ರಾಯಚೂರು: ಆಟಿಕೆ ಸಾಮಾನು ಹಿಂದಿರುಗಿಸುವ ವಿಚಾರದಲ್ಲಿ ಮಾರಾಮಾರಿ

ಆಟಿಕೆ ಸಾಮಾನು ಹಿಂದಿರುಗಿಸೊ ವಿಚಾರದಲ್ಲಿ ಗಿಫ್ಟ್ ಸೆಂಟರ್ ಸಿಬ್ಬಂದಿ ಹಾಗೂ ಗ್ರಾಹಕರಿಬ್ಬರ ನಡುವೆ ಹೊಡೆದಾಟ ನಡೆದ ಘಟನೆ ರಾಯಚೂರಿನಲ್ಲಿ ನಡೆದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಾಯಚೂರು: ಆಟಿಕೆ ಸಾಮಾನು ಹಿಂದಿರುಗಿಸುವ ವಿಚಾರದಲ್ಲಿ ಮಾರಾಮಾರಿ
ಆಟಿಕೆ ಹಿಂದಿರುಗಿಸುವ ವಿಚಾರದಲ್ಲಿ ಜಗಳ
Updated By: Rakesh Nayak Manchi

Updated on: Dec 09, 2022 | 2:57 PM

ರಾಯಚೂರು: ಆಟಿಕೆ ಸಾಮಾನು ಹಿಂದಿರುಗಿಸೊ ವಿಚಾರದಲ್ಲಿ ಗಿಫ್ಟ್ ಸೆಂಟರ್ (Gift Center) ಸಿಬ್ಬಂದಿ ಹಾಗೂ ಗ್ರಾಹಕರಿಬ್ಬರ ನಡುವೆ ಹೊಡೆದಾಟ ನಡೆದ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣ ಆದರ್ಶ ಕಾಲೋನಿಯಲ್ಲಿ ನಡೆದಿದೆ. ಶಿವಕುಮಾರ್ ಎಂಬವರು ಸೂರ್ಯ ಗಿಫ್ಟ್ ಸೆಂಟರ್​ನಲ್ಲಿ ನಿನ್ನೆ (ಡಿ.8) ಆಟಿಕೆ ಸಾಮಾನುಗಳನ್ನ ಖರೀದಿಸಿದ್ದರು. ಕೆಲ ಹೊತ್ತಿನ ಬಳಿಕ ಆಟಿಕೆ ಹಿಂಪಡೆದು ರಿಫಂಡ್ ಮಾಡುವಂತೆ ತಾಕೀತು ಮಾಡಿದ್ದಾರೆ. ಇದನ್ನು ಗಿಫ್ಟ್ ಸೆಂಟರ್ ಸಿಬ್ಬಂದಿ ನಿರಾಕರಿಸಿದ್ದಾರೆ. ರಿಫಂಢ್ ಇಲ್ಲ, ಬೇರೆ ವಸ್ತು ಖರೀದಿಸುವಂತೆ ವ್ಯಾಪಾರಿ ಬಾಲಕೃಷ್ಣ ಹೇಳಿದ್ದಾರೆ. ಈ ವೇಳೆ ಪರಸ್ಪರ ವಾಗ್ವಾದ ನಡೆದಿದೆ.

ಬದಲಿ ವಸ್ತು ಖರೀದಿಸುವಂತೆ ಬಾಲಕೃಷ್ಣ ಹೇಳಿದಾಗ ಅಂಗಡಿಯಿಂದ ತೆರಳಿದ್ದ ಶಿವಕುಮಾರ್, ಬಳಿಕ ಸ್ನೇಹಿತ ಮಹಾಂತೇಶ್ ಎಂಬವನ ಜೊತೆ ಅಂಗಡಿಗೆ ಬಂದಿದ್ದಾರೆ. ಈ ವೇಳೆ ವ್ಯಾಪಾರಿ ಬಾಲಕೃಷ್ಣ ಹಾಗೂ ಸಿಬ್ಬಂದಿ ಜೊತೆ ಶಿವಕುಮಾರ್ ಕಿತ್ತಾಟ ನಡೆಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಶಿವಕುಮಾರ್ ಹಾಗೂ ಸ್ನೇಹಿತ ಮಹಾಂತೇಶ್​ ಗಿಫ್ಟ್ ಸೆಂಟರ್ ಗಾಜು ಒಡೆದು ಪುಂಡಾಟಿಕೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ಇದನ್ನೂ ಓದಿ: ಕೇಸ್ ನಡೆಸಲ್ಲಾ ಎಂದಿದ್ದಕ್ಕೆ ವಕೀಲನ ಮೇಲೆ ಹಲ್ಲೆ ಆರೋಪ: ಪ್ರಕರಣ ದಾಖಲು

