5 State Assembly Election Results 2021 LIVE: ನಂದಿಗ್ರಾಮದ ಮತಎಣಿಕೆ ಇನ್ನೂ ಮುಗಿದಿಲ್ಲ, ಸುವೇಂದು ಅಧಿಕಾರಿ ವಿಜಯ ಘೋಷಣೆಗೆ ಅರ್ಥವಿಲ್ಲ: ಟಿಎಂಸಿ

| Updated By: guruganesh bhat

Updated on: May 02, 2021 | 9:09 PM

5 State Assembly Election Results 2021 LIVE Counting and Updates: ಇಂದು ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮಬಂಗಾಳ, ಪುದುಚೇರಿ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಪಂಚರಾಜ್ಯಗಳಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲು ಅನುಭವಿಸುತ್ತಾರೆ? ಎಂಬ ಸಂಗತಿ ಇಂದು ಬಯಲಾಗಲಿದೆ.

5 State Assembly Election Results 2021 LIVE: ನಂದಿಗ್ರಾಮದ ಮತಎಣಿಕೆ ಇನ್ನೂ ಮುಗಿದಿಲ್ಲ, ಸುವೇಂದು ಅಧಿಕಾರಿ ವಿಜಯ ಘೋಷಣೆಗೆ ಅರ್ಥವಿಲ್ಲ: ಟಿಎಂಸಿ
ಸುವೇಂದು ಅಧಿಕಾರಿ- ಮಮತಾ ಬ್ಯಾನರ್ಜಿ

LIVE NEWS & UPDATES

  • 02 May 2021 09:09 PM (IST)

    ಮಮತಾ ಬ್ಯಾನರ್ಜಿ, ಸ್ಟಾಲಿನ್​, ವಿಜಯನ್​ಗೆ ನರೇಂದ್ರ ಮೋದಿ ಅಭಿನಂದನೆ

    ಚುನಾವಣೆಯಲ್ಲಿ ಜನರು ನೀಡಿದ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಂಡಿದ್ದಾರೆ.

  • 02 May 2021 07:09 PM (IST)

    ಊಹಾಪೋಹದ ಮಾತು ಹರಡಬೇಡಿ: ಟಿಎಂಸಿ ಟ್ವೀಟ್

    ನಂದಿಗ್ರಾಮ ಕ್ಷೇತ್ರದ ಮತಎಣಿಕೆ ಇನ್ನೂ ಮುಗಿದಿಲ್ಲ. ಊಹಾಪೋಹದ ಮಾತುಗಳನ್ನು ಹರಡಬೇಡಿ ಎಂದು ತೃಣಮೂಲ ಕಾಂಗ್ರೆಸ್ ವಿನಂತಿಸಿದೆ.


  • 02 May 2021 07:04 PM (IST)

    ನಂದಿಗ್ರಾಮದ ಫಲಿತಾಂಶ ಇನ್ನೂ ಘೋಷಣೆಯಾಗಿಲ್ಲ: ಚುನಾವಣಾ ಆಯೋಗ

    ನಂದಿಗ್ರಾಮ ಕ್ಷೇತ್ರದ ಮತಎಣಿಕೆ ಪೂರ್ಣಗೊಂಡಿದೆ. ಆದರೆ ಫಲಿತಾಂಶ ಇನ್ನೂ ಘೋಷಣೆಯಾಗಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

  • 02 May 2021 06:58 PM (IST)

    ಗೊಂದಲದ ಗೂಡಾದ ನಂದಿಗ್ರಾಮ ಎಲೆಕ್ಷನ್ ರಿಸಲ್ಟ್

    ನಂದಿಗ್ರಾಮ: ಪಶ್ಚಿಮ ಬಂಗಾಳದ ಹೈವೋಲ್ಟೇಜ್ ಕ್ಷೇತ್ರವೆನಿಸಿದ ನಂದಿಗ್ರಾಮದ ಚುನಾವಣಾ ಫಲಿತಾಂಶದ ಬಗ್ಗೆ ಒಬ್ಬೊಬ್ಬರಿಂದ ಒಂದೊಂದು ಹೇಳಿಕೆ ಹೊರಬೀಳುತ್ತಿದೆ. ಟಿಎಂಸಿ ಕಾರ್ಯಕರ್ತರು ಇನ್ನೂ ಮತ ಎಣಿಕೆ ಮುಗಿದಿಲ್ಲ ಎನ್ನುತ್ತಿದ್ದಾರೆ. ಫಲಿತಾಂಶ ಇನ್ನೂ ನಮ್ಮ ಕೈತಲುಪಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಮತ್ತೊಂದೆಡೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಲೊಪ್ಪಿಕೊಂಡು, ಆಯೋಗದ ಕ್ರಮ ಪ್ರಶ್ನಿಸಿ ಕೋರ್ಟ್​ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

  • 02 May 2021 06:56 PM (IST)

    ನಂದಿಗ್ರಾಮ ಕ್ಷೇತ್ರ ಮತಗಳ ಸಂಪೂರ್ಣ ಮರುಎಣಿಕೆಗೆ ಟಿಎಂಸಿ ಆಗ್ರಹ

    ನಂದಿಗ್ರಾಮ ಕ್ಷೇತ್ರದ ಮತಎಣಿಕೆ ಸಂಪೂರ್ಣವಾಗುವ ಮೊದಲೇ ಚುನಾವಣಾ ಆಯೋಗವು ಸುವೇಂದು ಅಧಿಕಾರಿಯನ್ನು ವಿಜಯಿ ಎಂದು ಘೋಷಿಸಿದೆ ಎಂದು ದೂರಿರುವ ಟಿಎಂಸಿ, ನಂದಿಗ್ರಾಮದ ಮತಎಣಿಕೆ ಇನ್ನೂ ನಡೆಯುತ್ತಿದೆ. ಕೊನೇಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದೆ. ನಂದಿಗ್ರಾಮ ಕ್ಷೇತ್ರ ಮತಗಳ ಸಂಪೂರ್ಣ ಮರುಎಣಿಕೆಗೆ ಟಿಎಂಸಿ ಆಗ್ರಹಿಸಿದೆ.


  • 02 May 2021 05:46 PM (IST)

    ಕೇರಳದಲ್ಲಿ ಎಲ್​ಡಿಎಫ್​ ಗೆಲುವು; ಇದು ಜನರ ವಿಜಯ ಎಂದ ಪಿಣರಾಯಿ ವಿಜಯನ್

    ಕೊಚ್ಚಿ: ಕೇರಳದ ಜನರು ಎಲ್​ಡಿಎಫ್​ ಪರವಾಗಿ ಮತ ಚಲಾಯಿಸಿದ್ದಾರೆ. ಈ ಗೆಲುವನ್ನು ಜನರಿಗೇ ಸಮರ್ಪಿಸುತ್ತೇನೆ. ಆದರೆ ಇದು ಸಂಭ್ರಮಾಚರಣೆಗೆ ಸಮಯವಲ್ಲ. ಕೋವಿಡ್-19 ರಾಜ್ಯದಲ್ಲಿ ವೇಗವಾಗಿ ಹರಡುತ್ತಿದೆ. ಕೊರೊನಾ ಸೋಲಿಸುವುದು ನಮ್ಮ ಆದ್ಯತೆಯಾಗಲಿದೆ ಎಂದು ಎಲ್​ಡಿಎಫ್​ ಗೆಲುವಿನ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

    ಕೋವಿಡ್-19ರ ವಿರುದ್ಧ ಕೇರಳ ಪ್ರಬಲವಾಗಿ ಹೋರಾಡುತ್ತಿದೆ. ಸತತವಾಗಿ ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ ಎಂದು ಅವರು ತಿಳಿಸಿದರು.

    ಇದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ, ‘ನಾವು 2ನೇ ಅವಧಿಯ ಆಡಳಿತಕ್ಕೆ ಸಿದ್ಧರಾಗುತ್ತಿದ್ದೇವೆ. ಕಳೆದ 5 ವರ್ಷಗಳಲ್ಲಿ ರಾಜ್ಯ ಸಾಕಷ್ಟು ಪ್ರಗತಿ ಸಾಧಿಸಿದೆ. ನಾವು ಮತ್ತೆ ಗೆಲುವು ಸಾಧಿಸುವ ಬಗ್ಗೆ ವಿಶ್ವಾಸವಿತ್ತು. ಮುಂದಿನ ಅವಧಿಯಲ್ಲಿ ಆರೋಗ್ಯ ಸಚಿವರಾಗಿ ಯಾರು ಕಾರ್ಯನಿರ್ವಹಿಸಬೇಕು ಎಂಬುದನ್ನು ಎಲ್​ಡಿಎಫ್ ಸರ್ಕಾರ ನಿರ್ಧರಿಸಲಿದೆ’ ಎಂದು ಹೇಳಿದ್ದರು.

  • 02 May 2021 05:43 PM (IST)

    ಟಿಎಂಸಿ ಗೆಲುವನ್ನು ಐತಿಹಾಸಿಕ ಗೆಲುವು ಎಂದು ಸಿದ್ದರಾಮಯ್ಯ

    ಬಿಜೆಪಿಯವರು ಹೇಳಿಕೊಂಡಂತೆ ಜನರ ವಿಶ್ವಾಸ ಗೆದ್ದಿಲ್ಲ.ಜನರ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಅದು ಪರ ಇರಲಿ ವಿರೋಧ ಇರಲಿ ಜನರ ತೀರ್ಪನ್ನು ಒಪ್ಪಬೇಕಾಗುತ್ತದೆ.
    ಬಂಗಾಳದಲ್ಲಿ ಒಂಟಿ ಹೆಣ್ಣು ಮಗಳ ವಿರುದ್ದ ಮೋದಿ, ಶಾ, ನಡ್ಡಾ, ಎಲ್ಲಾ ಸಮರ‌ ಸಾರಿದ್ದರು. ಹಣ ತೋಳ್ಬಲದ ಮೂಲಕ ಟಿಎಂಸಿ ನಾಯಕರನ್ನು ಎಳೆದುಕೊಂಡಿದ್ದರು.ಆದರೂ ಪಶ್ಚಿಮ ಬಂಗಾಳದ ಜನರು ಬಿಜೆಪಿ ಕುತಂತ್ರ ಧಿಕ್ಜರಿಸಿ ಟಿಎಂಸಿಗೆ ಮೂರನೇ ಬಾರಿಗೆ ಆಶೀರ್ವಾದ ಮಾಡಿದ್ದಾರೆ. ಇದು ಅದು ಐತಿಹಾಸಿಕ ಗೆಲುವು ಎಂದು ಕರ್ನಾಟಕದ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಹೇಳಿದರು.

  • 02 May 2021 05:38 PM (IST)

    ಬಿಜೆಪಿ ಕಚೇರಿಗೆ ಬೆಂಕಿ

    ಟಿಎಂಸಿ ಪಕ್ಷದ ಗೆಲುವಿನ ಬೆನ್ನಲ್ಲೇ ಪಶ್ಚಿಮ ಬಂಗಾಳದ ನಂದಿಗ್ರಾಮದ ಬಿಜೆಪಿ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಜತೆಗೆ ಆರಂಬಾಗ್​​ನಲ್ಲಿರುವ ಬಿಜೆಪಿ ಕಚೇರಿಗೆ,ಹೂಗ್ಲಿಯಲ್ಲಿರುವ ಬಿಜೆಪಿ ಕಚೇರಿಗೂ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದಾರೆ.

  • 02 May 2021 05:35 PM (IST)

    ಟಿಎಂಸಿ ಪಕ್ಷದ ಗೆಲುವಿನ ಬೆನ್ನಲ್ಲೇ ನಂದಿಗ್ರಾಮದ ಬಿಜೆಪಿ ಕಚೇರಿಗೆ ಬೆಂಕಿ

    ನಂದಿಗ್ರಾಮ: ಪಶ್ಚಿಮ ಬಂಗಾಳ ರಾಜ್ಯ ಮತ್ತು ನಂದಿಗ್ರಾಮದ ಕ್ಷೇತ್ರದಲ್ಲಿ ಟಿಎಂಸಿ ಗೆಲುವು ದೃಢಪಟ್ಟ ಬೆನ್ನಲ್ಲೇ ಹಿಂಸಾಚಾರದ ಘಟನೆಗಳು ವರದಿಯಾಗಿವೆ. ನಂದಿಗ್ರಾಮದ ಬಿಜೆಪಿ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಪಶ್ಚಿಮ ಬಂಗಾಳದ ಆರಂಬಾಗ್​ ಮತ್ತು ಹೂಗ್ಲಿಯಲ್ಲಿರುವ ಬಿಜೆಪಿ ಕಚೇರಿಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

  • 02 May 2021 05:09 PM (IST)

    ಇದು ಬಂಗಾಳದ ಗೆಲುವು ಎಂದ ಮಮತಾ ಬ್ಯಾನರ್ಜಿ

    ದಯವಿಟ್ಟು ಮಾಸ್ಕ್​ ಧರಿಸಿ, ಕೋವಿಡ್-19ರ ಶಿಷ್ಟಾಚಾರಗಳನ್ನು ತಪ್ಪದೇ ಪಾಲಿಸಿ. ಮನೆಗೆ ಹೋದ ತಕ್ಷಣ ಸ್ನಾನ ಮಾಡಿ. ಇದು ಬಂಗಾಳದ ಗೆಲುವು. ನಾನು ಮತ್ತೆ ನಿಮ್ಮ ಜೊತೆಗೆ ಮತಾತಾಡ್ತೀನಿ ಎಂದು ಮತದಾರರನ್ನು ಮಮತಾ ಬ್ಯಾನರ್ಜಿ ಅಭಿನಂದಿಸಿದರು. ಇಂದು ಮಮತಾ ವ್ಹೀಲ್​ಚೇರ್​ನಲ್ಲಿ ಬಂದಿರಲಿಲ್ಲ. ಆತ್ಮವಿಶ್ವಾಸದಿಂದ ನಡೆದೇ ಬಂದರು.

  • 02 May 2021 04:47 PM (IST)

    ರಾಜಕೀಯ ಗುರುವಿನ ವಿರುದ್ಧ 1200 ಮತಗಳಿಂದ ಸೋತ ಸುವೇಂದು ಅಧಿಕಾರಿ

    ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಜಯಗಳಿಸಿದ್ದಾರೆ. ಹಿಂದೆ ಮಮತಾ ಬ್ಯಾನರ್ಜಿಯ ನಂಬಿಕಸ್ಥ ಅನುಯಾಯಿಯಾಗಿದ್ದ ಸುವೇದು ಅಧಿಕಾರಿ ನಂತರದ ದಿನಗಳಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು. ಸುವೇಂದು ವಿರುದ್ಧ ಕಣಕ್ಕಿಳಿಯುವ ಒಂದೇ ಉದ್ದೇಶದಿಂದ ಮಮತಾ ತಮ್ಮ ಸ್ವಕ್ಷೇತ್ರ ಎನಿಸಿದ್ದ ಭವಾನಿಪುರದಿಂದ ಈ ಬಾರಿ ಸ್ಪರ್ಧಿಸದೇ, ನಂದಿಗ್ರಾಮದಿಂದ ಕಣಕ್ಕಿಳಿದಿದ್ದರು. ಕೊನೆಗೂ ಸುವೇಂದು ಅಧಿಕಾರಿಯನ್ನು ಸೋಲಿಸುವ ಮೂಲಕ ಮಮತಾ ಗೆದ್ದು ಬೀಗಿದ್ದಾರೆ.

  • 02 May 2021 04:37 PM (IST)

    ಮಮತಾ ಬ್ಯಾನರ್ಜಿಗೆ ರೋಚಕ ಗೆಲುವು; ವೀರೋಚಿತ ಸೋಲುಂಡ ಸುವೇಂದು ಅಧಿಕಾರಿ

    ನಂದಿಗ್ರಾಮದಲ್ಲಿ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ರೋಚಕ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ 1,200 ಮತಗಳ ಅಂತರದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದಾರೆ.

