854 ಕೋಟಿ ರೂ. ವಂಚನೆ ಪ್ರಕರಣ ಭೇದಿಸಿದ ಸಿಸಿಬಿ: ಆರೋಪಿಗಳು ಜನರಿಗೆ ವಂಚಿಸಿದ್ದು ಹೇಗೆ? ಇಲ್ಲಿದೆ ಸೈಬರ್​ ಕಹಾನಿ

ಆರು ಜನ ಆರೋಪಿಗಳು ವಿದೇಶಿ ಹ್ಯಾಂಡ್ಲರ್​ಗಳ ಸೂಚನೆಯಂತೆ ಕೆಲಸ ಮಾಡುತ್ತಿದ್ದರು. ವಂಚಿಸಿದ ಹಣದ ತಕ್ಕ ಹಾಗೆ ಆರೋಪಿಗಳಿಗೆ ವಿದೇಶಿ ಹ್ಯಾಂಡ್ಲರ್​ಗಳಿಂದ ಕಮೀಷನ್​ ಸಿಗುತ್ತಿತ್ತು. ಆರೋಪಿಗಳು ಸಾವಿರಕ್ಕೆ 300 ರೂ.ನಂತೆ ಕಮೀಷನ್ ತಗೆದುಕೊಳ್ಳುತ್ತಿದ್ದರು.

854 ಕೋಟಿ ರೂ. ವಂಚನೆ ಪ್ರಕರಣ ಭೇದಿಸಿದ ಸಿಸಿಬಿ: ಆರೋಪಿಗಳು ಜನರಿಗೆ ವಂಚಿಸಿದ್ದು ಹೇಗೆ? ಇಲ್ಲಿದೆ ಸೈಬರ್​ ಕಹಾನಿ
ಸಿಸಿಬಿ
Edited By: ವಿವೇಕ ಬಿರಾದಾರ

Updated on: Oct 02, 2023 | 9:16 AM

ಬೆಂಗಳೂರು ಅ.02: ಹೂಡಿಕೆ ಹೆಸರಿನಲ್ಲಿ ಜನರಿಗೆ 854 ಕೋಟಿ ರೂ. ವಂಚಿಸಿದ್ದ (Fraud) ಆರೋಪಿಗಳನ್ನು ಸಿಸಿಬಿ (CCB) ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ 5,103 ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿವೆ. ಪ್ರಕರಣದ ತನಿಖೆ ವೇಳೆ ಸಿಸಿಬಿ ಪೊಲೀಸರಿಗೆ ಹಲವು ಸ್ಪೋಟಕ ವಿಚಾರಗಳು ತಿಳಿದಿವೆ. ಪ್ರಮುಖ ಆರೋಪಿಗಳು ವಿದೇಶದಲ್ಲಿ ನೆಲೆಸಿದ್ದು ಬೆಂಗಳೂರಿನಿಂದ ಖಾತೆಗಳನ್ನಿ ನಿವರ್ಹಿಸುತ್ತಿದ್ದರು. ಬಂಧಿತ ಆರೋಪಿಗಳಾದ ಮನೋಜ್, ಫಣೀಂದ್ರ, ವಸಂತ್, ಶ್ರೀನಿವಾಸ, ಚಕ್ರಾದರ್, ಸೋಮಶೇಖರ್ ವಿದೇಶದಲ್ಲಿರುವ ತಮ್ಮ ಸಹಚರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.

ಈ ಆರು ಜನ ಆರೋಪಿಗಳು ವಿದೇಶಿ ಹ್ಯಾಂಡ್ಲರ್​ಗಳ ಸೂಚನೆಯಂತೆ ಕೆಲಸ ಮಾಡುತ್ತಿದ್ದರು. ವಂಚಿಸಿದ ಹಣದ ತಕ್ಕ ಹಾಗೆ ಆರೋಪಿಗಳಿಗೆ ವಿದೇಶಿ ಹ್ಯಾಂಡ್ಲರ್​ಗಳಿಂದ ಕಮೀಷನ್​ ಸಿಗುತ್ತಿತ್ತು. ಆರೋಪಿಗಳು ಸಾವಿರಕ್ಕೆ 300 ರೂ.ನಂತೆ ಕಮೀಷನ್ ತಗೆದುಕೊಳ್ಳುತ್ತಿದ್ದರು. ತಮ್ಮ ವಂಚನೆ ಕೆಡ್ಡಾಕ್ಕೆ ಕೆಡವಿಕೊಳ್ಳುವಂತೆ ಆರೋಪಿಗಳಿಗೆ ವಿದೇಶಿ ಹ್ಯಾಂಡ್ಲರ್ಸ್ ಒಂದು ಪಟ್ಟಿ ​ನೀಡುತ್ತಿದ್ದರು. ಪಟ್ಟಿಯಲ್ಲಿ ನೀಡಲಾದ ಹೆಸರುಗಳನ್ನು ಇಟ್ಟುಕೊಂಡು ಅವರ ವಾಟ್ಸಪ್ ಮತ್ತು ಟೆಲಿಗ್ರಾಂಗೆ ಜಾಬ್ ಆಫರ್ ಮೆಸೇಜ್ ಕಳುಹಿಸುತ್ತಿದ್ದರು.

