ಯುವರಾಜ್ ವಿರುದ್ಧ ಸಾಲು ಸಾಲು ದೂರು: ಪಶ್ಚಿಮ ವಿಭಾಗದ ಠಾಣೆಗಳಲ್ಲಿ ದಾಖಲಾಗಿವೆ 11 ಪ್ರಕರಣಗಳು..!

ಒಟ್ಟು 11 ಕೇಸ್​ಗಳಲ್ಲಿ ಯುವರಾಜ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇಂದು ಯುವರಾಜನ ಸಿಸಿಬಿ ಕಸ್ಟಡಿ ಅಂತ್ಯವಾಗಲಿದ್ದು ಕೋರ್ಟ್ ಮುಂದೆ ಆರೋಪಿಯನ್ನ ಹಾಜರು ಪಡಿಸಲು ಸಿಸಿಬಿ ಪೊಲೀಸರು ಸಿದ್ದತೆ ನಡೆಸಿದ್ದಾರೆ.

ಯುವರಾಜ್ ವಿರುದ್ಧ ಸಾಲು ಸಾಲು ದೂರು: ಪಶ್ಚಿಮ ವಿಭಾಗದ ಠಾಣೆಗಳಲ್ಲಿ ದಾಖಲಾಗಿವೆ 11 ಪ್ರಕರಣಗಳು..!
ಯುವರಾಜ್
Updated By: ಸಾಧು ಶ್ರೀನಾಥ್​

Updated on: Feb 01, 2021 | 3:19 PM

ಬೆಂಗಳೂರು: ವಂಚಕ ಯುವರಾಜ್​ ಅಲಿಯಾಸ್​ ಸ್ವಾಮಿಯ ಬಂಧನದ ನಂತರ ಆತನ ಕಳ್ಳ ವ್ಯವಹಾರಗಳು ಒಂದೊಂದಾಗಿಯೇ ಹೊರಬರುತ್ತಿವೆ. ಕೆದಕಿದಷ್ಟೂ ಹೆಚ್ಚಾಗುತ್ತಲೇ ಇವೆ ವಂಚನೆಯ ಅಪರಾಧಗಳು.

ಇಷ್ಟು ದಿನ ಯುವರಾಜ್​ ಮೇಲೆ ಸಿಸಿಬಿ ಕಣ್ಣಿಟ್ಟಿತ್ತು. ಈಗ ಬೆಂಗಳೂರು ಪಶ್ಚಿಮ ವಿಭಾಗ ಪೊಲೀಸರ ಸರದಿ.. ಪಶ್ಚಿಮ ವಿಭಾಗದ ಠಾಣೆಗಳಲ್ಲಿ ಯುವರಾಜ್ ವಿರುದ್ಧ ಬರೋಬ್ಬರಿ 11 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಪಶ್ಚಿಮ ವಿಭಾಗದ ಪೊಲೀಸರು ವಂಚಕ ಯುವರಾಜ್​ನ ಬೆನ್ನು ಬಿದ್ದಿದ್ದಾರೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿರುವ ಆರೋಪದಡಿ ಯುವರಾಜ್​ ಮೇಲೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.

ಬಿಡಿಎಸ್ ಸೀಟು ಕೊಡಿಸುವುದಾಗಿ ಹಣ ಪಡೆದು ವಂಚಿಸಿರುವ ಆರೋಪದಡಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಂಟು ಕೇಸ್ ದಾಖಲಾಗಿದೆ. ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಒಟ್ಟು 11 ಕೇಸ್​ಗಳಲ್ಲಿ ಯುವರಾಜ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇಂದು ಯುವರಾಜನ ಸಿಸಿಬಿ ಕಸ್ಟಡಿ ಅಂತ್ಯವಾಗಲಿದ್ದು ಕೋರ್ಟ್ ಮುಂದೆ ಆರೋಪಿಯನ್ನ ಹಾಜರು ಪಡಿಸಲು ಸಿಸಿಬಿ ಪೊಲೀಸರು ಸಿದ್ದತೆ ನಡೆಸಿದ್ದಾರೆ. ಅದಾದ ಮೇಲೆ ಪಶ್ಚಿಮ ವಿಭಾಗದ ನಾನಾ ಪೊಲೀಸ್ ಠಾಣೆಗಳ ಪೊಲೀಸರು ಬಾಡಿ ವಾರಂಟ್​ ಮೇಲೆ ವಂಚಕ ಯುವರಾಜ್​ನನ್ನು ವಶಕ್ಕೆ ಪಡೆಯುತ್ತಾರಾ? ಅಥವಾ ಸಾರಾಸಗಟಾಗಿ ಸಿಸಿಬಿ ಪೊಲೀಸರೇ ಯುವರಾಜ್​ನನ್ನು ವಶಕ್ಕೆ ತೆಗೆದುಕೊಂಡು ತನಿಖೆ ಚುರುಕುಗೊಳಿಸುತ್ತಾರಾ ಕಾದುನೊಡಬೇಕಿದೆ.

ಯುವರಾಜ್​ ನಮ್ಮ ಮನೆಗೆ ಬಂದಿರಲಿಲ್ಲ.. ನಾನೇ ಅವರ ಮನೆಗೆ ಹೋಗಿದ್ದೆ, ಅಲ್ಲಿ ನೋಡಿ ಶಾಕ್​ ಆಗಿತ್ತು: ಸಚಿವ ಸೋಮಣ್ಣ