  • 02 May 2021 04:28 PM (IST)

    ತೃತೀಯ ರಂಗದ ನಾಯಕರಿಂದ ಮಮತಾ ಬ್ಯಾನರ್ಜಿಗೆ ಅಭಿನಂದನೆ

    ಆರ್​ಜೆಡಿ ನಾಯಕ ಲಾಲು ಪ್ರಸಾದ್ ಯಾದವ್, ನ್ಯಾಷನಲ್ ಕಾನ್ಫರೆನ್ಸ್​ನ ಒಮರ್ ಅಬ್ದುಲ್ಲಾ, ಶಿವಸೇನೆಯ ಸಂಜಯ್ ರಾವತ್ ಸೇರಿದಂತೆ ತೃತೀಯ ರಂಗದ ಹಲವು ಹಿರಿಯ ನಾಯಕರು ಮಮತಾ ಬ್ಯಾನರ್ಜಿಯನ್ನು ಅಭಿನಂದಿಸಿದ್ದಾರೆ.

  • 02 May 2021 04:27 PM (IST)

    ಗೆದ್ದವರಿಗೆ ರಾಜನಾಥ್ ಸಿಂಗ್ ಅಭಿನಂದನೆ

    ಪಶ್ಚಿಮ ಬಂಗಾಳದಲ್ಲಿ ಜಯಗಳಿಸಿದ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ, ಕೇರಳದಲ್ಲಿ ಎಲ್​ಡಿಎಫ್ ಮೈತ್ರಿಕೂಟವನ್ನು ಬಹುಮತದತ್ತ ಹೆಜ್ಜೆಹಾಕಿ ದಾಖಲೆ ಬರೆದ ಪಿಣರಾಯಿ ವಿಜಯನ್ ಮತ್ತು ತಮಿಳುನಾಡಿನಲ್ಲಿ ಬಹುಮತ ಸಾಧಿಸಿದ ಡಿಎಂಕೆ ಪಕ್ಷದ ನಾಯಕ ಸ್ಟಾಲಿನ್ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. ವಿಪಕ್ಷಗಳನ್ನು ಅಭಿನಂದಿಸಿ ಟ್ವೀಟ್ ಮಾಡಿದ ಮೊದಲ ಪ್ರಮುಖ ಬಿಜೆಪಿ ನಾಯಕ ರಾಜನಾಥ್​ ಸಿಂಗ್.

  • 02 May 2021 04:06 PM (IST)

    ಟಿಎಂಸಿ 204, ಬಿಜೆಪಿ 80 ಕ್ಷೇತ್ರಗಳಲ್ಲಿ ಮುನ್ನಡೆ

    ಸದ್ಯ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ಗೆ 204 ಕ್ಷೇತ್ರಗಳಲ್ಲಿ ಮುನ್ನಡೆ ದೊರೆತಿದೆ. ಬಿಜೆಪಿ ಒಟ್ಟು 80 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದೆ. ತೃಣಮೂಲ ಕಾಂಗ್ರೆಸ್​ಗೆ ಬಹುಮತ ದೊರೆಯುವುದು ಬಹುತೇಕ ಖಚಿತವಾಗಿದೆ.

  • 02 May 2021 03:59 PM (IST)

    ಮಮತಾ ಬ್ಯಾನರ್ಜಿಗೆ 6 ಮತಗಳ ಹಿನ್ನಡೆ!

    ತೀವ್ರ ಕುತೂಹಲ ಕೆರಳಿಸುತ್ತಿರುವ ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿಗೆ ಮತ್ತೆ ಹಿನ್ನೆಡೆ ಉಂಟಾಗಿದೆ. ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಗೆ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿಗಿಂತ 6 ಮತಗಳ ಮುನ್ನಡೆ ದೊರೆತಿದ್ದು ಇಬ್ಬರ ನಡುವೆಯೂ ತೀವ್ರ ಹಣಾಹಣಿ ನಡೆಯುತ್ತಿದೆ.

  • 02 May 2021 03:39 PM (IST)

    ಚುನಾವಣಾ ಆಯೋಗವೇ ಬಿಜೆಪಿ ಪರವಾಗಿ ಕೆಲಸ ಮಾಡಿತು: ಪ್ರಶಾಂತ್ ಕಿಶೋರ್

    ಚುನಾವಣಾ ಆಯೋಗ ಪಕ್ಷಪಾತ ಧೋರಣೆ ಹೊಂದಿದೆ. ಬೇಕಿದ್ದರೆ ನನ್ನ ಮೇಲೆ ಅವರು ಪ್ರಕರಣ ದಾಖಲಿಸಲಿ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಅವರು ಮಾಡಿದರು. ಎಲ್ಲ ಪಕ್ಷಗಳೂ ಒಗ್ಗೂಡಿ ಚುನಾವಣಾ ಆಯೋಗದ ಸುಧಾರಣೆಗೆ ಆಗ್ರಹಿಸಬೇಕಿದೆ ಎಂದು ಟಿಎಂಸಿ ಚುನಾವಣಾ ಕಾರ್ಯತಂತ್ರ ರೂಪಿಸಿದ ಪ್ರಶಾಂತ್ ಕಿಶೋರ್ ಚುನಾವಣಾ ಆಯೋಗದ ಮೇಲೆಯೇ ಆಪಾದನೆ ಹೊರಿಸಿದ್ದಾರೆ.

  • 02 May 2021 03:22 PM (IST)

    ಕೇರಳ ಆರೋಗ್ಯ ಸಚಿವೆ ಶೈಲಜಾ ಟೀಚರ್​ಗೆ ಗೆಲುವು

    ಕೇರಳ ಆರೋಗ್ಯ ಸಚಿವೆ ಶೈಲಜಾ ಟೀಚರ್​ 61 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

  • 02 May 2021 03:21 PM (IST)

    ಕೇರಳದಲ್ಲಿ ಜೆಡಿಎಸ್​ನ ಓರ್ವ ಅಭ್ಯರ್ಥಿಗೆ ಗೆಲುವು

    ಕೇರಳದ ತಿರುವಲ್ಲಾ ಕ್ಷೇತ್ರದಲ್ಲಿ ಜೆಡಿಎಸ್​ನ ಓರ್ವ ಅಭ್ಯರ್ಥಿ ಮ್ಯಾಥ್ಯೂ ಥಾಮಸ್​ಗೆ ಜಯ ಲಭಿಸಿದೆ.10 ಸಾವಿರ ಮತಗಳ ಅಂತರದಿಂದ ಧಾಮಸ್ ಜಯ ಸಾಧಿಸಿದ್ದಾರೆ.

  • 02 May 2021 03:17 PM (IST)

    ಪಿಣರಾಯಿ ವಿಜಯನ್​ಗೆ ಅಭಿನಂದನೆ ಸಲ್ಲಿಸಿದ ಅರವಿಂದ ಕೇಜ್ರಿವಾಲ್

    ಕೇರಳದಲ್ಲಿ ಎಲ್​ಡಿಎಫ್​ ಗೆಲುವಿನ ನಗೆ ಬೀರಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಟ್ವೀಟ್ ಮಾಡುವ ಮೂಲಕ ಪಿಣರಾಯಿ ವಿಜಯನ್​ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

  • 02 May 2021 03:10 PM (IST)

    ಕೇರಳದಲ್ಲಿ ಮೆಟ್ರೋ ಮ್ಯಾನ್ ಶ್ರೀಧರನ್‌ಗೆ ಸೋಲು

    ಕೇರಳದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಭಾರೀ ನಿರೀಕ್ಷೆ ಮೂಡಿಸಿದ್ದ ಮೆಟ್ರೋ ಮ್ಯಾನ್ ಶ್ರೀಧರನ್‌ಗೆ ಸೋಲಾಗಿದೆ.

  • 02 May 2021 03:09 PM (IST)

    ರಾಜಕೀಯ ಸಲಹೆಗಾರ ಕೆಲಸಕ್ಕೆ ಗುಡ್ ಬೈ ಹೇಳಿದ ಪ್ರಶಾಂತ್ ಕಿಶೋರ್

    ಟಿಎಂಸಿ ಪಕ್ಷದ ಚುನಾವಣಾ ಕಾರ್ಯತಂತ್ರ ರೂಪಿಸಿದ್ದ ಪ್ರಶಾಂತ್ ಕಿಶೋರ್, ರಾಜಕೀಯ ಸಲಹೆಗಾರ ಕೆಲಸಕ್ಕೆ ಗುಡ್ ಬೈ ಹೇಳಿದ್ದಾರೆ.

