್ ಬ್ಯಾಂಕ್ ಖಾತೆಗಳನ್ನು ಸ್ವೀಕರಿಸಲು ಯಾವುದಾದರೂ ಬ್ಯಾಂಕುಗಳಿಗೆ ತಿಳಿಸಿ ಎಂಬುದು ವಿಜಯ್ ಶೇಖರ್ ಶರ್ಮಾ ಅವರ ಎರಡು ಪ್ರಮುಖ ಮನವಿಯಾಗಿತ್ತು.

ಇದನ್ನೂ ಓದಿ: ನಷ್ಟ ಹೆಚ್ಚುತ್ತಿದ್ದರೂ ಲೆಕ್ಕಿಸಿದೆ ಕಂಪನಿಗಳ ಮೇಲೆ ಕಂಪನಿ ಖರೀದಿಸುತ್ತಿರುವ ಕ್ರೆಡ್; ಈಗ ಕುವೇರಾ ಸರದಿ

ಹಣಕಾಸು ಸಚಿವಾಲಯ ಅಸಹಾಯಕತೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಂಗಳವಾರ ಸಂಜೆ 4 ಗಂಟೆಯ ಬಳಿಕ ಒಂದತ್ತು ನಿಮಿಷ ಕಾಲ ಶರ್ಮಾ ಮಾತನಾಡಿದರು. ಈ ವಿಚಾರಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ. ಸರ್ಕಾರ ಏನೂ ಮಾಡಲು ಸಾಧ್ಯ ಇಲ್ಲ ಎಂದು ಹಣಕಾಸು ಸಚಿವೆ ಅಸಹಾಯಕತೆ ತೋರಿದರೆನ್ನಲಾಗಿದೆ.

ಆರ್​ಬಿಐ ಹಠಕ್ಕೆ ಕಾರಣವೂ ಇದೆ…

ಆರ್​ಬಿಐ ಕೂಡ ಪೇಟಿಎಂ ಸಿಇಒ ಮನವಿಯನ್ನು ಪುರಸ್ಕರಿಸಿಲ್ಲ. ಡೆಡ್​ಲೈನ್ ವಿಸ್ತರಿಸಲು ಆರ್​ಬಿಐ ನಕಾರ ವ್ಯಕ್ತಪಡಿಸಿದೆ. ಹಿಂದೆಲ್ಲಾ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸ್ವಲ್ಪವೂ ತಿದ್ದಿಕೊಂಡಿರಲಿಲ್ಲ ಎಂಬ ಸಿಟ್ಟು ಮತ್ತು ಅಸಮಾಧಾನ ಆರ್​ಬಿಐನಲ್ಲಿ ಇದೆ ಎಂಬುದು ಮೂಲಗಳು ಹೇಳುತ್ತಿರುವ ವಿಚಾರ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us