ಗ್ರಾಹಕರ ದೂರು ಇತ್ಯರ್ಥಪಡಿಸದಿದ್ದರೆ ಬ್ಯಾಂಕುಗಳಿಗೆ ದಿನಕ್ಕೆ 100 ರೂನಂತೆ ದಂಡ

RBI order to Bank, NBFC, CICs: ಬ್ಯಾಂಕುಗಳು, ಎನ್​ಬಿಎಫ್​ಸಿಗಳು, ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳು ತಮ್ಮ ಗ್ರಾಹಕರ ದೂರುಗಳನ್ನು 30 ದಿನದೊಳಗೆ ಇತ್ಯರ್ಥಪಡಿಸದಿದ್ದರೆ ದಂಡ ಕಟ್ಟಬೇಕಾಗುತ್ತದೆ. ಆರ್​ಬಿಐನ ಹೊಸ ನಿರ್ದೇಶನದ ಪ್ರಕಾರ, ಈ ಸಂಸ್ಥೆಗಳು ಗ್ರಾಹಕರಿಗೆ ಪರಿಹಾರವಾಗಿ ದಿನಕ್ಕೆ 100 ರೂನಂತೆ ದಂಡ ಕಟ್ಟಿಕೊಡಬೇಕು. ಯಾವುದಾದರೂ ಬ್ಯಾಂಕು ತಮ್ಮ ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಸಿಐಸಿ ಬಳಿ ಕೇಳಿದಲ್ಲಿ ಅದರ ಮಾಹಿತಿಯನ್ನು ಗ್ರಾಹಕರಿಗೂ ನೀಡಬೇಕು ಎಂದು ಹೇಳಿದೆ.

ಗ್ರಾಹಕರ ದೂರು ಇತ್ಯರ್ಥಪಡಿಸದಿದ್ದರೆ ಬ್ಯಾಂಕುಗಳಿಗೆ ದಿನಕ್ಕೆ 100 ರೂನಂತೆ ದಂಡ
ಆರ್​ಬಿಐ

Updated on: Jan 09, 2025 | 11:40 AM

ನವದೆಹಲಿ, ಜನವರಿ 9: ಬ್ಯಾಂಕು ಹಾಗೂ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ದೂರುಗಳನ್ನು ಬಹಳ ಕ್ಷಿಪ್ರವಾಗಿ ಇತ್ಯರ್ಥಪಡಿಸಬೇಕು ಎಂದು ಆರ್​ಬಿಐ ಕಟ್ಟಪ್ಪಣೆ ಮಾಡಿದೆ. ಒಂದು ತಿಂಗಳೊಳಗೆ ಗ್ರಾಹಕರ ದೂರುಗಳ ವಿಲೇವಾರಿ ಆಗಬೇಕು. ಒಂದು ವೇಳೆ ಆ ಅವಧಿಯೊಳಗೆ ಸಮಸ್ಯೆ ಇತ್ಯರ್ಥವಾಗದೇ ಹೋದಲ್ಲಿ ದಿನಕ್ಕೆ 100 ರೂನಂತೆ ದಂಡ ವಿಧಿಸಲಾಗುವುದು ಎಂದು ಬ್ಯಾಂಕುಗಳಿಗೆ ಆರ್​ಬಿಐ ಹೊಸ ನಿರ್ದೇಶನ ನೀಡಿದೆ. ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳಿಗೂ ಈ ನಿಯಮ ಅನ್ವಯ ಆಗುತ್ತದೆ. ಈ ದಂಡದ ಹಣವನ್ನು ಗ್ರಾಹಕರಿಗೆ ಪರಿಹಾರವಾಗಿ ನೀಡಲಾಗುತ್ತದೆ. ಗ್ರಾಹಕರ ಸಮಸ್ಯೆಗಳಿಗೆ ಬ್ಯಾಂಕುಗಳು ಬೇಗ ಸ್ಪಂದಿಸಬೇಕು ಎನ್ನುವ ಉದ್ದೇಶದಿಂದ ಆರ್​ಬಿಐ ಈ ಕ್ರಮ ಕೈಗೊಂಡಿದೆ.