  • 02 May 2021 03:02 PM (IST)

    ಕೇರಳದಲ್ಲಿ ಉಮನ್ ಚಾಂಡಿಗೆ ಗೆಲುವು

    ಕೇರಳ ವಿಧಾನಸಭಾ ಚುನಾವಣೆಯಲ್ಲಿ ಉಮನ್ ಚಾಂಡಿ ಗೆಲುವು ಸಾಧಿಸಿದ್ದಾರೆ.

  • 02 May 2021 03:01 PM (IST)

    ಮಮತಾ ಬ್ಯಾನರ್ಜಿಗೆ ಗೆಲುವು ಬಹುತೇಕ ಖಚಿತ

    ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿಗೆ ಗೆಲುವು ಬಹುತೇಕ ಖಚಿತವಾಗಿದೆ. ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅಂತಿಮವಾಗಿ ಸೋಲಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಆರಂಭದಿಂದ ಪ್ರಬಲ ಪೈಪೋಟಿ ನೀಡುತ್ತಾ ಮುನ್ನಡೆ ಕಾಯ್ದುಕೊಂಡಿದ್ದ ಸುವೇಂದು ಅಧಿಕಾರಿ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದರೆ, ಏಕಾಏಕಿ ಭಾರೀ ತಿರುವು ಸಿಕ್ಕು ಮಮತಾ ಬ್ಯಾನರ್ಜಿ ಮುನ್ನಡೆ ಸಾಧಿಸಿದರು.

  • 02 May 2021 02:53 PM (IST)

    ಟಿಎಂಸಿ ಅಭ್ಯರ್ಥಿ ಮನೋಜ್ ತಿವಾರಿಗೆ ಗೆಲುವು

    ಪಶ್ಚಿಮ ಬಂಗಾಳದ ಶಿಬಪುರ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಮನೋಜ್ ತಿವಾರಿಗೆ ಗೆಲುವು ಸಾಧಿಸಿದ್ದಾರೆ. ಆರಂಭಿಕ ಹಂತದಲ್ಲಿ ಟಿಎಂಸಿಗೆ ಸಮಬಲವೊಡ್ಡಿದ ಬಿಜೆಪಿ ಭಾರೀ ಪೈಪೋಟಿ ಹುಟ್ಟುಹಾಕುವ ನಿರೀಕ್ಷೆಯಲ್ಲಿತ್ತಾದರೂ ಅಂತಿಮವಾಗಿ ಟಿಎಂಸಿ ಗೆಲುವಿನತ್ತ ಹೆಜ್ಜೆ ಹಾಕುತ್ತಿದೆ.

  • 02 May 2021 01:58 PM (IST)

    ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷಕ್ಕೆ ಮೊದಲ ಗೆಲುವು

    ಈ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷಕ್ಕೆ ಮೊದಲ ಗೆಲುವು ಸಿಕ್ಕಿದೆ. ಉತ್ತರ 24 ಪರಗಣ ಕ್ಷೇತ್ರದಲ್ಲಿ ಟಿಎಂಸಿ ಗೆಲುವು ಸಾಧಿಸಿದೆ.

  • 02 May 2021 01:44 PM (IST)

    ಪುದುಚೇರಿಯಲ್ಲಿ ಅಧಿಕಾರದತ್ತ ಎನ್​ಡಿಎ ಮೈತ್ರಿಕೂಟ

    ಪುದುಚೇರಿಯಲ್ಲಿ ಎನ್​ಡಿಎ ಮೈತ್ರಿ ಕೂಟ ಅಧಿಕಾರದತ್ತ ದಾಪುಗಾಲಿಟ್ಟಿದೆ. 30 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಎನ್​ಡಿಎ ಮುನ್ನಡೆ ಸಾಧಿಸಿದ್ದು, 11 ಕ್ಷೇತ್ರಗಳಲ್ಲಿ ಯುಪಿಎ ಮುನ್ನಡೆ ಕಾಯ್ದುಕೊಂಡಿದೆ.

  • 02 May 2021 01:22 PM (IST)

    ಸಂಭ್ರಮಾಚರಣೆ ಮಾಡಿದರೆ ಎಫ್​ಐಆರ್​ ದಾಖಲಿಸಿ: ಕೇಂದ್ರ ಚುನಾವಣಾ ಆಯೋಗ

    ಚುನಾವಣೆಯಲ್ಲಿ ಗೆದ್ದವರು ಸಂಭ್ರಮಾರಚಣೆ ಮಾಡಿದರೆ FIR​ ದಾಖಲಿಸುವಂತೆ ಎಲ್ಲ ಸಿಎಸ್​ಗಳಿಗೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ. ಕೊರೊನಾ ನಿಯಮಾವಳಿಗಳನ್ನು ಪಾಲಿಸುವ ಸಲುವಾಗಿ ಯಾರೂ ಸಂಭ್ರಮಾಚರಣೆ ಮಾಡುವಂತಿಲ್ಲ. ಮಾಡಿದರೆ ಎಫ್​ಐಆರ್​ ದಾಖಲಿಸಿ ಎಂದು ಕೇಂದ್ರ ಚುನಾವಣಾ ಆಯೋಗದಿಂದ ಕಟ್ಟುನಿಟ್ಟಿನ ಆದೇಶ ಹೊರಬಿದ್ದಿದೆ.

  • 02 May 2021 12:46 PM (IST)

    ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಮುನ್ನಡೆ

    ನಂದಿಗ್ರಾಮದಲ್ಲಿ ಹಿನ್ನಡೆ ಅನುಭವಿಸಿಕೊಂಡು ಬಂದಿದ್ದ ಮಮತಾ ಬ್ಯಾನರ್ಜಿಗೆ ರೋಚಕ ತಿರುವು ಸಿಕ್ಕಿದೆ. ಮಮತಾ ಬ್ಯಾನರ್ಜಿಗೆ 1,500 ಮತಗಳ ಮುನ್ನಡೆ ಸಿಕ್ಕಿದ್ದು, ಸುವೇಂದು ಅಧಿಕಾರಿಯವರನ್ನು ಹಿಂದಿಕ್ಕಿದ್ದಾರೆ.

  • 02 May 2021 12:35 PM (IST)

    ಕೇರಳದಲ್ಲಿ ಕೆ.ಕೆ.ಶೈಲಜಾ 17 ಸಾವಿರ ಮತಗಳಿಂದ ಮುನ್ನಡೆ

    ಕೇರಳದ ಮಟ್ಟನೂರು ಕ್ಷೇತ್ರದಲ್ಲಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ 17 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಶೈಲಜಾ ಟೀಚರ್ ಎಂದೇ ಹೆಸರಾದ ಕೆ.ಕೆ.ಶೈಲಜಾ ಗೆಲುವಿನತ್ತ ಹೆಜ್ಜೆ ಹಾಕಿದ್ದಾರೆ.

  • 02 May 2021 12:05 PM (IST)

    ಪುದುಚೇರಿಯ 2ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು

    ಮೊದಲ ಬಾರಿಗೆ ಪುದುಚೇರಿಯ 2 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಬಿಜೆಪಿ ಪಾಲಿಗೆ ಇದು ಹೊಸ ಬೆಳವಣಿಗೆ ಆಗಿದ್ದು, ಪುದುಚೇರಿಯಲ್ಲಿ ತನ್ನ ಬಲ ಹೆಚ್ಚಿಸಿಕೊಂಡಿದೆ.