ಅದಾಗ್ಯೂ, ಮಾತಿನ ಚಕಾಮಕಿ ತಾರಕಕ್ಕೇರಿದ್ದಲ್ಲದೆ ವ್ಯಾಪಾರಿ ಬಾಲಕೃಷ್ಣ ಮೇಲೆ ಮನಬಂದಂತೆ ಶಿವಕುಮಾರ್ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಗಿಫ್ಟ್ ಸೆಂಟರ್ ಸಿಬ್ಬಂದಿ ಶ್ಯಾಮ್ ಪ್ರಸಾದ್, ಹರಿತಾ, ಮಹಾಲಕ್ಷ್ಮೀ ಸೇರಿದಂತೆ ಕೆಲವರ ಮೇಲೆ ಹಲ್ಲೆ ನಡೆಸಿರುವ ಆರೋಪ ಮಾಡಲಾಗಿದೆ.

ಘಟನೆ ಬಳಿಕ ವ್ಯಾಪಾರಿ ಬಾಲಕೃಷ್ಣ ಅವರು ಸಿಂಧನೂರು ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಶಿವಕುಮಾರ್ ಹಾಗೂ ಮಹಾಂತೇಶ್​ ಅವರನ್ನು ವಶಕ್ಕೆ ಪಡೆದಿದ್ದಾರೆ. ನಂತರ ಅವರ ಕಡೆಯವರು ಶಿವಕುಮಾರ್ ಹಾಗೂ ಮಹಾಂತೇಶ್​ರನ್ನು ಪೊಲೀಸ್ ಠಾಣೆಯಿಂದ ಕರೆದೊಯ್ದಿರುವುದಾಗಿ ಆರೋಪಿಸಲಾಗಿದೆ. ಸದ್ಯ ಸಿಂಧನೂರು ಪೊಲೀಸರಿಂದ ವಿಚಾರಣೆ ಮುಂದುವರಿದಿದೆ.

ಕೈಗೆ ಕೋಳ ತೊಡಿಸಿ ಇಡೀ ಏರಿಯಾದಲ್ಲಿ ಮಹಜರು

ಬೆಂಗಳೂರು: ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಆರೋಪಿ ಸುಹೇಲ್​​ ಅಲಿಯಾಸ್ ಪಪ್ಪಾಯ ಸುಹೇಲ್​ನನ್ನು ಸ್ಥಳ ಮಹಜರು ನಡೆಸುವ ನಿಟ್ಟಿನಲ್ಲಿ ಡಿಜೆ ಹಳ್ಳಿಯಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಅಮಾಯಕ ಜನರಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಸುಹೇಲ್ ಕೈಗೆ ಕೋಳ ತೊಡಿಸಿ ಎಲ್ಲೆಲ್ಲಿ ಜನರಿಗೆ ಬೆದರಿಕೆ ಮಾಡಿ ವಸೂಲಿ ಮಾಡಿದ್ದ ಆ ಏರಿಯಾಗಳಲ್ಲಿ ಮಹಜರು ನಡೆಸಲಾಗಿದೆ. ಕೊಲೆ ಯತ್ನ, ವ್ಯಾಪಾರಿಗಳಿಗೆ ಬೆದರಿಕೆ ಸೇರಿದಂತೆ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸುಹೇಲ್, ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದ. ಸದ್ಯ ಸುಹೇಲ್ ವಿರುದ್ಧ ಪೊಲೀಸರು ರೌಡಿ ಶೀಟರ್ ಹಾಕಲು ಮುಂದಾಗಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Fri, 9 December 22