ಶ್ರೀಮಂತ ದೇಶಗಳಲ್ಲಿ ಹೆಲ್ತ್​ಕೇರ್ ಸಿಸ್ಟಂ ಹೇಗಿದೆ ಅಂತ ನೋಡಿದ್ದೇನೆ: ಭಾರತದ ವೈದ್ಯಕೀಯ ವ್ಯವಸ್ಥೆ ಪ್ರಶಂಸಿಸಿದ ರಾಧಿಕಾ ಗುಪ್ತಾ

Radhika Gupta compares medical emergency system of India and developed countries: ಕಳೆದ ವಾರ ಕೆಳಗೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಎಡೆಲ್​ವೀಸ್ ಮ್ಯುಚುವಲ್ ಫಂಡ್ ಸಿಇಒ ರಾಧಿಕಾ ಗುಪ್ತಾ ನಿನ್ನೆ (ಅ. 12) ಥ್ಯಾಂಕ್ಸ್ ಪೋಸ್ಟ್ ಹಾಕಿದ್ದಾರೆ. ಕೆಳಗೆ ಬಿದ್ದು ಎರಡೂವರೆಗೆ ಗಂಟೆಯೊಳಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿದ್ದೆ. ಇಷ್ಟು ಕ್ಷಿಪ್ರ ಸೇವೆಯನ್ನು ಮುಂದುವರಿದ ದೇಶಗಳಲ್ಲೂ ನಿರೀಕ್ಷಿಸಲಾಗದು ಎಂದಿದ್ದಾರೆ ರಾಧಿಕಾ ಗುಪ್ತಾ.

ಶ್ರೀಮಂತ ದೇಶಗಳಲ್ಲಿ ಹೆಲ್ತ್​ಕೇರ್ ಸಿಸ್ಟಂ ಹೇಗಿದೆ ಅಂತ ನೋಡಿದ್ದೇನೆ: ಭಾರತದ ವೈದ್ಯಕೀಯ ವ್ಯವಸ್ಥೆ ಪ್ರಶಂಸಿಸಿದ ರಾಧಿಕಾ ಗುಪ್ತಾ
ರಾಧಿಕಾ ಗುಪ್ತಾ

Updated on: Oct 13, 2024 | 12:33 PM

ನವದೆಹಲಿ, ಅಕ್ಟೋಬರ್ 13: ಎಡೆಲ್​ವೀಸ್ ಮ್ಯುಚುವಲ್ ಫಂಡ್ ಸಿಇಒ ರಾಧಿಕಾ ಗುಪ್ತಾ ಭಾರತದಲ್ಲಿನ ವೈದ್ಯಕೀಯ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ. ಕೆಲ ಮುಂದುವರಿದ ದೇಶಗಳಲ್ಲಿನ ಹೆಲ್ತ್​ಕೇರ್ ಸಿಸ್ಟಂಗೆ ಹೋಲಿಸುತ್ತಾ, ಭಾರತಕ್ಕೆ ಧನ್ಯವಾದ ಹೇಳಿದ್ದಾರೆ ರಾಧಿಕಾ ಗುಪ್ತಾ. ಕಳೆದ ವಾರ (ಅ. 6) ಅವರು ಕೆಳಗೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡು ಮುಂಬೈನ ಜಸ್​ಲೋಕ್ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವೇ ಗಂಟೆಯಲ್ಲಿ ಅವರಿಗೆ ಚಿಕಿತ್ಸೆ ನೀಡಿ ಡಿಸ್​ಚಾರ್ಜ್ ಮಾಡಲಾಯಿತು. ಈ ಪರಿ ಉತ್ಕೃಷ್ಟ ಮತ್ತು ಕ್ಷಿಪ್ರ ಸೇವೆಯನ್ನು ರಾಧಿಕಾ ಹೊಗಳುತ್ತಾ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಇದು ಪ್ರಶಂಸನಾ ಪತ್ರ. ಕಳೆದ ಭಾನುವಾರ ನಾನು ಕೆಳಗೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದೆ. ತುರ್ತು ವೈದ್ಯಕೀಯ ಶುಶ್ರೂಷೆ ಮತ್ತು ಚಿಕಿತ್ಸೆ ಬೇಕಾಗಿತ್ತು. ಆವತ್ತು ಭಾನುವಾರ ಬೆಳಗಿನ ಜಾವವಾದರೂ ಆಂಬುಲೆನ್ಸ್ ಸಿಕ್ಕಿತು. ಜಸ್​ಲೋಕ್ ಆಸ್ಪತ್ರೆಯಲ್ಲಿ ಬಹಳ ಉತ್ತಮ ಚಿಕಿತ್ಸೆ ದೊರೆಯಿತು. ಕೆಲವೇ ಗಂಟೆಯಲ್ಲಿ ಎಲ್ಲಾ ಪರೀಕ್ಷೆಗಳನ್ನು ನಡೆಸಿ, ಸ್ಟಿಚ್​ಗಳನ್ನು ಹಾಕಲಾಯಿತು. ನಾನು ಕೆಳಗೆ ಬಿದ್ದ ಎರಡೂವರೆ ಗಂಟೆಯಲ್ಲಿ ಮನೆಗೆ ವಾಪಸ್ ಬಂದಿದ್ದೆ,’ ಎಂದು ಎಡೆಲ್​ವೀಸ್ ಮ್ಯೂಚುವಲ್ ಫಂಡ್​ನ ಎಂಡಿಯೂ ಆಗಿರುವ ಅವರು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಡ್ರೈವರ್ ಇರುವ ಕಾರಿಗಿಂತಲೂ ಇದು 20 ಪಟ್ಟು ಸೇಫ್? ಸೈಬರ್​ಕ್ಯಾಬ್ ಅನಾವರಣಗೊಳಿಸಿದ ಇಲಾನ್ ಮಸ್ಕ್; ಬೆಲೆ 30,000 ಮಾತ್ರ