ಜನರು ಟೆಲಿಗ್ರಾಮ್​​ ಗುಂಪಿಗೆ ಸೇರಿದ ನಂತರ, ಆರೋಪಿಗಳು ಕ್ರಿಪ್ಟೋಕರೆನ್ಸಿ ಸಂಬಂಧಿತ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತಿದ್ದರು. ಬಳಿಕ ಒಂದು ಸಾವಿರದಿಂದ ಹತ್ತು ಸಾವಿರ ರೂ.ವರೆಗೆ ಹೂಡಿಕೆ ಮಾಡುವಂತೆ ಹೇಳುತ್ತಿದ್ದರು. ಹೂಡಿಕೆ ಮಾಡಿದರೇ ದಿನಕ್ಕೆ ಸಾವಿರದಿಂದ ಐದು ಸಾವಿರ ಹಣ ಬರುತ್ತೆ ಎಂದು ಆಸೆ ತೋರಿಸುತ್ತಿದ್ದರು.

ಇದನ್ನೂ ಓದಿ: ಸಾಹಿತಿಗಳಿಗೆ ಬೆದರಿಕೆ ಪತ್ರ ಪ್ರಕರಣ: ಆರೋಪಿ ಸಿಸಿಬಿ ಬಲೆಗೆ ಬಿದ್ದಿದ್ದು ಹೇಗೆ? ಇಲ್ಲಿದೆ ಮಾಹಿತಿ

ಬಳಿಕ ಆರೋಪಿಗಳು ಸಂತ್ರಸ್ತರ ನಂಬಿಕೆ ಗಳಿಸಿ ಲಕ್ಷ ಮತ್ತು ಕೋಟಿಗಟ್ಟಲೆ ಹೂಡಿಕೆ ಮಾಡುವಂತೆ ಹೇಳುತ್ತಿದ್ದರು. ಇವರ ಮಾತನ್ನು ನಂಬಿ ಜನರು ಹೂಡಿಕೆ ಮಾಡಿದ ಹಣ ಬೆಂಗಳೂರಿನ ವಿವಿಧ ಬ್ಯಾಂಕ್​ಗಳಲ್ಲಿ ಜಮಾ ಆಗುತ್ತಿತ್ತು. ತರವಾಯು ಆರೋಪಿಗಳು ವಿದೇಶಿ ಬ್ಯಾಂಕ್​ ಖಾತೆಗಳಿಗೆ ವರ್ಗಾಯಿಸುತ್ತಿದ್ದರು. ವಿದೇಶಿ ಗುಂಪು ಈ ಹಣವನ್ನು ವಿವಿಧ ವಿದೇಶಿ ಕಂಪನಿಗಳಿಗೆ ಹೂಡಿಕೆ ಮಾಡುತ್ತದೆ. ನಂತರ ಆರೋಪಿಗಳು ಜನರಿಗೆ ಹಣ ನೀಡದೆ ಸಂಪರ್ಕ ಕಡಿತಗೊಳಿಸುತ್ತಿದ್ದರು. ಹೀಗೆ ಆರೋಪಿಗಳು ವಂಚಿಸುತ್ತಿದ್ದರು.

ಈ ತರಹದ ಸೈಬರ್ ವಂಚಕರು ಕರ್ನಾಟಕವಲ್ಲದೇ ದೇಶದ ಪ್ರತಿರಾಜ್ಯದಲ್ಲೂ ಇದ್ದಾರೆ. ಇಲ್ಲಿ ಕೇವಲ 854 ಕೋಟಿ ವಂಚನೆ ಅಷ್ಟೇ ಅಲ್ಲ ಬದಲಾಗಿ ಸಾವಿರಾರು ಕೋಟಿ ವಂಚನೆ ಆಗಿದೆ. ಆದರೆ ಎಲ್ಲಾ ಹಣವೂ ಕ್ರಿಪ್ಟೋ ಮೂಲಕ ವಿದೇಶಕ್ಕೆ ವರ್ಗಾವಣೆ ಆಗಿದೆ. ಒಟ್ಟು 84 ವಿದೇಶಿ ಅಕೌಂಟ್​ಗಳಿಗೆ ಈಗಾಗಲೇ ಭಾರತದಿಂದ ಹಣ ವರ್ಗಾವಣೆಯಾಗಿದೆ. ಹವಾಲ ರೂಪದಲ್ಲಿ ವಂಚಿಸಿರೋ ಹಣ ವಿದೇಶಕ್ಕೆ ಸೇರುತ್ತಿದೆ. ಹೀಗಾಗಿ ಸಿಸಿಬಿ ಪೊಲೀಸರು ಪ್ರಕರಣವನ್ನು ಜಾರಿ ನಿರ್ದೇಶನಾಲಯ (ED)ಗೆ ವರ್ಗಾವಣೆಗೊಳಿಸಲು ಸಿದ್ದತೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Jagadisha B

ಜಗದೀಶ್​ ಬಸವರಾಜು ಟಿವಿ9 ಕನ್ನಡದ ವರದಿಗಾರರಲ್ಲಿ ಒಬ್ಬರು. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ.

Read More
Follow Us