  • 02 May 2021 12:02 PM (IST)

    ಮೇ 6ರಂದು ಅಧಿಕಾರ ಸ್ವೀಕರಿಸಲು ಡಿಎಂಕೆ ಸಿದ್ಧತೆ

    ತಮಿಳುನಾಡಿನಲ್ಲಿ ಮೇ 6ರಂದು ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರಲಿದ್ದು, ದಶಕದ ಬಳಿಕ ಅಧಿಕಾರ ಹಿಡಿಯಲಿರುವ ಡಿಎಂಕೆ ಪ್ರಮಾಣವಚನಕ್ಕೆ ಸಿದ್ಧತೆ ಶುರುಮಾಡಿಕೊಂಡಿದೆ.

  • 02 May 2021 11:59 AM (IST)

    ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ರಚನೆ ಬಹುತೇಕ ಖಚಿತ

    ಪಂಚರಾಜ್ಯಗಳ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಕೆಲವೆಡೆ ಸ್ಪಷ್ಟ ಚಿತ್ರಣ ಸಿಗುತ್ತಿದ್ದು ಅಸ್ಸಾಂನಲ್ಲಿ ಬಿಜೆಪಿ ಗದ್ದುಗೆಗೆ ಏರುವುದು ಬಹುತೇಕ ಖಚಿತ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಹೇಳಿದ್ದಾರೆ.

  • 02 May 2021 11:23 AM (IST)

    ತಮಿಳುನಾಡಿನಲ್ಲಿ ಆದೇಶ ಉಲ್ಲಂಘಿಸಿ ಸಂಭ್ರಮಾಚರಣೆಗೆ ಇಳಿದ ಡಿಎಂಕೆ ಕಾರ್ಯಕರ್ತರು

    ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ವಿಜಯದತ್ತ ಮುನ್ನುಗ್ಗುತ್ತಿದ್ದು, ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ಶುರುಮಾಡಿದ್ದಾರೆ. ಸಂಭ್ರಮಾಚರಣೆ ಮಾಡದಂತೆ ಚುನಾವಣಾ ಆಯೋಗ ಆದೇಶ ಮಾಡಿದ್ದರೂ ಚುನಾವಣಾ ಆಯೋಗದ ಆದೇಶ ಉಲ್ಲಂಘಿಸಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.

  • 02 May 2021 11:04 AM (IST)

    ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಗೆಲುವು ಬಹುತೇಕ ಖಚಿತ

    ಭಾರೀ ಕುತೂಹಲ ಮೂಡಿಸಿದ್ದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಗೆಲುವು ಸಾಧಿಸುವ ಸಾಧ್ಯತೆ ಎದ್ದು ಕಾಣುತ್ತಿದೆ. ಕೇಂದ್ರ ಚುನಾವಣಾ ಆಯೋಗದ ವೆಬ್ಸೈಟ್ ಪ್ರಕಾರ ಟಿಎಂಸಿಗೆ 158 ಕ್ಷೇತ್ರದಲ್ಲಿ ಮುನ್ನಡೆ ಸಿಕ್ಕಿದ್ದು, ಬಹುಮತದ ಮ್ಯಾಜಿಕ್ ನಂಬರ್ 148ನ್ನು ಟಿಎಂಸಿ ದಾಟಿದೆ. ಸದ್ಯ ಬಿಜೆಪಿಗೆ 74 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಲಭಿಸಿದೆ.

  • 02 May 2021 10:55 AM (IST)

    ಪಂಚರಾಜ್ಯಗಳ ಒಟ್ಟಾರೆ ಚಿತ್ರಣ

    ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟಕ್ಕೆ ಭಾರಿ ಮುನ್ನಡೆ
    ಕೇರಳದಲ್ಲಿ ಸತತ 2ನೇ ಬಾರಿಗೆ LDFಗೆ ಅಧಿಕಾರ ಸಿಗುವ ಸಾಧ್ಯತೆ
    ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಭಾರಿ ಮುನ್ನಡೆ
    ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಮುನ್ನಡೆ
    ಪುದುಚೆರಿಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಮುನ್ನಡೆ

  • 02 May 2021 10:45 AM (IST)

    ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಶೇ.51ರಷ್ಟು ಮತಗಳು

    ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಭರ್ಜರಿ ಮುನ್ನಡೆ ಸಾಧಿಸುತ್ತಿದ್ದು, ಟಿಎಂಸಿಗೆ ಶೇ.51ರಷ್ಟು ಮತಗಳು ಹಾಗೂ ಬಿಜೆಪಿಗೆ ಶೇಕಡಾ 35ರಷ್ಟು ಮತಗಳು ಲಭಿಸಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

  • 02 May 2021 10:44 AM (IST)

    20 ಕ್ಷೇತ್ರಗಳ ಪೈಕಿ ಬಿಜೆಪಿಗೆ ಒಂದರಲ್ಲಿ ಮಾತ್ರ ಮುನ್ನಡೆ

    ತಮಿಳುನಾಡಿನಲ್ಲಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.

  • 02 May 2021 10:43 AM (IST)

    ತಮಿಳುನಾಡಿನಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡ DMK

    ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಭಾರಿ ಮುನ್ನಡೆ ಕಾಯ್ದುಕೊಂಡಿದೆ. ಇತ್ತ ಡಿಸಿಎಂ ಪನ್ನೀರ್ ಸೆಲ್ವಂ ಹಿನ್ನಡೆ ಅನುಭವಿಸಿದ್ದಾರೆ.

  • 02 May 2021 10:38 AM (IST)

    ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮುನ್ನಡೆ

    ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಟಿಎಂಸಿ 162 ಸ್ಥಾನಗಳೊಂದಿಗೆ ಮುನ್ನಡೆ ಗಳಿಸಿದ್ದು, ಬಿಜೆಪಿ 117 ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ.

  • 02 May 2021 10:22 AM (IST)

    ಕಮಲ್‌ಹಾಸನ್‌ಗೆ ಮುನ್ನಡೆ

    ತಮಿಳುನಾಡಿನ ಕೊಯಂಬತೂರ್ ವಿಧಾನಸಭಾ ಕ್ಷೇತ್ರದಲ್ಲಿ ಕಮಲ್‌ಹಾಸನ್‌ ಮುನ್ನಡೆ ಕಾಯ್ದುಕೊಂಡಿದ್ದಾರೆ.

  • 02 May 2021 10:20 AM (IST)

    ಅರವಕುರುಚಿಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಮಲೈಗೆ ಮುನ್ನಡೆ

    ತಮಿಳುನಾಡಿನ ಅರವಕುರುಚಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಮಲೈ ಮುನ್ನಡೆ ಸಾಧಿಸಿದ್ದಾರೆ.

  • 02 May 2021 10:16 AM (IST)

    ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿಗೆ ಮುನ್ನಡೆ

    ನಂದಿಗ್ರಾಮದಲ್ಲಿ ಮಮತಾ ವಿರುದ್ಧ ಸುವೆಂದು ಅಧಿಕಾರಿ ಮುನ್ನಡೆ ಸಾಧಿಸುತ್ತಿದ್ದಾರೆ. 8,106 ಮತಗಳಿಂದ ಸುವೇಂದು ಅಧಿಕಾರಿ ಮುನ್ನಡೆ ಕಾಯ್ದುಕೊಂಡಿದ್ದು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

  • 02 May 2021 10:12 AM (IST)

    ಪುದುಚೇರಿಯಲ್ಲಿ ಕಾಂಗ್ರೆಸ್ ಮುನ್ನಡೆ

    ಪುದುಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸುತ್ತಿದೆ. 1 ಸ್ಥಾನದ ಮೂಲಕ ಕಾಂಗ್ರೆಸ್ ಮುಂದಿದೆ.

  • 02 May 2021 10:10 AM (IST)

    ಮೆಟ್ರೋಮ್ಯಾನ್ ಇ.ಶ್ರೀಧರನ್‌ಗೆ ಮುನ್ನಡೆ

    ಕೇರಳದ ಪಲಕ್ಕಾಡ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಇ.ಶ್ರೀಧರನ್‌ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮೆಟ್ರೋಮ್ಯಾನ್ ಇ.ಶ್ರೀಧರನ್‌ ಅವರು ಸ್ಪರ್ಧೆಗಿಳಿದ ದಿನದಿಂದಲೂ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದಾರೆ.

