ಅಕ್ಕ ಅಕ್ಕ ಎನ್ನುತ್ತಲೇ ದೀಪಿಕಾಳನ್ನು ಕೊಂದು ಬಿಟ್ನಾ ಯುವಕ? ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಶಿಕ್ಷಕಿ ಸಾವು

| Updated By: ವಿವೇಕ ಬಿರಾದಾರ

Updated on: Jan 23, 2024 | 1:10 PM

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ‌ ಬೆಟ್ಟದ ತಪ್ಪಲಿನಲ್ಲಿ ಶಿಕ್ಷಕಿ ದೀಪಿಕಾರ ಶವ ಪತ್ತೆಯಾಗಿತ್ತ್ತು. ದುಷ್ಕರ್ಮಿಗಳು ಕೊಲೆಗೈದು ಮಣ್ಣಿನಲ್ಲಿ ಹೂತು ಹಾಕಿದ್ದಾರೆ ಎಂದು ಶಂಕಿಸಲಾಗಿದೆ. ಇನ್ನು ಇದು ಕೊಲೆಯೋ ಅಥವಾ ಸಹಜ ಸಾವೋ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಹಲವು ಅಂಶಗಳು ಬಹಿರಂಗಗೊಂಡಿವೆ. ಏನವು ಇಲ್ಲಿದೆ ಓದಿ..

ಅಕ್ಕ ಅಕ್ಕ ಎನ್ನುತ್ತಲೇ ದೀಪಿಕಾಳನ್ನು ಕೊಂದು ಬಿಟ್ನಾ ಯುವಕ? ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಶಿಕ್ಷಕಿ ಸಾವು
ಮೃತ ದೀಪಿಕಾ
Follow us on

ಮಂಡ್ಯ, ಜನವರಿ 23: ಪಾಂಡವಪುರ (Pandavapur) ತಾಲೂಕಿನ ಮೇಲುಕೋಟೆ (Melkote)‌ ಬೆಟ್ಟದ ತಪ್ಪಲಿನಲ್ಲಿ ಶಿಕ್ಷಕಿ ದೀಪಿಕಾ (28) ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಾಣಿಕ್ಯನಹಳ್ಳಿ ಗ್ರಾಮದ ನಿವಾಸಿಯಾಗಿರುವ ಶಿಕ್ಷಕಿ ದೀಪಿಕಾಳನ್ನು ಇದೇ ಗ್ರಾಮದ ಓರ್ವ ಯುವಕ ಕೊಲೆ ಮಾಡಿದ್ದಾನೆ ಎಂದು ಆಕೆಯ ಪೋಷಕರು ಆರೋಪ ಮಾಡಿದ್ದಾರೆ. ಮೃತ ದೀಪಿಕಾಳಿಗೆ ಯುವಕ ಅಕ್ಕ ಅಕ್ಕ ಎನ್ನುತ್ತಲೆ ಹತ್ತಿರವಾಗಿದ್ದನು. ಒಂದೇ ಊರಿನವನಾದ್ದರಿಂದ ದೀಪಿಕಾ ಆತನನ್ನು ಸಲುಗೆಯಿಂದ ಮಾತನಾಡಿಸುತ್ತಿದ್ದರು.

ಯಾವಾಗ ಶಿಕ್ಷಕಿ ದೀಪಿಕಾ ಮೃತದೇಹ ಪತ್ತೆಯಾಯಿತು ಅಂದಿನಿಂದ ಯುವಕ ಗ್ರಾಮದಿಂದ ನಾಪತ್ತೆಯಾಗಿದ್ದಾನೆ. ಶಿಕ್ಷಕಿ ದೀಪಿಕಾ ಅವರ ಮೊಬೈಲ್​ ಪರಿಶೀಲಿಸಿದಾಗ ಕೊನೆಯದಾಗಿ ಕರೆ ಬಂದಿದ್ದು ಇದೇ ಯುವಕನದ್ದಾಗಿದೆ. ಅಲ್ಲದೆ ಶ್ರೀರಂಗಪಟ್ಟಣದ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಹಾಗೂ ಯುವಕ ಜಗಳವಾಡುತ್ತಿದ್ದನ್ನು ಪ್ರವಾಸಿಗರು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. 13 ಸೆಕೆಂಡ್‌ಗಳ ಈ ವಿಡಿಯೋವನ್ನು ಪ್ರವಾಸಿಗರು ಪೊಲೀಸರಿಗೆ ನೀಡಿದ್ದಾರೆ. ಇದರಿಂದ ಅನುಮಾನಗೊಂಡ ದೀಪಿಕಾ ಪೋಷಕರು ಅಕ್ಕ ಅಕ್ಕ ಎನ್ನುತ್ತ ಹತ್ತರಿವಾಗಿದ್ದ ಯುವಕನೇ ದೀಪಿಕಾರನ್ನು ಕೊಲೆ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ದೀಪಿಕಾ ಶವ ಸಿಕ್ಕಿದ್ದು ಹೇಗೆ?

ದೀಪಿಕಾ ಮೇಲುಕೋಟೆಯ ಎಸ್​ಇಟಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಜನವರಿ 20 ರಂದು ಶಾಲೆಗೆ ಹೋದವರು ಸಂಜೆ ಮನೆಗೆ ವಾಪಸ್​ ಆಗಿಲ್ಲ. ಹುಡುಕಾಟ ನಡೆಸಿದ್ದಾರೆ. ಹೀಗೆ ನಿನ್ನೆ (ಜ.22) ಸಂಜೆ ಮೇಲಕೋಟೆ ಬೆಟ್ಟದ ತಪ್ಪಲಿನಲ್ಲಿ ದೀಪಿಕಾಳಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾಗ ಆಕೆಯ ಡಿಯೋ ಸ್ಕೂಟರ್ ಪತ್ತೆಯಾಗಿದೆ.

ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ, ಕೊಲೆ ಆರೋಪ

ಸ್ಕೂಟರ್ ಪತ್ತೆಯಾದ ಸ್ಥಳದ ಸುತ್ತಮುತ್ತ ಹುಡುಕಾಟ ನಡೆಸಿದಾಗ ಹೂತಿದ್ದ ಸ್ಥಿತಿಯಲ್ಲಿ ಮೃತದೇಹ ಕಾಣಿಸಿದೆ. ಕುಟುಂಬಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ತಹಶಿಲ್ದಾರ್​ ಮೃತದೇಹದ ಹೊರತೆಗೆದಾಗ, ಶವ ದೀಪಿಕಾಳದ್ದಾಗಿದೆ. ಬಳಿಕ ಪೊಲೀಸರು ಮರಣೋತ್ತರ ಪರೀಕ್ಷೆಗೆ ಶವ ರವಾನೆ ಮಾಡಿದ್ದಾರೆ. ಆರೋಪಿ ಪತ್ತೆಗೆ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