Wipro: ಮಾಜಿ ಸಿಎಫ್​ಒ ಜತಿನ್ ದಲಾಲ್ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ ವಿಪ್ರೋ; ಬೆಂಗಳೂರಿನ ಸಿವಿಲ್ ಕೋರ್ಟ್​ನಲ್ಲಿ ವಿಚಾರಣೆ

Wipro Sues Its Ex CFO Jatin Dalal: ವಿಪ್ರೋ ಸಂಸ್ಥೆ ತನ್ನ ಮಾಜಿ ಸಿಎಫ್​ಒ ಜತಿನ್ ದಲಾಲ್ ವಿರುದ್ಧ ಬೆಂಗಳೂರಿನ ಸಿವಿಲ್ ಕೋರ್ಟ್​ನಲ್ಲಿ ಮೊಕದ್ದಮೆ ದಾಖಲಿಸಿದೆ. ಮಧ್ಯಸ್ಥಿಕೆಗಾರರಿಗೆ ಪ್ರಕರಣವನ್ನು ವರ್ಗಾಯಿಸುವಂತೆ ಕೋರ್ಟ್​ಗೆ ಜತಿನ್ ದಲಾಲ್ ಮನವಿ ಮಾಡಿದ್ದಾರೆ. ಜನವರಿ 3ರಂದು ಮುಂದಿನ ವಿಚಾರಣೆ ಇದೆ. ವಿಪ್ರೋ ಸಂಸ್ಥೆ ಈ ಹಿಂದೆ ತನ್ನ ಮಾಜಿ ಹಿರಿಯ ವೈಸ್ ಪ್ರೆಸಿಡೆಂಟ್ ಮೊಹಮ್ಮದ್ ಹಕ್ ವಿರುದ್ಧವೂ ಕೋರ್ಟ್​ನಲ್ಲಿ ದೂರು ದಾಖಲಿಸಿತ್ತು.

Wipro: ಮಾಜಿ ಸಿಎಫ್​ಒ ಜತಿನ್ ದಲಾಲ್ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ ವಿಪ್ರೋ; ಬೆಂಗಳೂರಿನ ಸಿವಿಲ್ ಕೋರ್ಟ್​ನಲ್ಲಿ ವಿಚಾರಣೆ
ಜತಿನ್ ದಲಾಲ್

Updated on: Dec 27, 2023 | 10:37 AM

ಬೆಂಗಳೂರು, ಡಿಸೆಂಬರ್ 27: ಕಂಪನಿ ತೊರೆದಿರುವ ತನ್ನ ಮಾಜಿ ಚೀಫ್ ಫೈನಾನ್ಸ್ ಆಫೀಸರ್ ಜತಿನ್ ದಲಾಲ್ ವಿರುದ್ಧ ವಿಪ್ರೋ ಸಂಸ್ಥೆ ಕಾನೂನು ಮೊಕದ್ದಮೆ (legal suit) ಹೂಡಿದೆ. ಆದರೆ, ಯಾವ ವಿಚಾರಕ್ಕೆ ವಿಪ್ರೋ ಕೋರ್ಟ್ ಮೆಟ್ಟಿಲೇರಿದೆ ಎಂಬುದು ಮಾಧ್ಯಮಗಳಿಗೆ ಇನ್ನೂ ಗೊತ್ತಾಗಿಲ್ಲ. ಬೆಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ. ಎರಡೂ ಕಡೆಯ ಆರಂಭಿಕ ವಾದ ಮಂಡನೆ ಕೂಡ ಆಗಿದೆ. ಜನವರಿ 3ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ವಿಪ್ರೋದ ಸಿಎಫ್​ಒ ಆಗಿದ್ದ ಜತಿನ್ ದಲಾಲ್ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಅದಾಗಿ ಒಂದು ವಾರದಲ್ಲಿ ವಿಪ್ರೋ ಪ್ರತಿಸ್ಪರ್ಧಿ ಸಂಸ್ಥೆ ಕಾಗ್ನೈಜೆಂಟ್ ಟೆಕ್ನಾಲಜೀಸ್ ತನ್ನ ನೂತನ ಸಿಎಫ್​ಒ ಆಗಿ ಜತಿನ್ ಅವರ ಹೆಸರನ್ನು ಘೋಷಿಸಿತು. ಈ ಬೆಳವಣಿಗೆ ಬೆನ್ನಲ್ಲೇ ವಿಪ್ರೋ ಸಂಸ್ಥೆ ಕೋರ್ಟ್ ಮೆಟ್ಟಿಲೇರುವುದು ಕುತೂಹಲ. ಜತಿನ್ ಲಾಲ್ ಉದ್ಯೋಗಿ ಗುತ್ತಿಗೆ ನಿಯಮ ಮೀರಿದ್ದಕ್ಕಾ, ಅಥವಾ ಇನ್ಯಾವುದಕ್ಕಾ ಎಂಬುದು ತಿಳಿದುಬಂದಿಲ್ಲ.