  • 02 May 2021 09:52 AM (IST)

    ತಮಿಳುನಾಡಿನ ಸತ್ತೂರು ಮತಎಣಿಕೆ ಕೇಂದ್ರದ ಬಳಿ ಘರ್ಷಣೆ

    ತಮಿಳುನಾಡಿನ ಸತ್ತೂರು ವಿಧಾನಸಭಾ ಕ್ಷೇತ್ರದ ಮತಎಣಿಕೆ ಕೇಂದ್ರದ ಬಳಿ ಎಐಎಡಿಎಂಕೆ ಮತ್ತು ಎಎಂಎಂಕೆ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು ವರದಿಯಾಗಿದೆ. ಅರುಪ್ಪುಕೊಟ್ಟೈ ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ವೈಗೈ ಸೆಲ್ವನ್​ ಅವರು ಈ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದಕ್ಕೆ ಈ ಘರ್ಷಣೆ ನಡೆದಿದ್ದಾಗಿ ಹೇಳಲಾಗಿದೆ.

  • 02 May 2021 09:44 AM (IST)

    ಆಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್​ ಫೈಟ್​

    ಆಸ್ಸಾಂನಲ್ಲಿ ಇಲ್ಲಿಯವರೆಗಿನ ಮತ ಎಣಿಕೆಯಲ್ಲಿ ಬಿಜೆಪಿ ಒಂದು ಸ್ಥಾನ ಹಾಗೂ ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುಂದಿದೆ. ಇಲ್ಲಿ ಬಿಜೆಪಿ-ಕಾಂಗ್ರೆಸ್​ ನಡುವೆ ಸಮಾನ ಫೈಟ್​ ಏರ್ಪಟ್ಟಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

  • 02 May 2021 09:36 AM (IST)

    ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಮುನ್ನಡೆ

    ಪಶ್ಚಿಮಬಂಗಾಳದಲ್ಲಿ ಈ ಬಾರಿ ಸಿಎಂ ಮಮತಾ ಬ್ಯಾನರ್ಜಿ ಸ್ವಕ್ಷೇತ್ರ ಬಿಟ್ಟು ನಂದಿಗ್ರಾಮದಿಂದ ಸ್ಪರ್ಧಿಸಿದ್ದಾರೆ. ಇಂದು ಮತಎಣಿಕೆ ಪ್ರಾರಂಭವಾಗಿದ್ದು, ಈ ಹೊತ್ತಿಗೆ ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿಯವರೇ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಇವರ ಪ್ರತಿಸ್ಪರ್ಧಿ ಸುವೇಂದು ಅಧಿಕಾರಿ. ಇವರು ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಯಾದವರು.

  • 02 May 2021 09:07 AM (IST)

    ಪಶ್ಚಿಮ ಬಂಗಾಳದಲ್ಲಿ ಬಿಜೆಪಿ, ಟಿಎಂಸಿ ಭಾರೀ ಪೈಪೋಟಿ

    ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಟಿಎಂಸಿ ಪಕ್ಷಗಳ ನಡುವೆ ಭಾರೀ ಪೈಪೋಟಿ ಶುರುವಾಗಿದೆ. ಕಳೆದ ಬಾರಿ 3 ಸ್ಥಾನಗಳನ್ನು ಪಡೆದುಕೊಂಡಿದ್ದ ಬಿಜೆಪಿ ಈ ಬಾರಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದೆ. ಬಿಜೆಪಿ 81 ಹಾಗೂ ಟಿಎಂಸಿ 85 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

  • 02 May 2021 08:53 AM (IST)

    ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಹಿನ್ನೆಡೆ

    ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಹಿನ್ನೆಡೆ ಉಂಟಾಗಿದ್ದು, ಸುವೇಂದು ಅಧಿಕಾರಿ ಮುನ್ನಡೆ ಸಾಧಿಸಿದ್ದಾರೆ. ಕಳೆದ ಸುತ್ತಿನಲ್ಲಿ ಮಮತಾ ಬ್ಯಾನರ್ಜಿ ಮುನ್ನಡೆ ಸಾಧಿಸಿದ್ದು, ಈಗ ಮತ್ತೆ ಹಿಂದೆ ಬಿದ್ದಿದ್ದಾರೆ.

  • 02 May 2021 08:51 AM (IST)

    ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ಬಿಗ್​ ಫೈಟ್

    ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 54 ಹಾಗೂ ಟಿಎಂಸಿ 62 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದ್ದು ಎರಡೂ ಪಕ್ಷಗಳ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದೆ.

  • 02 May 2021 08:46 AM (IST)

    ಕೇರಳದಲ್ಲಿ ಬಹುಮತದತ್ತ ಮುನ್ನುಗ್ಗಿದ ಎಲ್‌ಡಿಎಫ್

    ಕೇರಳದಲ್ಲಿ ಎಲ್‌ಡಿಎಫ್ ಬಹುಮತದತ್ತ ಮುನ್ನುಗ್ಗಿದೆ. ಎಲ್‌ಡಿಎಫ್ 76, ಯುಡಿಎಫ್ 54, NDA 2ರಲ್ಲಿ ಮುನ್ನಡೆ ಸಾಧಿಸುತ್ತಿದ್ದು, ಫಲಿತಾಂಶ ಯಾರ ಪರವಾಗಿ ಬರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

  • 02 May 2021 08:31 AM (IST)

    ಕಾಂಗ್ರೆಸ್​ ವಕ್ತಾರರು ಚುನಾವಣೆಗೆ ಸಂಬಂಧಿಸಿದಂತೆ ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ

    ದೇಶ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಅದನ್ನು ನಿಭಾಯಿಸುವಲ್ಲಿ ಮೋದಿ ಸರ್ಕಾರ ಸೋತಿದೆ. ಇಂತಹ ಸಂದರ್ಭದಲ್ಲಿ ಚುನಾವಣೆಯ ಸೋಲು, ಗೆಲುವಿನ ಬಗ್ಗೆ ಚರ್ಚಿಸುವುದು ಸರಿಯಲ್ಲ. ಹೀಗಾಗಿ ಕಾಂಗ್ರೆಸ್ ವಕ್ತಾರರು ಚುನಾವಣಾ ಸಂಬಂಧಿತ ಟಿವಿ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ರಣ್​ದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

  • 02 May 2021 08:10 AM (IST)

    ಪಶ್ಚಿಮ ಬಂಗಾಳದಲ್ಲಿ ಬಿಜೆಪಿ, ಟಿಎಂಸಿ ತಲಾ 1 ಕ್ಷೇತ್ರದಲ್ಲಿ ಮುನ್ನಡೆ

    ಪಶ್ಚಿಮ ಬಂಗಾಳದಲ್ಲಿ ಬಿಜೆಪಿ, ಟಿಎಂಸಿಗೆ ಆರಂಭಿಕ ಮುನ್ನಡೆ ಸಿಕ್ಕಿದೆ. ಟಿಎಂಸಿ, ಬಿಜೆಪಿ ತಲಾ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ.

  • 02 May 2021 08:04 AM (IST)

    ಮತ ಎಣಿಕೆ ಆರಂಭಕ್ಕೆ ಸಕಲ ಸಿದ್ಧತೆ

    ಮತ ಎಣಿಕೆ ಕೇಂದ್ರಗಳಿಗೆ ಸಿಬ್ಬಂದಿ ಆಗಮಿಸಿದ್ದು, ಮತ ಎಣಿಕೆ ಆರಂಭಕ್ಕೆ ಸನ್ನದ್ಧರಾಗಿದ್ದಾರೆ. ಕೊರೊನಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಮತ ಎಣಿಕೆ ಮಾಡಲಾಗುತ್ತಿದ್ದು, ಫಲಿತಾಂಶದ ಬಳಿಕ ಕೇಂದ್ರಗಳ ಬಳಿ ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಲಾಗಿದೆ.

  • 02 May 2021 07:35 AM (IST)

    ಅಸ್ಸಾಂನಲ್ಲಿ ಮತ ಎಣಿಕೆಗೆ ಕ್ಷಣಗಣನೆ

    ಅಸ್ಸಾಂ ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಮತ ಎಣಿಕೆ ಕೇಂದ್ರಗಳಲ್ಲಿ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ.