ಇದೂ ಅಲ್ಲದೇ ಇನ್ನೂ ಕೆಲ ಮಹತ್ವದ ಕ್ರಮಗಳನ್ನು ಆರ್​ಬಿಐ ತೆಗೆದುಕೊಂಡಿದೆ. ಸಿಬಿಲ್, ಎಕ್ಸ್​ಪೀರಿಯನ್ ಇತ್ಯಾದಿ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳು (ಸಿಐಸಿ) ಯಾವುದೇ ಬ್ಯಾಂಕು ಅಥವಾ ಹಣಕಾಸು ಸಂಸ್ಥೆ ತಮ್ಮ ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಪಡೆದುಕೊಂಡಲ್ಲಿ, ಆ ಬಗ್ಗೆ ಗ್ರಾಹಕರಿಗೆ ಇಮೇಲ್ ಅಥವಾ ಎಸ್ಸೆಮ್ಮೆಸ್ ಮುಖಾಂತರ ಮಾಹಿತಿ ತಿಳಿಸಬೇಕು ಎಂದು ಆರ್​ಬಿಐ ಅಪ್ಪಣೆ ಮಾಡಿದೆ.

ಇದನ್ನೂ ಓದಿ: Sugar MSP: ದುಬಾರಿಯಾಗಲಿದೆ ಸಕ್ಕರೆ, ಕನಿಷ್ಠ ಮಾರಾಟ ದರ ಹೆಚ್ಚಿಸುವ ಬಗ್ಗೆ ಸರ್ಕಾರ ಶೀಘ್ರ ನಿರ್ಧಾರ

ಬ್ಯಾಂಕುಗಳು ತಮ್ಮ ಗ್ರಾಹಕರು ಒಂದು ವೇಳೆ ಸಾಲ ಮರುಪಾವತಿಸದೇ ಡೀಫಾಲ್ಟ್ ಆಗುತ್ತಿದ್ದರೆ ಆ ಮಾಹಿತಿಯನ್ನು ಗ್ರಾಹಕರಿಗೆ ತಿಳಿಸಬೇಕು. ಇದನ್ನು 21 ದಿನದೊಳಗೆ ತಿಳಿಸದೇ ಹೋದಲ್ಲಿ ದಿನಕ್ಕೆ 100 ರೂನಂತೆ ಗ್ರಾಹಕರಿಗೆ ಪರಿಹಾರ ಒದಗಿಸಬೇಕಾಗುತ್ತದೆ.

ಸಿಐಸಿ ಅಥವಾ ಗ್ರಾಹಕರು ದೂರು ನೀಡಿದ 21 ದಿನದೊಳಗೆ ಹಣಕಾಸು ಸಂಸ್ಥೆಗಳು ಸಾಲದ ಇತ್ತೀಚಿನ ಮಾಹಿತಿಯನ್ನು ಸಿಐಸಿಗೆ ನೀಡಬೇಕು ಎನ್ನುವ ನಿಯಮ ಇದೆ. ಅದನ್ನು ಪಾಲಿಸದಿದ್ದರೆ ದಂಡ ವಿಧಿಸುವ ಅವಕಾಶ ಇರುತ್ತದೆ.

ಇದನ್ನೂ ಓದಿ: ವಸತಿ ಯೋಜನೆಯಲ್ಲಿ 55% ಬೆಲೆ ಏರಿಕೆ, ಮುಂಬರುವ ದುಬಾರಿ ಮನೆಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ ಸಿಗಲಿದೆ; ವರದಿ

ಭಾರತದಲ್ಲಿ ಸದ್ಯ ನಾಲ್ಕು ಸಿಐಸಿಗಳು ಕಾರ್ಯನಿರ್ವಹಿಸುತ್ತಿವೆ. ಸಿಬಿಲ್, ಸಿಆರ್​ಐಎಫ್, ಈಕ್ವಿಫ್ಯಾಕ್ಸ್ ಮತ್ತು ಎಕ್ಸ್​ಪೀರಿಯನ್ ಸಂಸ್ಥೆಗಳಿವೆ. ಈ ಸಿಐಸಿಗಳು ಮತ್ತು ಬ್ಯಾಂಕುಗಳು ತಮ್ಮ ಗ್ರಾಹಕರು ನೀಡುವ ದೂರನ್ನು 30 ದಿನದೊಳಗೆ ಇತ್ಯರ್ಥಪಡಿಸಬೇಕು. ದೂರಿನ ಸಂಬಂಧ ಏನೇನು ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಗ್ರಾಹಕರಿಗೆ ಅಪ್​ಡೇಟ್ ಮಾಡಬೇಕು. ಒಂದು ವೇಳೆ ದೂರನ್ನು ತಿರಸ್ಕರಿಸಿದಲ್ಲಿ ಕಾರಣವನ್ನು ತಿಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us