BJP Candidates Second List: ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ; ಇಲ್ಲಿದೆ ವಿವರ

|

Updated on: Apr 13, 2023 | 3:02 PM

ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ್ದ ಬಿಜೆಪಿ ಇದೀಗ ಎರಡನೇ ಪಟ್ಟಿಯನ್ನು ಬುಧವಾರ ರಾತ್ರಿ 11 ಗಂಟೆಗೆ ಬಿಡುಗಡೆ ಮಾಡಿದೆ.

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ್ದ ಬಿಜೆಪಿ (BJP) ಇದೀಗ ಎರಡನೇ ಪಟ್ಟಿಯನ್ನು ಬುಧವಾರ ರಾತ್ರಿ 11 ಗಂಟೆಗೆ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 7 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಒಟ್ಟು 23 ಮಂದಿಗೆ ಟಿಕೆಟ್ ಘೋಷಿಸಲಾಗಿದೆ. ಎರಡನೇ ಪಟ್ಟಿಯಲ್ಲೂ ಮೈಸೂರಿನ ಕೆಆರ್ ಕ್ಷೇತ್ರದ ಟಿಕೆಟ್ ಘೋಷಣೆಯಾಗಿಲ್ಲ. ಇದು ಹಾಲಿ‌ ಶಾಸಕ ಎಸ್​​ಎ ರಾಮದಾಸ್ ಪ್ರತಿನಿಧಿಸುವ ಕ್ಷೇತ್ರವಾಗಿದೆ. ರಾಮದಾಸ್​ಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಅವರ ಬೆಂಬಲಿಗರು ಬುಧವಾರ ವಿಷ ಸೇವಿಸುವ ಯತ್ನವನ್ನೂ ಮಾಡಿದ್ದರು. ಎರಡನೇ ಪಟ್ಟಿಯಲ್ಲೂ ಜಗದೀಶ್ ಶೆಟ್ಟರ್ ಹೆಸರು ಕಂಡುಬಂದಿಲ್ಲ. ಬುಧವಾರವಷ್ಟೇ ಅವರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಯಾಗಿ ಮಾತುಕತೆ ನಡೆಸಿ ಬಂದಿದ್ದರು.

ಎರಡನೇ ಪಟ್ಟಿಯಲ್ಲಿ ಯಾರಿಗೆಲ್ಲ ಬಿಜೆಪಿ ಟಿಕೆಟ್?

ಕ್ಷೇತ್ರ – ಅಭ್ಯರ್ಥಿ

  1. ದೇವರ್ ಹಿಪ್ಪರಗಿ – ಸೋಮನಗೌಡ ಪಾಟೀಲ್ (ಸಾಸನೂರು)
  2. ಬಸವನ ಬಾಗೇವಾಡಿ – ಎಸ್​ಕೆ ಬೆಳ್ಳುಬ್ಬಿ
  3. ಇಂಡಿ – ಕಾಸಗೌಡ ಬಿರದಾರ್ಗು
  4. ರುಮಿಟ್ಕಲ್ – ಲಲಿತ ಅನಾಪುರ್ಬೀ
  5. ದರ್ – ಈಶ್ವರ್ ಸಿಂಗ್ ಠಾಕೂರ್
  6. ಬಾಲ್ಕಿ- ಪ್ರಕಾಶ್ ಖಂಡ್ರೆ
  7. ಗಂಗಾವತಿ – ಪ್ರಸನ್ನ ಮುನವಳ್ಳಿ
  8. ಕಲಘಟಗಿ – ನಾಗರಾಜ್ ಛಬ್ಬಿ
  9. ಹಾನಗಲ್ – ಶಿವರಾಜ್ ಸಜ್ಜನರ್
  10. ಹಾವೇರಿ (ಎಸ್​ಸಿ) – ಗವಿಸಿದ್ದಪ್ಪ ದ್ಯಾಮಣ್ಣನವರ್
  11. ಹರಪ್ಪನಹಳ್ಳಿ – ಕರುಣಾಕರ ರೆಡ್ಡಿ
  12. ದಾವಣಗೆರೆ ಉತ್ತರ – ಲೋಕಿಕೆರೆ ನಾಗರಾಜ್
  13. ದಾವಣಗೆರೆ ದಕ್ಷಿಣ – ಅಜಯ್ ಕುಮಾರ್
  14. ಮಾಯಕೊಂಡ (ಎಸ್​ಸಿ) – ಬಸವರಾಜ ನಾಯ್ಕ್
  15. ಚನ್ನಗಿರಿ – ಶಿವಕುಮಾರ್
  16. ಬೈಂದೂರು – ಗುರುರಾಜ್ ಗಂಟಿಹೊಳೆ
  17. ಮೂಡಿಗೆರೆ (ಎಸ್​ಸಿ) – ದೀಪಕ್ ದೊಡ್ಡಯ್ಯ
  18. ಗುಬ್ಬಿ – ಎಸ್​ಡಿ ದಿಲೀಪ್ ಕುಮಾರ್
  19. ಶಿಡ್ಲಘಟ್ಟ – ರಾಮಚಂದ್ರ ಗೌಡ
  20. ಕೆಜಿಎಫ್ (ಎಸ್​ಸಿ) – ಅಶ್ವಿನಿ ಸಂಪಂಗಿ
  21. ಶ್ರವಣಬೆಳಗೊಳ- ಚಿದಾನಂದ
  22. ಅರಸಿಕೆರೆ- ಜಿವಿ ಬಸವರಾಜು
  23. ಹೆಗ್ಗಡದೇವನಕೋಟೆ- ಕೃಷ್ಣ ನಾಯ್ಕ್