ಕೋರ್ಟ್ ಬದಲು ಮಧ್ಯಸ್ಥಿಕೆ ಮೂಲಕ ವ್ಯಾಜ್ಯ ಬಗೆಹರಿಸಲು ಜತಿನ್ ದಲಾಲ್ ಯತ್ನ

ಇದೇ ವೇಳೆ, ವಿಪ್ರೋದಿಂದ ಕಾನೂನು ಮೊಕದ್ದಮೆ ಎದುರಿಸುತ್ತಿರುವ ಜತಿನ್ ದಲಾಲ್, ಈ ಪ್ರಕರಣವನ್ನು ಮಧ್ಯಸ್ಥಿಕೆಗಾರರ (Arbitration) ಮೂಲಕ ಬಗೆಹರಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಸಿವಿಲ್ ಕೋರ್ಟ್​ನಲ್ಲಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಗಣನೀಯವಾಗಿ ತಗ್ಗಿದ ದೇಶದ ಕರೆಂಟ್ ಅಕೌಂಟ್ ಡೆಫಿಸಿಟ್; ಜಿಡಿಪಿಯ 1 ಪ್ರತಿಶತ ಮಾತ್ರವೇ ಸಿಎಡಿ

ಮುಂದಿನ ವಿಚಾರಣೆ ನಡೆಯುವ ಜನವರಿ 3ರಂದು ಸಿವಿಲ್ ಕೋರ್ಟ್ ಜತಿನ್ ದಲಾಲ್ ಮನವಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ತಜ್ಞರ ಪ್ರಕಾರ ವಿಪ್ರೋದಲ್ಲಿ ಜತಿನ್ ದಲಾಲ್ ಅವರ ಉದ್ಯೋಗ ಗುತ್ತಿಗೆಯ ನಿಯಮದಲ್ಲಿ ನಮೂದಾಗಿದ್ದರೆ ಮಧ್ಯಸ್ಥಿಕೆಗೆ ಅವಕಾಶ ಕೊಡಬಹುದು. ಇಲ್ಲದಿದ್ದರೆ ಕೋರ್ಟ್​ನಲ್ಲೇ ಪ್ರಕರಣ ಮುಂದುವರಿಯಬಹುದು.

ಜತಿನ್ ದಲಾಲ್ 2002ರಲ್ಲಿ ವಿಪ್ರೋ ಸೇರಿದ್ದರು. 2015ರಲ್ಲಿ ಸಿಎಫ್​ಒ ಆಗಿ ಬಡ್ತಿ ಪಡೆದಿದ್ದರು. ನವೆಂಬರ್ 30ಕ್ಕೆ ಅವರ ಕೊನೆಯ ಕಾರ್ಯದಿನವಾಗಿತ್ತು.

