ಹಾಸನದಲ್ಲಿ ಡಾನ್ ಪಟ್ಟಕ್ಕಾಗಿ ರೌಡಿ ಶೀಟರ್ ಚೈಲ್ಡ್ ರವಿ ಬರ್ಬರ ಹತ್ಯೆ ಪ್ರಕರಣ; ನಾಲ್ವರು ಅಂದರ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 07, 2024 | 4:41 PM

ಹಾಸನದಲ್ಲಿ ಲೋಕಸಭಾ ಫಲಿತಾಂಶ ಕಳೆದ ಮಾರನೇ ದಿನವೇ ನೆತ್ತರು ಹರಿದಿತ್ತು. ನಟೋರಿಯಸ್ ರೌಡಿಶೀಟರ್ ರವಿ ಆಲಿಯಾಸ್ ಚೈಲ್ಡ್ ರವಿ ಎಂಬಾತನನ್ನು ಪಾತಕಿಗಳು ನಡುರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಕೊಚ್ಚಿ ಕೊಲೆಗೈದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ನಿನ್ನೆ(ಜೂ.06) ರಾತ್ರಿ ಹಾಸನ ಹೊರ ವಲಯದ ಗ್ಯಾರಳ್ಳಿ ಬಳಿ ಅರೆಸ್ಟ್​ ಮಾಡಲಾಗಿದೆ. 

ಹಾಸನದಲ್ಲಿ ಡಾನ್ ಪಟ್ಟಕ್ಕಾಗಿ ರೌಡಿ ಶೀಟರ್ ಚೈಲ್ಡ್ ರವಿ ಬರ್ಬರ ಹತ್ಯೆ ಪ್ರಕರಣ; ನಾಲ್ವರು ಅಂದರ್​
ಮೃತ ರವಿ, ಬಂಧಿತ ಆರೋಫಿಗಳು
Follow us on

ಹಾಸನ, ಜೂ.07: ಹಾಸನದಲ್ಲಿ ಇದೇ ಜೂನ್ 5 ರ ಮುಂಜಾನೆ 7 ಗಂಟೆ 50 ನಿಮಿಷಕ್ಕೆ ರೌಡಿ ಶೀಟರ್ ರವಿ ಆಲಿಯಾಸ್ ಚೈಲ್ಡ್ ರವಿ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ನಿನ್ನೆ(ಜೂ.06) ರಾತ್ರಿ ಹಾಸನ ಹೊರ ವಲಯದ ಗ್ಯಾರಳ್ಳಿ ಬಳಿ ಅರೆಸ್ಟ್​ ಮಾಡಲಾಗಿದೆ. ಡಾನ್ ಪಟ್ಟಕ್ಕಾಗಿ ನಟೋರಿಯಸ್ ರೌಡಿ ಹತ್ಯೆಗೈದಿದ್ದ ರೌಡಿ ಶೀಟರ್ ಪ್ರೀತಮ್ ಆಲಿಯಾಸ್ ಗುಂಡಿ ಪ್ರೀತು ಸೇರಿ ನಾಲ್ವರನ್ನು ಬಂಧಿಸಲಾಗಿದೆ.

ಹಾಸನದಲ್ಲಿ ಡಾನ್ ಪಟ್ಟಕ್ಕಾಗಿ ರವಿ ಹಾಗೂ ಪ್ರೀತು ನಡುವೆ ಪೈಟ್

ರೌಡಿಶೀಟರ್ ಆಗಿ ಎರಡು ಕೊಲೆ ಸೇರಿ ಏಳು ಪ್ರಕರಣದಲ್ಲಿ ಮೃತ ರವಿ ಭಾಗಿಯಾಗಿದ್ದ. ಇತ್ತ ಈಗಾಗಲೇ ಮೂರು ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ ಪ್ರೀತು ಹಾಗೂ ರವಿ ನಡುವೆ ಹಾಸನದಲ್ಲಿ ಡಾನ್ ಪಟ್ಟಕ್ಕಾಗಿ ಪೈಟ್ ಶುರುವಾಗಿತ್ತು. ಇದೇ ವಿಚಾರಕ್ಕೆ ರವಿ ಕೊಂದರೆ ತಾನೇ ಡಾನ್ ಆಗುತ್ತೇನೆ ಎಂದು ಪ್ರೀತಮ್ ಹೇಳಿಕೊಂದಿದ್ದ. ಪ್ರೀತಮ್(27), ಕೀರ್ತಿ(26), ರಂಗನಾಥ್ ಆಲಿಯಾಸ್ ರಂಗ(26) ಹಾಗೂ ಅಮಿತ್ ಆಲಿಯಾಸ್ ಅಮ್ಮಿ(31) ಬಂಧಿತರು. ಘಟನೆ ಕುರಿತು ಚೈಲ್ಡ್ ರವಿ ಪತ್ನಿ ದೂರು ಆಧರಿಸಿ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು, ಕೊಲೆ ನಡೆದ ಮಾರನೇ ದಿನವೇ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಹಾಸನದಲ್ಲಿ ನಟೋರಿಯಸ್ ರೌಡಿ ಶೀಟರ್ ಭೀಕರ ಹತ್ಯೆ; ಭಯಾನಕ ಕೊಲೆ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಘಟನೆ ವಿವರ

