
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ATMಗೆ ಕನ್ನ ಹಾಕಿರುವ ಘಟನೆ KR ಪುರದ ಭಟ್ಟರಹಳ್ಳಿಯಲ್ಲಿ ನಡೆದಿದೆ. ಖದೀಮರು ATMನಲ್ಲಿದ್ದ ಬರೊಬ್ಬರಿ 11 ಲಕ್ಷ ರೂಪಾಯಿ ನಗದು ದೋಚಿ ಎಸ್ಕೇಪ್ ಆಗಿದ್ದಾರೆ.
ನಿನ್ನೆ ಸಂಜೆ ಬ್ಯಾಂಕ್ ಸಿಬ್ಬಂದಿ ATMಗೆ ಲಕ್ಷ ಲಕ್ಷ ಹಣ ತುಂಬಿದ್ದರಂತೆ. ಇದಕ್ಕಾಗಿಯೇ ಕಾದು ಕುಳಿತಿದ್ದ ಕಳ್ಳರ ಗ್ಯಾಂಗ್ ವೆಲ್ಡಿಂಗ್ ಕಟರ್ ಬಳಸಿ ATM ಕಟ್ ಮಾಡಿದ್ದಾರೆ. ಬಳಿಕ ATM ನಲ್ಲಿದ್ದ ಬರೊಬ್ಬರಿ 11 ಲಕ್ಷ ರೂಪಾಯಿ ನಗದು ದೊಚಿ ಪರಾರಿಯಾಗಿದ್ದಾರೆ.
ಬ್ಯಾಂಕ್ನ ಬೇಜವಾಬ್ದಾರಿತನದಿಂದ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ATMಗೆ ಯಾವುದೇ ಸಿಸಿಟಿವಿ ಅಳವಡಿಸಿರಲಿಲ್ಲ. ಜೊತೆಗೆ, ಅಲರ್ಟ್ ಅಲಾರಾಮ್ ಅಷ್ಟೇ ಅಲ್ಲದೇ ಇಲ್ಲಿ ಭದ್ರತಾ ಸಿಬ್ಬಂದಿಯನ್ನು ಸಹ ನಿಯೋಜಿಸಿರಲಿಲ್ಲ. ಇದನ್ನೇ ಎನ್ಕ್ಯಾಶ್ ಮಾಡಿಕೊಂಡ ದರೋಡೆಕೋರರು ಹಲವು ದಿನಗಳು ವಾಚ್ ಮಾಡಿದ ಬಳಿಕ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.
ಇಂದು ಬೆಳಿಗ್ಗೆ ATM ಮುಂಭಾಗದಲ್ಲಿರುವ ಬೇಕರಿ ಬಾಗಿಲು ತೆಗೆಯುವಾಗ ಕೃತ್ಯ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.