ಮುಂದುವರಿದ ದೇಶಗಳಲ್ಲಿ ತುರ್ತು ಸ್ಥಿತಿ ಇದ್ದರೂ ಸರದಿ ಕಾಯಬೇಕು…

ರಾಧಿಕಾ ಗುಪ್ತ ತಮ್ಮ ಇದೇ ಪೋಸ್ಟ್​ನಲ್ಲಿ ಶ್ರೀಮಂತ ದೇಶಗಳಲ್ಲಿನ ವೈದ್ಯಕೀಯ ವ್ಯವಸ್ಥೆಯನ್ನು ಹೋಲಿಕೆ ಮಾಡಿದ್ದಾರೆ.

‘ಬಹಳ ಮುಂದುವರಿದ ದೇಶಗಳಲ್ಲಿ ನಾನು ವಾಸಿಸಿದ್ದೇನೆ. ಅಲ್ಲಿನ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ವ್ಯವಸ್ಥೆ ಹೇಗಿರುತ್ತೆ ಎಂದು ಕಂಡಿದ್ದೇನೆ. ಇಆರ್​ಗಳಲ್ಲಿ (ಎಮರ್ಜೆನ್ಸಿ ರೂಮ್) ಗಂಟೆಗಟ್ಟಲೆ ಕಾಯುವುದು ಬಹಳ ಸಾಮಾನ್ಯದ ಸಂಗತಿ. ನಿಮ್ಮ ತಲೆಯಿಂದ ರಕ್ತ ಸೋರುತ್ತಿದ್ದರೂ ವೈದ್ಯಕೀಯ ಸೇವೆ ತತ್​ಕ್ಷಣಕ್ಕೆ ಸಿಗುವುದಿಲ್ಲ,’ ಎಂದು ರಾಧಿಕಾ ಗುಪ್ತಾ ತಿಳಿಸಿದ್ದಾರೆ.

ಭಾರತ ಪರ್ಫೆಕ್ಟ್ ದೇಶ ಅಲ್ಲವಾದರೂ ನಾವು ಹಲವು ವಿಚಾರಗಳಲ್ಲಿ ಸರಿಯಾದ ವ್ಯವಸ್ಥೆ ಹೊಂದಿದ್ದೇವೆ. ಇದಕ್ಕಾಗಿ ನಾನು ಬಹಳ ಕೃತಜ್ಞಳಾಗಿದ್ದೇನೆ ಎಂದೂ ಅವರು ಹೊಗಳಿದ್ದಾರೆ.

ಇದನ್ನೂ ಓದಿ: ಕಳೆದ ಆರು ತಿಂಗಳಲ್ಲಿ ಇನ್ಕಮ್ ಟ್ಯಾಕ್ಸ್ ಸೇರಿದಂತೆ ಆದಾಯ ತೆರಿಗೆ ಸಂಗ್ರಹ 13 ಲಕ್ಷ ರೂ


ರಾಧಿಕಾ ಗುಪ್ತಾ ಅವರ ಈ ಪೋಸ್ಟ್​ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬೈನ ಜಸ್​ಲೋಕ್​ನಂತಹ ಆಸ್ಪತ್ರೆ ಮತ್ತು ಪೆದ್ದರ್ ರಸ್ತೆಯಂತಹ ಸ್ಥಳ ಹೊಂದಿರುವ ಯಾವುದೇ ದೇಶವಾದರೂ ಈ ರೀತಿಯ ವೈದ್ಯಕೀಯ ಸೇವೆ ಸಿಕ್ಕೇ ಸಿಗುತ್ತದೆ. ಆದರೆ, ಭಾರತದ ಎಲ್ಲೆಡೆ ಜಸ್​ಲೋಕ್​ನಂತಹ ಆಸ್ಪತ್ರೆ ಇರುವುದಿಲ್ಲ, ಚಿಕಿತ್ಸಾ ವೆಚ್ಚ ಭರಿಸುವಷ್ಟು ಹಣವೂ ಇರುವುದಿಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us