  • 02 May 2021 07:19 AM (IST)

    ಕೇರಳದಲ್ಲಿ ಮತ ಎಣಿಕೆಗೆ ಕ್ಷಣಗಣನೆ

    ಕೇರಳ ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಮತ ಎಣಿಕೆ ಕೇಂದ್ರಗಳಲ್ಲಿ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ.

  • 02 May 2021 07:11 AM (IST)

    ಮತ ಎಣಿಕೆ ಕೇಂದ್ರ ಪ್ರವೇಶಿಸಲು ಎರಡು ಡೋಸ್ ಕೊರೊನಾ ಲಸಿಕೆ​ ಹಾಕಿಸಿಕೊಂಡಿರಬೇಕು ಮತ್ತು ನೆಗೆಟಿವ್​ ರಿಪೋರ್ಟ್​ ತರಬೇಕು

    ಮತ ಎಣಿಕಾ ಕೇಂದ್ರಕ್ಕೆ ಬರುವ ರಾಜಕೀಯ ಪಕ್ಷಗಳ ಏಜೆಂಟರು, ಕೋವಿಡ್ ನೆಗೆಟಿವ್ ವರದಿ ತರಬೇಕು. ಕೋವಿಡ್ ನೆಗೆಟಿವ್ ವರದಿ ಇಲ್ಲದಿದ್ದರೇ, ಮತ ಎಣಿಕಾ ಕೇಂದ್ರಕ್ಕೆ ಪ್ರವೇಶ ನೀಡಲ್ಲ. ಜೊತೆಗೆ ಕೊರೊನಾದ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿದ್ದರೆ ಮಾತ್ರ ಪ್ರವೇಶ ನೀಡಲಾಗುತ್ತೆ. ಮತಎಣಿಕೆ ಕೇಂದ್ರಗಳ ಬಳಿ ವಿಜಯೋತ್ಸವಕ್ಕೂ ಅವಕಾಶ ಇಲ್ಲ. ಕೊರೊನಾ ಹರಡದಂತೆ ತಡೆಯಲು ಮತಎಣಿಕೆ ಕೇಂದ್ರಗಳ ಬಳಿ ವಿಜಯೋತ್ಸವಕ್ಕೆ ಬ್ರೇಕ್ ಹಾಕಲಾಗಿದೆ.

  • 02 May 2021 07:08 AM (IST)

    ಪುದುಚೇರಿಯಲ್ಲಿ ಅಧಿಕಾರಕ್ಕೆ ಬರಲಿದೆಯೇ ಎನ್​ಡಿಎ?

    ಪುದುಚೇರಿ ವಿಧಾನಸಭೆಗೂ ಏಪ್ರಿಲ್ 6ರಂದೇ ಚುನಾವಣೆ ನಡೆದಿದೆ. ಈ ಬಾರಿ ಪುದುಚೇರಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಪಕ್ಷವು ಕಾಂಗ್ರೆಸ್, ಡಿಎಂಕೆ ಪಕ್ಷದಲ್ಲಿದ್ದ ಶಾಸಕರನ್ನೇ ಚುನಾವಣೆಗೂ ಮುನ್ನ ತನ್ನ ಕಡೆಗೆ ಸೆಳೆದುಕೊಂಡಿದೆ. ಎನ್.ಆರ್‌.ಕಾಂಗ್ರೆಸ್ ಪಕ್ಷದ ರಂಗಸ್ವಾಮಿ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಎನ್‌.ಆರ್.ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆದ್ದರೆ ಎನ್​ಡಿಎಂ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಎಕ್ಸಿಟ್ ಪೋಲ್​ಗಳು ಭವಿಷ್ಯ ನುಡಿದಿವೆ. ಪುದುಚೇರಿಯಲ್ಲಿ ಎನ್​ಡಿಎ ಅಧಿಕಾರಕ್ಕೆ ಬಂದರೆ, ಎನ್‌.ಆರ್‌.ರಂಗಸ್ವಾಮಿ ಸಿಎಂ ಗಾದಿಗೇರಬಹುದು. ಪುದುಚೇರಿ ವಿಧಾನಸಭೆಯಲ್ಲಿ 30 ಸ್ಥಾನಗಳಿದ್ದು, ಮೂವರನ್ನು ನಾಮನಿರ್ದೇಶನ ಮಾಡಲಾಗುತ್ತೆ. ಹೀಗಾಗಿ ಬಹುಮತಕ್ಕೆ 17 ಕ್ಷೇತ್ರಗಳಲ್ಲಿ ಗೆಲುವು ಅಗತ್ಯ.

  • 02 May 2021 07:07 AM (IST)

    ಅಸ್ಸಾಂ ಸಿಎಂ ಯಾರಾಗ್ತಾರೆ?

    ಈಶಾನ್ಯ ಭಾರತದ ಪ್ರಮುಖ ರಾಜ್ಯ ಅಸ್ಸಾಂನ ಚುನಾವಣಾ ಫಲಿತಾಂಶ ಕೂಡ ಇಂದು ಘೋಷಣೆಯಾಗಲಿದೆ. ಈ ಹಿಂದೆ ತರುಣ್ ಗೋಗೋಯಿ ಸತತವಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಆದರೆ, ಇತ್ತೀಚೆಗೆ ತರುಣ್ ಗೋಗೋಯಿ ನಿಧನರಾಗಿದ್ದಾರೆ. ಕಾಂಗ್ರೆಸ್ ಸಿಎಂ ಅಭ್ಯರ್ಥಿಯನ್ನೇ ಘೋಷಿಸಿರಲಿಲ್ಲ. ಬಿಜೆಪಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಅತೀವ ವಿಶ್ವಾಸ ಇದೆ. ಆದರೆ, ಬಿಜೆಪಿಗೆ ಮತ್ತೆ ಬಹುಮತ ಸಿಕ್ಕರೇ, ಸಿಎಂ ಸ್ಥಾನವನ್ನು ಮತ್ತೆ ಸರ್ಬಾನಂದ ಸೋನವಾಲ್ ಗೆ ನೀಡುತ್ತೋ, ಹಿಮಂತ್ ಬಿಸ್ವಾ ಶರ್ಮಾಗೆ ನೀಡುತ್ತೋ ಎಂಬ ಕುತೂಹಲ ಇದೆ. ಅಸ್ಸಾಂನಲ್ಲಿ 126 ಕ್ಷೇತ್ರಗಳಿದ್ದು, ಬಹುಮತಕ್ಕೆ 64 ಕ್ಷೇತ್ರಗಳಲ್ಲಿ ಗೆಲುವು ಅಗತ್ಯ. ಅಸ್ಸಾಂನಲ್ಲಿ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್ ಗಳು ಭವಿಷ್ಯ ನುಡಿದಿವೆ.

  • 02 May 2021 07:05 AM (IST)

    ತಮಿಳುನಾಡಿನಲ್ಲಿ ‘ಸೂರ್ಯೋದಯ’