ಸೀನಿಯರ್ ವಿಪಿ ವಿರುದ್ಧ ಮೊಕದ್ದಮೆ ಹಾಕಿತ್ತು ವಿಪ್ರೋ

ತನ್ನ ಎಕ್ಸಿಕ್ಯೂಟಿವ್​ಗಳ ವಿರುದ್ದ ವಿಪ್ರೋ ಕಾನೂನು ಮೊಕದ್ದಮೆ ಹಾಕಿದ್ದು ಇದೇ ಮೊದಲಲ್ಲ. ಮಾಜಿ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿದ್ದ ಮೊಹಮ್ಮದ್ ಹಕ್ ಅವರು ರಾಜೀನಅಮೆ ನೀಡಿ ಕಾಗ್ನೈಜೆಂಟ್ ಸೇರಿದ್ದಾಗ, ಅವರ ವಿರುದ್ಧ ವಿಪ್ರೋ ದೂರು ಸಲ್ಲಿಸಿತ್ತು. ನಾನ್ ಕಾಂಪೀಟ್ ಕೋವಿನೆಂಟ್ಸ್ ನಿಯಮವನ್ನು ಹಕ್ ಉಲ್ಲಂಘಿಸಿದ್ದಾರೆ ಎಂಬುದು ವಿಪ್ರೋದ ಆಕ್ಷೇಪ. ರಹಸ್ಯವಾಗಿ ಇರಬೇಕಾದ ಕಡತಗಳನ್ನು ಮೊಹಮ್ಮದ್ ಹಕ್ ಅವರು ತನ್ನ ಹೊಸ ಸಂಸ್ಥೆಗೆ ಕದ್ದು ಕೊಟ್ಟಿದ್ದಾರೆ ಎಂಬುದು ಆರೋಪ.

ಇದನ್ನೂ ಓದಿ: ವಿಪ್ರೋ ಹೊಸ ಸಿಎಫ್ಒ ಅಪರ್ಣಾ ಅಯ್ಯರ್ 2002ರ ಸಿಎ ಬ್ಯಾಚ್​ನ ಗೋಲ್ಡ್ ಮೆಡಲಿಸ್ಟ್; ಈಕೆಯ ವೃತ್ತಿ ಪ್ರಯಾಣ ಹೇಗಿದೆ? ಇಲ್ಲಿದೆ ವಿವರ

ಇಲ್ಲಿ ನಾನ್ ಕಾಂಪೀಟ್ ಕೋವಿನೆಂಟ್ (Non-compete Covenant) ಎಂಬುದು ಎಕ್ಸಿಕ್ಯೂಟಿವ್​ಗಳ ನೇಮಕಾತಿ ವೇಳೆ ಗುತ್ತಿಗೆಯಲ್ಲಿ ಇರಬಹುದಾದ ಒಂದು ನಿಯಮ. ಅದರ ಪ್ರಕಾರ, ರಾಜೀನಾಮೆ ನೀಡಿದ ಬಳಿಕ ಸಂಸ್ಥೆಗೆ ನೇರವಾಗಿ ಸ್ಪರ್ಧಿಸುವಂತಿಲ್ಲ.

ಕುತೂಹಲ ಎಂದರೆ ಜತಿನ್ ದಲಾಲ್ ಅವರಂತೆ ಮೊಹಮ್ಮದ್ ಹಕ್ ಅವರೂ ಕೂಡ ವಿಪ್ರೋ ತೊರೆದ ಬಳಿಕ ಕಾಗ್ನೈಜೆಂಟ್ ಟೆಕ್ಲಾಲಜೀಸ್​ಗೆ ಸೇರಿದ್ದರು. ಈ ಇಬ್ಬರೂ ಕೂಡ ವಿಪ್ರೋದಲ್ಲಿದ್ದ ಹುದ್ದೆಯನ್ನೇ ಕಾಗ್ನೈಜೆಂಟ್​ನಲ್ಲಿ ಪಡೆದಿದ್ದಾರೆ. ಕಾಗ್ನೈಜೆಂಟ್ ಜನವರಿ ತಿಂಗಳಲ್ಲಿ ಇನ್ಫೋಸಿಸ್​ನ ಮಾಜಿ ಪ್ರೆಸಿಡೆಂಟ್ ರವಿ ಕುಮಾರ್ ಅವರನ್ನು ಸಿಇಒ ಆಗಿ ನೇಮಕ ಮಾಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us