ಹಾಸನದಲ್ಲಿ ನಟೋರಿಯಸ್ ರೌಡಿಯಾಗಿದ್ದ 45 ವರ್ಷದ ರವಿ ಅಲಿಯಾಸ್ ಚೈಲ್ಡ್ ರವಿ. ಕೊಲೆ, ದರೋಡೆ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಆತನನ್ನೇ ಹಾಸನ ನಗರದಲ್ಲಿ ಜೂ.05 ರ ಬೆಳ್ಳಂಬೆಳಗ್ಗೆ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಬೆಳಗ್ಗೆ 8 ಗಂಟೆಗೆ ಸುಮಾರಿಗೆ ಚೈಲ್ಡ್ ರವಿ ಮನೆಗೆ ಕುಡಿಯೋದಕ್ಕೆ ನೀರು ತರಲೆಂದು ನೀರಿನ ಘಟಕಕ್ಕೆ ಹೋಗಿ ವಾಪಸ್ಸು ಬರುವಾಗ ಹಂತಕರು ಅಟ್ಯಾಕ್ ಮಾಡಿದ್ದರು. ಮಾರಕಾಸ್ತ್ರಗಳಿಂದ ನಾಲ್ವರು ದುಷ್ಕರ್ಮಿಗಳು ರಸ್ತೆಯಲ್ಲಿಯೇ ಕೊಚ್ಚಿ ಕೊಂದು ಎಸ್ಕೇಪ್ ಆಗಿದ್ದರು. ಈ ಕುರಿತು ಪೆನ್ಷನ್ ಮೊಹೊಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ರವಿ ಅಲಿಯಾಸ್ ಚೈಲ್ಡ್ ರವಿಯ ಇತಿಹಾಸ

ಕೊಲೆಯಾಗಿರುವ ರವಿ ಅಲಿಯಾಸ್ ಚೈಲ್ಡ್ ರವಿಯ ಇತಿಹಾಸ ಕೂಡ ಕರಾಳವಾಗಿದೆ. ಆತ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದ. ಹಾಗಾಗಿಯೇ ಇವನಿಗೆ ಚೈಲ್ಡ್ ರವಿ ಎಂದು ಹೆಸರು ಬಂದಿದೆ ಎನ್ನುವ ಮಾತುಗಳಿವೆ. ಅಲ್ಲಿಂದ ರೌಡಿಸಂ ಫೀಲ್ಡ್ ಗೆ ಎಂಟ್ರಿಕೊಟ್ಟಿದ್ದ ರವಿ. 2014 ರಲ್ಲಿ ಹಾಸನ ನಗರದ ಸಹ್ಯಾದ್ರಿ ವೃತ್ತದಲ್ಲಿ ಕುಖ್ಯಾತ ರೌಡಿ ಸ್ಲಂ ಮಂಜನ ಮರ್ಡರ್ ಮಾಡಿದ್ದ ಆರೋಪದಲ್ಲಿ ಮತ್ತೆ ಜೈಲು ಸೇರಿದ್ದ. ಬಳಿಕ 2016 ರಲ್ಲಿ ಕೊಲೆ, ದರೋಡೆಯಂತಹ ಕೇಸ್​ಗಳಲ್ಲಿ ಭಾಗಿಯಾಗಿದ್ದ. 2016ರಲ್ಲಿ ಅಂದಿನ ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ಅವರು ಚೈಲ್ಡ್ ರವಿಯನ್ನ ಬಂಧಿಸಿ ಹಾಸನದ ರಸ್ತೆಯಲ್ಲಿ ಮೆರವಣಿಗೆ ಮಾಡಿ ಈತ ಇನ್ನು ರೌಡಿ ಅಲ್ಲ, ಈತನ ಹೆಸರು ಚೈಲ್ಡ್ ರವಿಯಲ್ಲ ಎಂದು ಎಚ್ಚರಿಕೆ ನೀಡುವ ಮೂಲಕ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದರು. ಒಮ್ಮೆ ಇವನನ್ನು ಗಡಿಪಾರು ಕೂಡ ಮಾಡಿಸಿದ್ದರು. ಇಷ್ಟೆಲ್ಲದರ ನಡುವೆ ಕಳೆದ ನಾಲ್ಕು ವರ್ಷಗಳಿಂದ ರವಿ ವಿರುದ್ದ ಯಾವುದೇ ಕೇಸ್ ದಾಖಲಾಗಿಲ್ಲ. ಎಲ್ಲಿಯೂ ಗಲಾಟೆ ಮಾಡಿಕೊಂಡ ಬಗ್ಗೆ ಠಾಣೆಗೆ ದೂರು ಕೂಡ ಬಂದಿರಲಿಲ್ಲ. ಈ ನಡುವೆ ಡಾನ್​ ಪಟ್ಟಕ್ಕಾಗಿ ಈ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