ವಯಸ್ಸಿನ ಕಾರಣಕ್ಕೆ 7 ಹಾಲಿ ಶಾಸಕರಿಗಿಲ್ಲ ಟಿಕೆಟ್

ಎರಡನೇ ಪಟ್ಟಿಯಲ್ಲಿ 7 ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿಲ್ಲ. ಎರಡನೇ ಪಟ್ಟಿಯಲ್ಲೂ ಜಗದೀಶ್ ಶೆಟ್ಟರ್ ಹೆಸರು ಕಂಡುಬಂದಿಲ್ಲ. ಶೆಟ್ಟರ್ ಕ್ಷೇತ್ರದ ಅಭ್ಯರ್ಥಿ ಬಾಕಿ ಇರಿಸಲಾಗಿದೆ. ಕಲಘಟಗಿ ಹಾಲಿ ಶಾಸಕ ನಿಂಬಣ್ಣವರಿಗೆ ಟಿಕೆಟ್ ಮಿಸ್ ಆಗಿದೆ. ಸಚಿವ ಸೋಮಣ್ಣ ಪುತ್ರ ಅರುಣ್ ಸೋಮಣ್ಣಗೆ ಟಿಕೆಟ್‌ ಘೊಷಣೆಯಾಗಿಲ್ಲ. ಅವರು ಗುಬ್ಬಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆ ಕ್ಷೇತ್ರಕ್ಕೆ ಎಸ್​ಡಿ ದಿಲೀಪ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಬೈಂದೂರು ಹಾಲಿ ಶಾಸಕ ಸುಕುಮಾರ್ ಶೆಟ್ಟಿಗೆ ಟಿಕೆಟ್ ನೀಡಿಲ್ಲ. ಬಿಎಸ್‌ವೈ ಸಂಬಂಧಿ ಎನ್‌.ಆರ್‌.ಸಂತೋಷ್‌ ಅವರಿಗೂ ಟಿಕೆಟ್ ನೀಡಿಲ್ಲ. ಇವರು ಅರಸೀಕೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಇದನ್ನೂ ಓದಿ: BJP’s First Candidate List: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; 189 ಮಂದಿಗೆ ಟಿಕೆಟ್, 52 ಮಂದಿ ಹೊಸಬರಿಗೆ ಮಣೆ

ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅಳಿಯನಿಗೆ ಟಿಕೆಟ್

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅಳಿಯ ರಾಮಚಂದ್ರಗೌಡಗೆ ನೀಡಲಾಗಿದೆ. ಸಚಿವ ಡಾ.ಕೆ.ಸುಧಾಕರ್ ಮನವಿ ಮೆರೆಗೆ ರಾಮಚಂದ್ರಗೌಡಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ರಾಮಚಂದ್ರಗೌಡ ಉದ್ಯಮಿ ಹಾಗೂ ಸಿವಿಲ್ ಇಂಜಿಯರ್ ಗುತ್ತಿಗೆದಾರರಾಗಿದ್ದಾರೆ. ರಾಮಚಂದ್ರಗೌಡ ಅವರ ತಮ್ಮ ಆನದಂದ್​ಗೆ ಜಿಟಿಡಿ ಮಗಳನ್ನು ವಿವಾಹವಾಗಿದ್ದಾರೆ.

ಬಿಜೆಪಿ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿತ್ತು. ಮೊದಲ ಪಟ್ಟಿಯಲ್ಲಿ 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿತ್ತು. 52 ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿತ್ತು. ಒಬಿಸಿಯ 32, ಎಸ್​ಸಿ 30, ಎಸ್​ಟಿ 16 ಹಾಗೂ 9 ವೈದ್ಯರು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಟಿಕೆಟ್ ನೀಡಲಾಗಿತ್ತು. 8 ಮಂದಿ ಮಹಿಳೆಯರು, ಐವರು ವಕೀಲರು, ಮೂವರು ಶಿಕ್ಷಕರು, 9 ಸ್ನಾತಕೋತ್ತರ ಪದವೀಧರರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಲಾಗಿತ್ತು.

ಮೊದಲ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿತ್ತು. ಹಲವೆಡೆ ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ ಹಾಗೂ ಕೆಲವು ಕಡೆ ಟಿಕೆಟ್ ವಂಚಿತರು ಪಕ್ಷೇತರರಾಗಿ ಸ್ಪರ್ಧಿಸುವ ಸುಳಿವು ದೊರೆತಿದ್ದರಿಂದ ಅತೃಪ್ತರನ್ನು ಶಮನಗೊಳಿಸಲು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಅರುಣ್ ಸಿಂಗ್ ಬುಧವಾರ ರಾತ್ರಿ ರಾಜ್ಯಕ್ಕೆ ಬಂದಿದ್ದಾರೆ. ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಂತೆಯೇ ಎರಡನೇ ಪಟ್ಟಿ ರಿಲೀಸ್ ಆಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 11:10 pm, Wed, 12 April 23