    ನಮ್ಮ ನೆರೆಯ ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ತಮಿಳುನಾಡಿನ ಬಹುದೊಡ್ಡ ನಾಯಕರೆನಿಸಿದ್ದ ಜೆ.ಜಯಲಲಿತಾ ಮತ್ತು ಕೆ.ಕರುಣಾನಿಧಿ ಇಲ್ಲದೆ ನಡೆದಿರುವ ಮೊದಲ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಚುಕ್ಕಾಣಿ ಯಾರ ಪಾಲಾಗಲಿದೆ ಎನ್ನುವುದು ಇಂದು ನಿರ್ಧಾರವಾಗಲಿದೆ. ದ್ರಾವಿಡರ ನಾಡಿನಲ್ಲಿ ಈ ಬಾರಿಯ ಸೂರ್ಯೋದಯದ ಚಿಹ್ನೆ ಹೊಂದಿರುವ ಡಿಎಂಕೆ ಪಕ್ಷವು ಎರಡೆಲೆ ಚಿಹ್ನೆಯ ಎಐಎಡಿಎಂಕೆ ಪಕ್ಷವನ್ನು ಮಣಿಸಲಿದೆ ಎಂದು ಚುನಾವಣಾ ನಂತರದ ಸಮೀಕ್ಷೆಗಳು ಹೇಳಿವೆ. ಡಿಎಂಕೆ ಅಧಿಕಾರಕ್ಕೆ ಬಂದರೆ, ಎಂ.ಕೆ.ಸ್ಟಾಲಿನ್ ತಮಿಳುನಾಡಿನ ಮುಂದಿನ ಸಿಎಂ ಆಗಲಿದ್ದಾರೆ. ತಮಿಳುನಾಡಿನಲ್ಲಿ ಈ ಬಾರಿ ಖಾತೆ ತೆರೆಯಲು ಬಿಜೆಪಿ ಕೂಡ ಎಐಎಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡು ಹೋರಾಟ ನಡೆಸಿದೆ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಕೆ.ಅಣ್ಣಾಮಲೈ ಅರವೈಕುರುಚಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು, ಅಣ್ಣಾಮಲೈ ರಾಜಕೀಯ ಭವಿಷ್ಯವೂ ಈ ಬಾರಿ ನಿರ್ಧಾರವಾಗಲಿದೆ. ನಟ ಕಮಲಹಾಸನ್ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ನಟಿ ಖುಷ್ಬೂ ಥೌಸಂಡ್ ಲೈಟ್ಸ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ತಮಿಳುನಾಡಿನಲ್ಲಿ ಒಟ್ಟು 234 ಕ್ಷೇತ್ರಗಳಿದ್ದು, ಬಹುಮತಕ್ಕೆ 118 ಕ್ಷೇತ್ರಗಳಲ್ಲಿ ಯಾವುದಾದರೂ ಪಕ್ಷಕ್ಕೆ ಗೆಲುವು ಅನಿವಾರ್ಯ.

  • 02 May 2021 06:57 AM (IST)

    ಪಶ್ಚಿಮ ಬಂಗಾಳದಲ್ಲಿ ಯಾರೇ ಗೆದ್ದರೂ ಇತಿಹಾಸ ನಿರ್ಮಾಣ

    ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ತಮ್ಮ ಜನಪ್ರಿಯತೆ, ಪ್ರತಿಷ್ಠೆಯನ್ನು ಪಣಕ್ಕಿಟ್ಟು ಹೋರಾಟ ನಡೆಸಿದ್ದರು. ಈ ಹೋರಾಟದಲ್ಲಿ ಗೆಲ್ಲುವರಾರು ಎನ್ನುವುದು ಇಂದು ಬಹಿರಂಗವಾಗಲಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯೇ ಗೆಲ್ಲಲಿ, ಟಿಎಂಸಿಯೇ ಗೆಲ್ಲಲಿ ಹೊಸ ಇತಿಹಾಸ ನಿರ್ಮಾಣವಾಗುವುದಂತೂ ಖಚಿತ. ಟಿಎಂಸಿ ಪಕ್ಷ ಗೆದ್ದರೆ, ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಂತೆ ಆಗುತ್ತೆ. ಬಿಜೆಪಿ ಗೆದ್ದರೆ, ಕಳೆದ ಚುನಾವಣೆಯಲ್ಲಿ ಕೇವಲ ಮೂರೇ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದ ಪಕ್ಷ ಈಗ ಬಹುಮತ ಪಡೆದು ಅಧಿಕಾರಕ್ಕೆ ಬಂದಂತೆ ಆಗುತ್ತೆ.

  • 02 May 2021 06:55 AM (IST)

    ಪಶ್ಚಿಮ ಬಂಗಾಳ: ದೀದಿ VS ಮೋದಿ, ಪ್ರಶಾಂತ್ ಕಿಶೋರ್ Vs ಅಮಿತ್ ಶಾ

    ಕಳೆದೊಂದು ತಿಂಗಳಿನಿಂದ ದೇಶದಲ್ಲಿ ಹೆಚ್ಚು ಸದ್ದು ಮಾಡಿದ್ದು ಪಶ್ಚಿಮ ಬಂಗಾಳದ ಚುನಾವಣೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ಹೋರಾಟಕ್ಕಿಂತಲೂ ಹೆಚ್ಚಾಗಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಹೋರಾಟ ನಡೆಯುತ್ತಿರುವಂತೆ ಬಿಂಬಿಸಲಾಯಿತು. ಜನರ ಕಣ್ಣಿಗೆ ಕಾಣಿಸುವಂತಿದ್ದ ಈ ಎರಡೂ ಮುಖಗಳ ಬೆನ್ನಿಗಿದ್ದವರು ಬಿಜೆಪಿಯ ‘ಚಾಣಕ್ಯ’ ಅಮಿತ್ ಶಾ ಮತ್ತು ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್.

  • 02 May 2021 06:52 AM (IST)

    ಪಂಚರಾಜ್ಯಗಳ ಕ್ಷೇತ್ರ ಲೆಕ್ಕಾಚಾರ

    ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕಾಯುತ್ತಿರುವ ಪಂಚ ರಾಜ್ಯಗಳಾದ ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ, ಅಸ್ಸಾಂ, ಕೇರಳದಲ್ಲಿರುವ ವಿಧಾನಸಭಾ ಕ್ಷೇತ್ರಗಳು:

    ಪಶ್ಚಿಮ ಬಂಗಾಳ: 292
    ತಮಿಳುನಾಡು: 234
    ಪುದುಚೇರಿ: 30
    ಅಸ್ಸಾಂ: 126
    ಕೇರಳ: 140

  • 02 May 2021 06:46 AM (IST)

    ಭಾರೀ ಕುತೂಹಲ ಮೂಡಿಸಿದೆ ಚುನಾವಣಾ ಫಲಿತಾಂಶ

    ದೇಶದಲ್ಲಿ ಕೊರೊನಾ ಎರಡನೇ ಅಲೆಯ ನಡುವೆಯೇ ಚುನಾವಣೆ ನಡೆದಿದ್ದು ಇದು ಯಾವ ಪಕ್ಷಗಳ ಮೇಲೆ, ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಕುತೂಹಲ ಜನಸಾಮಾನ್ಯರಲ್ಲಿದೆ. 5 ರಾಜ್ಯಗಳ ರಾಜಕೀಯ ಪರಿಸ್ಥಿತಿಯೂ ಬೇರೆ ಬೇರೆ ಆಗಿದ್ದು, ಎಲ್ಲೆಲ್ಲಿ ಯಾರು ಯಾರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎನ್ನುವುದು ಇಂದು ತಿಳಿದುಬರಲಿದೆ.

ಭಾರತದಲ್ಲಿ ಚುನಾವಣೆಗಳು ಬಂದಾಗ ವಾತಾವರಣವೇ ಬದಲಾಗಿ ಬಿಡುತ್ತದೆ. ಜನಸಾಮಾನ್ಯರ ಬಾಯಲ್ಲೂ ರಾಜಕೀಯದ ಒಳಗುಟ್ಟುಗಳು ಹರಿದಾಡಲಾರಂಭಿಸುತ್ತವೆ. ಚುನಾವಣೆ ದಿನಾಂಕ ನಿಗದಿಯಾಗಿ, ಫಲಿತಾಂಶ ಹೊರಬೀಳುವ ತನಕವೂ ಎಲ್ಲರ ಕಣ್ಣಲ್ಲಿ ಕುತೂಹಲ. ಇಂದು ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮಬಂಗಾಳ, ಪುದುಚೇರಿ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಪಂಚರಾಜ್ಯಗಳಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲು ಅನುಭವಿಸುತ್ತಾರೆ? ಎಂಬ ಸಂಗತಿ ಇಂದು ಬಯಲಾಗಲಿದೆ. ಈ ಮತ ಎಣಿಕೆಗೆ ಸಂಬಂಧಿಸಿದ ಪ್ರತಿ ಕ್ಷಣದ ಅಪ್​ಡೇಟ್ಸ್​ಗಳನ್ನು ಅತ್ಯಂತ ನಿಖರವಾಗಿ ಟಿವಿ9 ಡಿಜಿಟಲ್​ ನಿಮ್ಮ ಮುಂದಿಡಲಿದೆ.

Follow us on